ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.28, 29 ಬಾಲಗಂಗಾಧರನಾಥ ಸ್ವಾಮೀಜಿ ಸಂಸ್ಮರಣೆ

By Mahesh
|
Google Oneindia Kannada News

Nirmalanandanatha Swamiji
ಮಂಡ್ಯ, ಜ.20: ನಾಥ ಪಂಥದ ಮಹಾನ್ ಗುರು ಆದಿಚುಂಚನಗಿರಿ ಮಠದ ಡಾ.ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಸ್ಮರಣಾರ್ಥ ಆದಿಚುಂಚನಗಿರಿಯಲ್ಲಿ ಜ.28 ಹಾಗೂ 29 ರಂದು 'ಸಂತ ಸಂಗಮ' ಎಂಬ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆದಿಚುಂಚನಗಿರಿಮಠದ ನೂತನ ಗುರುಗಳಾದ ಶ್ರೀನಿರ್ಮಲಾನಂದ ಅವರು ಹೇಳಿದ್ದಾರೆ.

ಬಾಲಗಂಗಾಧರನಾಥ ಸ್ವಾಮೀಜಿ ಸಂಸ್ಮರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಸ್ವಾಮೀಜಿಗಳ ಸಮಾಧಿಗೆ ಮೂರು ಸುತ್ತಿನ ಚಿನ್ನದ ಲೇಪನ ಮಾಡಲಾಗುತ್ತದೆ. ಸಮಾಧಿ ನಿರ್ಮಾಣಕ್ಕೆ ಸುಮಾರು 10 ಕೋಟಿ ರು ವೆಚ್ಚ ಮಾಡಲಾಗುತ್ತಿದೆ ಎಂದು ನಿರ್ಮಲಾನಂಥನಾಥ ಸ್ವಾಮೀಜಿ ಹೇಳಿದರು.

ಆರ್ ಅಶೋಕ್ ಹೇಳಿಕೆ: ಶ್ರೀಬಾಲಗಂಗಾಧರನಾಥರು ಮಠಾಧೀಶರಾಗಿ 38 ವರ್ಷಗಳ ಕಾಲ ಸಮಾಜಕ್ಕೆ ನೀಡಿದ ಸಾಧನೆಗಳನ್ನು ಈ ಎರಡು ದಿನಗಳ ವಿಶಿಷ್ಟ ಕಾರ್ಯಕ್ರಮದ ಮೂಲಕ ಭಕ್ತವೃಂದಕ್ಕೆ ಪರಿಚಯಿಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಹೇಳಿದರು.

ಶ್ರೀನಿರ್ಮಲಾನಂದ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸುಮಾರು 10 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಬರುವ ನಿರೀಕ್ಷೆ ಇದೆ ಎನ್ನಲಾಗಿದೆ.

ಬಾಲಗಂಗಾಧರನಾಥ ಸ್ವಾಮೀಜಿ ಅವರ ಆಧ್ಯಾತ್ಮಿಕ ಜೀವನದ ವಸ್ತುಪ್ರದರ್ಶನ, ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಸೇರಿದಂತೆ ಇನ್ನಿತರ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ನೆರವೇರಲಿವೆ. ಜತೆಗೆ ಶ್ರೀಗಳ ಪುಣ್ಯತಿಥಿಯೂ ವಿಧಿ-ವಿಧಾನೋಕ್ತವಾಗಿ ಜರುಗಲಿದೆ.

ಸೂಚನೆ: ಸ್ವಾಮೀಜಿಗಳ ವೈವಿಧ್ಯಮಯ ಸೇವೆಯನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳು ಬಳಿ ಇದ್ದರೆ ತಪ್ಪದೆ ಶ್ರೀಮಠಕ್ಕೆ ಕಳುಹಿಸುವಂತೆ ಕೋರಲಾಗಿದೆ. ವಸ್ತು ಪ್ರದರ್ಶನ ಸಂದರ್ಭದಲ್ಲಿ ಫೋಟೊ ದಾನಿಗಳ ಹೆಸರು, ವಿಳಾಸ ಪ್ರಕಟಿಸಲಾಗುವುದು.

