ನಂದಿನಿ ಹಾಲಿನ ದರ 4 ರೂಪಾಯಿ ಏರಿಕೆ?
ಕಳೆದ ವರ್ಷದಲ್ಲಿ ಎರೆಡೆರಡು ಬಾರಿ ಬೆಲೆ ಏರಿಕೆ ಮಾಡಲಾಗಿತ್ತು. ನಂದಿನಿ ಹಾಲಿನ ದರವನ್ನು ಲೀಟರ್ ವೊಂದಕ್ಕೆ ಮೂರು ರೂಪಾಯಿಂದ ಐದು ರೂಪಾಯಿಗೆ ಏರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಕೆಎಂಎಫ್ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ಸೋಮವಾರ (ಜ.21) ನಡೆದ ಕೆಎಂಎಫ್ ಆಡಳಿತ ಮಂಡಳಿಯ 237ನೇ ಮಹಾಮಂಡಳ ಸಭೆಯಲ್ಲಿ ಹಾಲಿನ ದರ ಏರಿಕೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ನಿರ್ಧಾರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. ನೂತನ ದರ ಪಟ್ಟಿ ಫೆ.1 ರಿಂದ ಜಾರಿಗೆ ಬರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಧರಣಿ: ಕೆಎಂಎಫ್ ನಷ್ಟದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು, ರೈತರಿಗೆ ಸರಿಯಾದ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸೋಮವಾರ (ಜ.21) ಕೆಎಂಎಫ್ ಕೇಂದ್ರ ಕಚೇರಿ ಎದುರು ಧರಣಿ ನಡೆಸಲಾಗಿದೆ.
ಬೆಲೆ ಏರಿಕೆ ಕುರಿತು ಜೂ.27 ರಂದು ನಡೆದ ಕರ್ನಾಟಕ ರಾಜ್ಯ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ನಂದಿನಿ ಹಾಲು(ಸಾಮಾನ್ಯ ದರ ಲೀಟರ್ ಗೆ 24 ರು ಇದೆ)) ಲೀಟರ್ ಗೆ 3 ರು ನಿಂದ 5 ರು ಗಳಿಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು.
ದರ ಏರಿಕೆಗೆ ಕಾರಣ ಏನು?: ಮೇವು ಮತ್ತು ಇತರ ವಸ್ತುಗಳ ಕೊರತೆ ಮತ್ತು ಬೆಲೆ ಏರಿಕೆಯಿಂದಾಗಿ ಉತ್ಪಾದನಾ ವೆಚ್ಚ ಹೆಚ್ಚಳವಾಗಿದೆ. ರೈತರಿಗೆ ವೈಜ್ಞಾನಿಕ ದರ ನಿಗದಿ ಮಾಡಬೇಕಿದೆ ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಆದರೆ, ಮುಂಬರುವ ಚುನಾವಣೆ ದೃಷ್ಟಿಯಿಂದ ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾಪ ಬಹುಮುಖ್ಯವಾಗುವ ಸಾಧ್ಯತೆಯಿದೆ. ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ತಟ್ಟಲಿದ್ದು, ಅದರ ನೇರ ಕೋಪ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ತಿರುಗುವಂತೆ ಮಾಡುವುದು ಸೋಮಶೇಖರ್ ರೆಡ್ಡಿ ಇಂಗಿತ ಎನ್ನಲಾಗಿದೆ.
ಕರ್ನಾಟಕ ಹಾಲು ಫೆಡರೇಶನ್ (ಕೆಎಂಎಫ್) ತನ್ನ ಮಾರಾಟದ ದ್ರವೀಕೃತ ಹಾಲು ಮಾರಾಟದ ಗುರಿ ಶೇ 20ರಷ್ಟು ಹೆಚ್ಚಿಸಿಕೊಂಡಿದೆ ಎಂದು ಕೆಎಂಎಫ್(ಮಾರುಕಟ್ಟೆ) ವಿಭಾಗದ ಮುಖ್ಯಸ್ಥ ಡಿ ಶ್ರೀನಾಥ್ ಹೇಳಿದ್ದಾರೆ. ಈಗ ದಿನನಿತ್ಯ 4ರಿಂದ 5 ಲಕ್ಷ ಲೀಟರ್ ಹಾಲು ಹೆಚ್ಚು ಉಳಿಕೆಯಾಗುತ್ತಿತ್ತು, ಖರೀದಿಯಲ್ಲಾಗಿರುವ ಅನಿರೀಕ್ಷಿತ ಬೆಳವಣಿಗೆಯಿಂದ 14 ಲಕ್ಷ ಲೀಟರ್ ಹಾಲು ಒಂದೆಡೆ ಶೇಖರಣೆಯಾಗುತ್ತಿದೆ. ಕಳೆದ ವರ್ಷ ಈ ಹೊತ್ತಿಗೆ 43 ಲಕ್ಷ ಕಿಲೋ ಹಾಲು ಖರೀದಿ ಮಾಡಲಾಗುತ್ತಿದ್ದರೆ, ಈಗ 52 ಲಕ್ಷ ಕಿಲೋಗೆ ಹೆಚ್ಚಿದೆ ಎಂದು ಫೆಡರೇಶನ್ ವರದಿ ಮಾಡಿದೆ.
ನಂದಿನಿ ಹಾಲು ದರವನ್ನು ಹೆಚ್ಚಳ ಮಾಡುವಂತೆ ಹಾಲು ಉತ್ಪಾದಕರು ಇಟ್ಟ ಬೇಡಿಕೆಗೆ ಹಾಲು ಒಕ್ಕೂಟಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಸಕಾರಾತ್ಮಕವಾಗಿ ಸ್ಪಂದಿಸಿದ ಶೆಟ್ಟರ್, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದರು.