ಆಸ್ತಿ ತೆರಿಗೆ ನೋಟಿಸ್ ಗೆ ವಿಪ್ರೋ ಉತ್ತರಿಸಿಲ್ಲ
ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ಗೆ ಸರಿಯಾಗಿ ಉತ್ತರಿಸಿದ ವಿಪ್ರೋ, ನಾವು ತೆರಿಗೆ ಬಾಕಿ ಉಳಿಸಿಕೊಂಡಿಲ್ಲ. ಎಲ್ಲಾ ತೆರಿಗೆ ಕಟ್ಟಿದ್ದೇವೆ ಎಂದು ಹೇಳಿಕೆ ನೀಡಿದೆ.
ಕೆ.ಆರ್. ಹೋಬಳಿಯ ದೊಡ್ಡಕನ್ನೆಲ್ಲಿ ಗ್ರಾಮದಲ್ಲಿರುವ ವಿಪ್ರೋ ಕೇಂದ್ರ ಕಚೇರಿ ಜಾಗಕ್ಕೆ ಪ್ರತಿ ಚದರ ಅಡಿಗೆ 20 ರು. ನಂತೆ ತೆರಿಗೆ ಕಟ್ಟುವಂತೆ ವಿಪ್ರೋ ಸಂಸ್ಥೆಗೆ ಬಿಬಿಎಂಪಿ ಸೂಚಿಸಿತ್ತು.
ಆದರೆ, 2008-09 ನಿಂದ 2012-13ರವರೆಗಿನ ಲೆಕ್ಕಾಚಾರದಂತೆ ವಿಪ್ರೋ ಸಂಸ್ಥೆ 19,28,50,815 ಮೊತ್ತ ಬಾಕಿ ಉಳಿಸಿಕೊಂಡಿದೆ. ಪ್ರತಿ ತಿಂಗಳಿಗೆ ಶೇ 2 ರಷ್ಟು ಬಡ್ಡಿದರದಂತೆ ಬಾಕಿ ಮೊತ್ತ ಪಾವತಿಸಬೇಕಿದೆ ಎಂದು ಬಿಬಿಎಂಪಿ ಹೇಳಿದೆ.
ಆದರೆ, ಬಿಬಿಎಂಪಿ ನೋಟಿಸ್ ಗೆ ತಕ್ಕ ಉತ್ತರ ನೀಡಿರುವ ವಿಪ್ರೋ ಸಂಸ್ಥೆ ಮುಖ್ಯ ಆರ್ಥಿಕ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಸೇನಾಪತಿ, ತೆರಿಗೆ ಗೊಂದಲ ಉಂಟಾಗಿರುವ ವಿಪ್ರೋ ಕೇಂದ್ರ ಇರುವುದು ವಿಶೇಷ ಆರ್ಥಿಕ ವಲಯ(SEZ)ದಲ್ಲಿ, ಹಾಗೂ ಅಲ್ಲಿ ಅನೇಕರಿಗೆ ಮಾಹಿತಿ ಮತ್ತು ತಂತ್ರಜ್ಞಾನ ಸೇವೆ ಒದಗಿಸಲಾಗುತ್ತಿದೆ.
ಎಲ್ಲಾ ರೀತಿಯ ತೆರಿಗೆಗಳನ್ನು ಪಾವತಿಸಲಾಗಿದೆ. ಆದರೆ, ಬಿಬಿಎಂಪಿ ಅವರು ಇನ್ನೂ ಹೆಚ್ಚಿನ ಮೊತ್ತ ಪಾವತಿಸಿ ಎಂದು ಏಕೆ ಕೇಳುತ್ತಿದ್ದಾರೋ ಗೊತ್ತಿಲ್ಲ. ಬಿಬಿಎಂಪಿ ಕಂದಾಯ ವಿಭಾಗದವರೊಂದಿಗೆ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.
ತಮಟೆ ಬಡಿತಕ್ಕೆ 5 ಕೋಟಿ ರು : ಕಳೆದ 5 ವರ್ಷಗಳಿಂದ ತೆರಿಗೆ ಪಾವತಿಸದೆ ಸತಾಯಿಸುತ್ತಿದ್ದ ವಿಪ್ರೋ ಸಂಸ್ಥೆ ಮುಂದೆ ಬಿಬಿಎಂಪಿ ಕಡೆಯಿಂದ ತಮಟೆ ಬಾರಿಸಿ ಎಚ್ಚರಿಸಲಾಯಿತು. ನಂತರ ವಿಪ್ರೋ ಕಂಪನಿ ಅಧಿಕಾರಿಗಳು ಬಾಕಿ ಉಳಿದಿರುವ 19.28 ಕೋಟಿ ರು. ನಲ್ಲಿ, 5.00 ಕೋಟಿ ರೂ ಚೆಕ್ ನೀಡಿದರು. ಉಳಿದ ಮೊತ್ತವನ್ನು ಪಾವತಿಸಲು ಒಂದು ವಾರ ಕಾಲಾವಕಾಶ ಕೋರಿದ್ದರು. ಆದರೆ, ಈಗ ಬಾಕಿ ಮೊತ್ತದ ಬಗ್ಗೆ ಸಮರ್ಪಕ ಉತ್ತರ ನೀಡಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ 2010 ರಲ್ಲಿ ಕೃಷ್ಣರಾಜ ಪುರಂ ಹೋಬಳಿಯ ಬೆಳ್ಳಂದೂರು ಕೆರೆಯ ಬಳಿ ಇರುವ ಕೆಂಪಾಪುರದಲ್ಲಿ ಅಜೀಂ ಪ್ರೇಮ್ ಜಿ ಅವರು 23 ಗುಂಟ ಸರ್ಕಾರಿ ಜಾಗವನ್ನು ಅಕ್ರಮವಾಗಿ ಕಬಳಿಸಿದ್ದಾರೆ. ಎ ಟಿ ರಾಮಸ್ವಾಮಿ ಸಮಿತಿ ನಡೆಸಿದ ತನಿಖೆಯಿಂದ ಅಕ್ರಮ ಬಹಿರಂಗಗೊಂಡಿದೆ. ವಿಪ್ರೋ ಮೇಲೆ ಕ್ರಮ ಜರುಗಿಸಿ ಎಂದು ವಕೀಲ ಸಂತೋಷ್ ಎಂಬುವರು ಪ್ರೇಂಜಿ ವಿರುದ್ಧ ದೂರು ಸಲ್ಲಿಸಿದ್ದರು.
ಆದರೆ, 2007ರಲ್ಲಿ ಕೆಲವೊಂದು ಉದ್ದೇಶಕ್ಕಾಗಿ 15 ಎಕರೆ ಭೂಮಿಯನ್ನು ಅಜೀಂ ಪ್ರೇಮ್ ಜೀ ಅವರು ಸ್ವಾಧೀನಪಡಿಸಿಕೊಂಡಿದ್ದರು. ಅದರಲ್ಲಿ 23 ಗುಂಟೆ ಜಮೀನು ಹೆಚ್ಚುವರಿಯಾಗಿ ಬಂದಿದ್ದರಿಂದ ಅದೇ ಸಾಲಿನಲ್ಲಿ ಹೆಚ್ಚುವರಿ ಜಮೀನನ್ನು ಸರ್ಕಾರಕ್ಕೆ ವಾಪಸ್ ಮಾಡಿದ್ದರು ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ವಕೀಲ ಸಂತೋಷ್ ಗೆ ಛೀಮಾರಿ ಹಾಕಿ ದಂಡ ವಿಧಿಸಲಾಗಿತ್ತು.