ಛಾಯಾಚಿತ್ರಗಳನ್ನು ಕಳುಹಿಸಬೇಕಾದ ವಿಳಾಸ: ಶ್ರೀಆದಿಚುಂಚನಗಿರಿ ಮಠ, ವಿಜಯನಗರ, ಬೆಂಗಳೂರು -560 040
ಇಮೇಲ್: [email protected], ಫೋಟೋ ಕಳಿಸಲು ಕೊನೆ ದಿನಾಂಕ 22/01/2013

ಸ್ವಾಮೀಜಿ ಅವರು ದೈವಾಧೀನರಾದ ವೇಳೆ ಪಾರ್ಥೀವ ಶರೀರದ ಅಂತಿಮ ದರ್ಶನದ ಭಾಗ್ಯ ಸಿಗದ ದೇಶ-ವಿದೇಶದ ಬಹಳಷ್ಟು ಭಕ್ತರು ಅಂದಿನ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.

ಸ್ವಾಮೀಜಿ ಅವರು ಕೊನೆಯ ಉಸಿರಿರುವವರೆಗೂ ಮಠ, ಸಮಾಜ ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಚಿಂತನೆ ನಡೆಸುತ್ತಿದ್ದ ಮಹಾನ್ ಚೇತನ ಎಂದು ಗುಣಗಾನ ಮಾಡಿದ್ದಾರೆ. ಸ್ವಾಮೀಜಿಯವರ ಕೊನೆಯ ದಿನಗಳಲ್ಲಿ ನಾನು ಅವರನ್ನು ಭೇಟಿ ಮಾಡಲು ಹೋಗಿದ್ದೆ.

ಆ ಸಂದರ್ಭದಲ್ಲಿ ಸ್ವಾಮೀಜಿ, ಮಠದ ವಿಚಾರ, ಸಮಾಜದಲ್ಲಿರುವ ಸಾಮಾನ್ಯ ಜನರ ಬದುಕು ಹಾಗೂ ಮಕ್ಕಳ ಶಿಕ್ಷಣವನ್ನು ಹೊರತುಪಡಿಸಿ ಬೇರೆ ಯಾವ ವಿಚಾರವನ್ನೂ ಪ್ರಸ್ತಾಪಿಸಲಿಲ್ಲ. ಇದರಿಂದಾಗಿ ಸ್ವಾಮೀಜಿ ಅವರ ಸಾಮಾಜಿಕ ಕಳಕಳಿ ಹಾಗೂ ಮಕ್ಕಳ ಮೇಲಿನ ಪ್ರೀತಿ ಎಷ್ಟೆಂಬುದು ಅರ್ಥವಾಗುತ್ತದೆ ಎನ್ನುತ್ತಾ ಸ್ವಾಮೀಜಿ ಅವರೊಂದಿಗೆ ಕಳೆದ ಕಡೆಯ ಕ್ಷಣಗಳನ್ನು ಸ್ಮರಿಸಿ ಭಾವುಕರಾದರು.

ಸಭೆಯಲ್ಲಿ ಸಮಾಜದ ಮುಖಂಡರಾದ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಎಚ್. ಡಿ. ಕುಮಾರಸ್ವಾಮಿ, ಸಂಸದ ಚೆಲುವರಾಯಸ್ವಾಮಿ, ಸಚಿವ ಜೀವರಾಜ್, ಸಿ.ಪಿ. ಯೋಗೀಶ್ವರ್, ಸಿ.ಟಿ. ರವಿ, ನಟ ಅಂಬರೀಶ್, ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಎಚ್.ಎನ್. ಕೃಷ್ಣ, ಗೃಹಮಂಡಳಿ ಅಧ್ಯಕ್ಷ ಜಿ.ಟಿ.
ದೇವೇಗೌಡ, ಶಾಸಕರಾದ ಎಚ್.ಸಿ. ಬಾಲಕೃಷ್ಣ, ಎಂ.ಕೃಷ್ಣಪ್ಪ, ಸಿ.ಎಸ್. ಪುಟ್ಟರಾಜು, ಅಶ್ವತ್ಥನಾರಾಯಣ, ಕೆ.ರಾಜು, ರಮೇಶ್ ಬಂಡಿ ಸಿದ್ದೇಗೌಡ, ವಿಧಾನಪರಿಷತ್ ಸದಸ್ಯ ರಾಮಕೃಷ್ಣ, ಅಶ್ವತ್ಥನಾರಾಯಣ್, ವಿಧಾನಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯ, ಕರವೇ ಅಧ್ಯಕ್ಷ ಟಿ.ನಾರಾಯಣಗೌಡ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.

English summary
72nd Mathadhipathi of the Adichunchanagiri math Nirmalanandanatha Swamiji, successor to Balagangadharanatha Swamiji said Srimath has decided to build the memorial with three gold-coated tombs at a cost of Rs 10 Cr. BGS Memorial program organised on Jan 28 and 29, more than 10 Lakhs public likely to attend the program
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X