5ಲಕ್ಷ ತಿಮ್ಮಪ್ಪನ ಹುಂಡಿಗೆ ಹಾಕಿದೆ: ಪೇದೆ ಮಂಜುನಾಥ
ಸೆಪ್ಟೆಂಬರ್ 6ರ ಗುರುವಾರ ಸಂಜೆ ತನ್ನ ಮೇಲಧಿಕಾರಿ ಇನ್ಸ್ಪೆಕ್ಟರ್ ಎಂ ಪುರುಷೋತ್ತಮ್ ಜತೆ 5 ಲಕ್ಷ ರೂ. ಲಂಚದ ಹಣದೊಂದಿಗೆ ಪರಾರಿಯಾಗಿದ್ದ ಮಂಜುನಾಥ, ಕೊನೆಗೂ ಜ 4ರಂದು ಲೋಕಾಯುಕ್ತ ಕೋರ್ಟಿಗೆ ಶರಣಾಗಿದ್ದ. ಅಲ್ಲಿಂದೀಚೆಗೆ ಪೇದೆ ಮಂಜುನಾಥನ ವಿಚಾರಣೆ ನಡೆಸಿದ ಲೋಕಾಯುಕ್ತ ಪೊಲೀಸರ ಮುಂದೆ ಆತ ಸರಿಯಾಗಿಯೇ 'ಪಿಪಿ' ಊದಿದ್ದಾನೆ.
'ನೋಡಿ, ನಾನು ತೆಗೆದುಕೊಂಡು ಹೋದ ಆ ಲಂಚದ ಹಣದಲ್ಲಿ ಸ್ವಲ್ಪ ನಾನೂ ಖರ್ಚು ಮಾಡಿಕೊಂಡೆ. ಆದರೆ ಬಹಳಷ್ಟು ಹಣವನ್ನು ತಿಮ್ಮಪ್ಪನ ಹುಂಡಿ ಸೇರಿದಂತೆ ಅನೇಕ ದೇಗುಲಗಳ ಹುಂಡಿಗೆ ಸುರಿದು ಧನ್ಯೋಸ್ಮಿ ಎಂದು ಕೈಮುಗಿದಿದ್ದೇನೆ' ಎಂದು ದಾಸನಾಯಕನಹಳ್ಳಿ ನಿವಾಸಿ ಮಂಜುನಾಥ ಹೇಳಿದ್ದಾನೆ.
ಗೋವಿಂದಾ ಹರಿ ಗೋವಿಂದಾ: ಸ್ಥಳ ಮಹಜರಿಗೆ ತೆರಳಿದ ಲೋಕಾಯುಕ್ತ ಪೊಲೀಸರಿಗೆ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ತಿರುಪತಿ ತೀರ್ಥಯಾತ್ರೆ ಮಾಡಿಸಿದ ಜಾಣ ಪೇದೆ ಪಿಪಿ ಮಂಜುನಾಥ ಅಲ್ಲಿನ ಹುಂಡಿಗಳನ್ನು ತೋರಿಸಿ, 'ನೋಡಿ ಇಲ್ಲೇ ನಾನು ಲಂಚದ ಹಣವನ್ನು ಹಾಕಿರುವುದು. ಅದೇನು ಮಾಡ್ಕೋತೀರೋ ಮಾಡ್ಕೊಳ್ಳಿ. ಎಲ್ಲ ಆ ಪರಮಾತ್ಮ ನೋಡಿಕೊಳ್ಳುತ್ತಾನೆ' ಎಂದು ತನ್ನ ಸಹೋದ್ಯೋಗಿಗಳಿಗೇ ಚಳ್ಳೆಹಣ್ಣು ತಿನ್ನಿಸಿದ್ದಾನೆ.
ಪೀಕಲಾಟಕ್ಕೆ ಇಟ್ಟುಕೊಂಡ ಪೊಲೀಸರು ಬರಿಗೈಯಲ್ಲಿ ವಾಪಸಾಗಿದ್ದಾರೆ. ನಯಾಪೈಸೆಯೂ ಗಿಟ್ಟಿಲ್ಲ. ಬದಲಿಗೆ ಎಲ್ಲಾ ಖರ್ಚೇ. ಆದರೂ 'ಆತ ಹಣ ಕಸಿದುಕೊಂಡು 4 ತಿಂಗಳ ಕಾಲ ನಾಪತ್ತೆಯಾಗಿರುವುದೇ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಅದೇ ಅಲ್ಲದೆ ಇನ್ನೂ ಸಾಕಷ್ಟು ಪುರಾವೆಗಳಿವೆ. ಪ್ರಕರಣ ಜೀವಂತವಾಗಿದೆ' ಎಂದು ಕರ್ನಾಟಕ ಲೋಕಾಯುಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ಹೇಳಿದ್ದಾರೆ.