ದೆಹಲಿ: ಹಸುಳೆಯ ಅತ್ಯಾಚಾರಿಗೆ ಮರಣದಂಡನೆ
2011ರ ಏಪ್ರಿಲ್ 10 ರಂದು 3 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ನಡೆಸಿ ಕೊಂದು ಹಾಕಿದ 56 ವರ್ಷದ ತೋಟದ ಮನೆಯೊಂದರ ಕಾವಲುಗಾರನಿಗೆ ಮಂಗಳವಾರ ಮರಣ ದಂಡನೆ ವಿಧಿಸಿದೆ.
'ನಿರ್ಭಯಾ' ಗ್ಯಾಂಗ್ ರೇಪ್-ಮರ್ಡರ್ ಪ್ರಕರಣದ ನಂತರ ಸ್ಥಾಪಿತಗೊಂಡ ತ್ವರಿತ ನ್ಯಾಯಾಲಯವೊಂದು ನೀಡಿರುವ ಮೊದಲ ತೀರ್ಪು ಇದಾಗಿದೆ. ಈ ಪ್ರಕರಣವನ್ನು ಅತ್ಯಂತ ಹೇಯ ಮತ್ತು ಕ್ರೂರ ಎಂದು ತೀರ್ಪಿನಲ್ಲಿ ವ್ಯಾಖ್ಯಾನಿಸಲಾಗಿದೆ. ಈ ಘೋರ ಕೃತ್ಯವು ಅತ್ಯಂತ ಅಪರೂಪದ ಪ್ರಕರಣ ಎಂದೂ ಹೇಳಿದೆ. ಅತ್ಯಾಚಾರಕ್ಕೀಡಾಗುವಾಗಲೇ ಮಗು ಮೃತಪಟ್ಟಿದ್ದು, ಭರತ್ ಸಿಂಗ್ ಎಂಬುವವನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
ಅಪರಾಧಿ ಸಿಂಗ್ ಗೆ 1 ಲಕ್ಷ ರೂ. ದಂಡವನ್ನೂ ವಿಧಿಸಲಾಗಿದೆ. ಇಂತಹ ವ್ಯಕ್ತಿಗಳು ಸಮಾಜಕ್ಕೆ ಕಂಟಕರಾಗಿದ್ದು, ಅವರಿಗೆ ಯಾವುದೇ ಕನಿಕರ ತೋರುವ ಅಗತ್ಯವಿಲ್ಲ ಎಂದೂ ತಪ್ಪಿತಸ್ಥನ ಪರ ವಕೀಲರ ವಾದಕ್ಕೆ ಉತ್ತರಿಸುತ್ತಾ ನ್ಯಾಯಾಲಯ ಅಭಿಪ್ರಾಯಪಟ್ಟಿತು.
ತೀರ್ಪು ನೀಡಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವೀರೇಂದರ್ ಭಟ್ ಅವರು ಮಹಿಳೆಯರ ಮೇಲೆ, ವಿಶೇಷವಾಗಿ ಅಪ್ರಾಪ್ತರ ಮೇಲಿನ ಹಿಂಸಾಚಾರವು ಹೆಚ್ಚಾಗುತ್ತಿದೆ. ಇದರ ವಿರುದ್ಧ ಸ್ಪಷ್ಟ ಸಂದೇಶ ರವಾನೆಯಾಗುವಂತೆ ನ್ಯಾಯಾಲಯಗಳು ಕಠಿಣ ನಿಲುವು ತಳೆಯುವ ಮತ್ತು ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಏನಾಗಿತ್ತೆಂದರೆ ಕಳೆದ ವರ್ಷದ ಏಪ್ರಿಲ್ 10 ರಂದು ನೈಋತ್ಯ ದೆಹಲಿಯಲ್ಲಿರುವ ಕಾಪಶೆರಾ ಎಂಬಲ್ಲಿ ಮನೆಗೆ ಮರಳುತ್ತಿದ್ದಳು. ಪಕ್ಕದಲ್ಲಿದ್ದ ಫಾರ್ಮ್ ಹೌಸ್ ಗೇಟ್ ಕಾಯುತ್ತಿದ್ದ ಗಾರ್ಡ್ ಭರತ್ ಸಿಂಗ್ ಈಕೆಯನ್ನು ಒಳಗೆ ಕರೆದು ಅತ್ಯಾಚಾರವೆಸಗಿದ್ದ. ಆತ ಎಷ್ಟೊಂದು ಕ್ರೌರ್ಯ ಮತ್ತು ಕಾಮಪಿಪಾಸು ಆಗಿದ್ದನೆಂದರೆ, ಈ ಬಾಲಕಿಯು ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಸತ್ತ ಬಾಲಕಿಯ ಶವನನ್ನು ಫಾರ್ಮ್ ಹೌಸ್ ಒಳಗಿದ್ದ ಪೊದೆಗೆ ಬಿಸಾಕಿದ್ದ.
ಈ ಕ್ರೌರ್ಯವು ನಿರ್ಭಯಾ ಪ್ರಕರಣಕ್ಕೆ ಸಮವಾಗಿದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು. 'ಆತ ಈ ಪುಟಾಣಿಯ ಕೂಗಿಗೆ, ಅಳುವಿಗೆ ಕಿವಿಗೊಡಲೇ ಇಲ್ಲ. ಇದು ಕ್ರೂರ, ಹೇಯ ಕೃತ್ಯ. ಆತ ಎಷ್ಟು ಕ್ರೂರವಾಗಿ ವರ್ತಿಸಿದನೆಂದರೆ, ಆಕೆಯ ದೇಹದೊಳಗಿನ ಅಂಗಾಂಗಳು ಕೂಡ ಹೊರಗೆ ಬಂದಿದ್ದವು' ಎಂದು ತೀರ್ಪಿನ ಸಂದರ್ಭದಲ್ಲಿ ನ್ಯಾಯಾಲಯ ತಿಳಿಸಿತು.
10 ದಿನಗಳ ಹಿಂದೆ ಪಶ್ಚಿಮ ದಿಲ್ಲಿಯ ದ್ವಾರಕಾದಲ್ಲಿ ಸ್ಥಾಪಿಸಲಾಗಿರುವ ಈ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯವು, ಬೇರೊಂದು ಸೆಶನ್ಸ್ ನ್ಯಾಯಾಲಯದಿಂದ ಬಂದ ಈ ಕೇಸನ್ನು ಪಡೆದು ತೀರ್ಪು ನೀಡಿದೆ. ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಹೇಳಿಕೆ ದಾಖಲಿಸುವ ಹಂತದಲ್ಲಿತ್ತು. 10 ದಿನಗಳೊಳಗೆ ಆರೋಪಿಗಳ ಹೇಳಿಕೆ ಪಡೆದ ತ್ವರಿತ ನ್ಯಾಯಾಲಯವು, ಅಂತಿಮ ವಾದ-ಪ್ರತಿವಾದ ಆಲಿಸಿ ತೀರ್ಪನ್ನೂ ಘೋಷಿಸಿದೆ.