ಬಿಜೆಪಿಗೆ ಈಗ ಗಾಲಿ ರೆಡ್ಡಿಗಳು ನೆನಪಾದ್ರಾ?
ಇಷ್ಟು ದಿನದ ಮೇಲೆ ಗಾಲಿ ಜನಾರ್ದನ ರೆಡ್ಡಿ ಅವರ ಇರುವಿಕೆ ಬಗ್ಗೆ ಬಿಜೆಪಿಗೆ ತಿಳಿಯಿತೇ? ಸಂಧಾನ, ಮಾತುಕತೆ ಕಾಲ ಮುಗಿದಿದೆ. ನಾನು ಬಿಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವುದು ಖಚಿತ. ಆದರೆ, ಜನಾರ್ದನ ರೆಡ್ಡಿ ಅವರದ್ದು ತೆಗೆದುಕೊಳ್ಳುವ ನಿರ್ಣಯ ಅಂತಿಮವಾಗಿರುತ್ತದೆ. ಸದ್ಯಕ್ಕಂತೂ ನಾವು ಬಿಜೆಪಿಯಲ್ಲೇ ಇದ್ದೇವೆ ಎಂದು ಬಳ್ಳಾರಿಯಲ್ಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಈ ನಡುವೆ ಸಚಿವ ಬೆಳ್ಳುಬ್ಬಿ ಭೇಟಿ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀರಾಮುಲು, 'ಬಿಜೆಪಿಗೆ ಜನಾರ್ದನ ರೆಡ್ಡಿ ಕೊಡುಗೆ ಅಪಾರ. ಸಚಿವ ಎಸ್ಕೆ ಬೆಳ್ಳುಬ್ಬಿ ಅವರು ಋಣ ತೀರಿಸಲು ಗಾಲಿ ರೆಡ್ಡಿ ಅವರನ್ನು ಭೇಟಿ ಮಾಡಿರಬೇಕು. ಆದರೂ, ಕುತಂತ್ರದಿಂದ ಗಾಲಿ ರೆಡ್ಡಿ ಅವರನ್ನು ಜೈಲಿಗೆ ಕಳುಹಿಸಲಾಗಿದೆ' ಎಂದು ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶ್ರೀರಾಮುಲು ಅವರು ಕಿಡಿಕಾರಿದ್ದಾರೆ.
ಜಗದೀಶ್ ಶೆಟ್ಟರ್ ಸರ್ಕಾರದ ಕೃಷಿ ಮಾರುಕಟ್ಟೆ ಸಚಿವ ಎಸ್.ಕೆ. ಬೆಳ್ಳುಬ್ಬಿ ಶನಿವಾರ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ ಒಂದು ಗಂಟೆಗೂ ಹೆಚ್ಚುಕಾಲ ವಿಸ್ತೃತವಾಗಿ ಪ್ರಚಲಿತ ರಾಜಕೀಯ ವಿದ್ಯಮಾನಗಳನ್ನು ಚರ್ಚಿಸಿದ್ದರು. ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ವಿಶೇಷವಾಗಿ ಚರ್ಚಿಸಿದರು ಎನ್ನಲಾಗಿತ್ತು.
ಬಿಜೆಪಿ ಹಿರಿಯ ಮುಖಂಡ ರಾಜ್ ನಾಥ್ ಸಿಂಗ್ ಅವರ ಅಣತಿಯಂತೆ ನಾನು ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿದ್ದೇನೆ. ರೆಡ್ಡಿ ಸೋದರರನ್ನು ಬಿಜೆಪಿಯಲ್ಲೆ ಉಳಿಸಿಕೊಳ್ಳುವುದು ನಮ್ಮ ಆದ್ಯತೆ ಎಂದು ಬೆಳ್ಳುಬ್ಬಿ ಹೇಳಿದ್ದರು.
2009ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರು ಸರ್ಕಾರದ ವಿರುದ್ಧ ಬಂಡಾಯದ ಧ್ವನಿ ಎತ್ತಿದಾಗ, ಬೆಳ್ಳುಬ್ಬಿಯವರು ರೆಡ್ಡಿಯ ಪಾಳಯದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು.
ಶೀಘ್ರದಲ್ಲಿ ರಾಜ್ಯ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಸಚಿವ ಬೆಳ್ಳುಬ್ಬಿ, ಜನಾರ್ದನ ರೆಡ್ಡಿ ಭೇಟಿಯು ಹಲವಾರು ರಾಜಕೀಯ ಚರ್ಚೆಗಳಿಗೆ ಗ್ರಾಸವಾಗಿದ್ದು, ಬೆಳ್ಳುಬ್ಬಿಯವರ ಈ ನಡೆ ಬಿಎಸ್ಆರ್ ಪಕ್ಷದತ್ತ ಎನ್ನುವ ಸಾಧ್ಯತೆಗಳನ್ನು ತಳ್ಳಿಹಾಕುವುದಿಲ್ಲ.