ಖೇಣಿ ಕ್ಷಮೆಯಾಚನೆಗೆ ಒಕ್ಕಲಿಗರ ಬಿಗಿಪಟ್ಟು
ಜೆಡಿಎಸ್ ವರಿಷ್ಠ, ಒಕ್ಕಲಿಗ ಸಮುದಾಯದ ಪ್ರಮುಖ ನೇತಾರ ದೇವೇಗೌಡರ ಬಗ್ಗೆ ಅಶೋಕ್ ಖೇಣಿ ನೀಡಿರುವ ಹೇಳಿಕೆ ಹಿಂಪಡೆದು, ಬೇಷರತ್ ಕ್ಷಮೆಯಾಚಿಸುವಂತೆ ಒಕ್ಕಲಿಗರ ಜಾಗೃತ ವೇದಿಕೆ ಆಗ್ರಹಿಸಿದೆ.
ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ತೆರಳಿದ್ದಾಗ ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಖೇಣಿ ಅವರ ಬೇಸರದಿಂದ ತೃಪ್ತರಾಗದ ಒಕ್ಕಲಿಗ ಸಮುದಾಯ, ಖೇಣಿ ಅವರ ಕ್ಷಮೆ ಬಯಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಒಕ್ಕಲಿಗರ ವೇದಿಕೆ ಅಧ್ಯಕ್ಷ ಕೆ.ಸಿ ಗಂಗಾಧರ್ ಹಾಗೂ ಕಾರ್ಯದರ್ಶಿ ತಮ್ಮಣ್ಣ ಗೌಡ, ಹಿರಿಯ ರಾಜಕಾರಣಿಗಳ ಬಗ್ಗೆ ಹಗುರವಾಗಿ ಮಾತನಾಡುವುದು ಎಷ್ಟು ಸರಿ? ಇನ್ನು ಮುಂದೆ ದೇವೇಗೌಡರ ವಿರುದ್ಧ ಹೇಳಿಕೆ ನೀಡಿದರೆ ನಿಮಗೆ ಬೀದರ್ ಕಡೆಗೆ ದಾರಿ ತೋರಿಸಬೇಕಾಗುತ್ತದೆ ಹುಷಾರ್ ಎಂದು ಎಚ್ಚರಿಸಿದರು.
ಬಾಲಗಂಗಾಧರನಾಥ ಸ್ವಾಮೀಜಿಗಳ ಪಾರ್ಥೀವ ಶರೀರ ದರ್ಶನಾರ್ಥಿಯಾಗಿ ಬಂದಿದ್ದ ಅಶೋಕ್ ಖೇಣಿ ಅವರು, ದೇವೇಗೌಡರು ರಾಜಕೀಯ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ರೀತಿ ಹೇಳಿಕೆ ನೀಡುವ ಅಗತ್ಯ ಏನಿತ್ತು. ಯಾವ ಉದ್ದೇಶದಿಂದ ಈ ರೀತಿ ಮಾತನಾಡಿದಿರಿ ಎಂದು ವೇದಿಕೆ ಪ್ರಶ್ನಿಸಿದೆ.
ನೈಸ್ ಸಂಸ್ಥೆಗೆ ಎಂದು 133 ಎಕರೆ ರೈತರ ಭೂಮಿ ತೆಗೆದುಕೊಂಡಿರುವುದು ಸರಿಯಲ್ಲ. ಇದನ್ನು ವಿರೋಧಿಸಿದ ದೇವೇಗೌಡರ ಬಗ್ಗೆ ಈ ಮಾತು ಆಡಿದ್ದೀರಿ. ನ್ಯಾಯಾಲಯದ ತೀರ್ಪು ಎಂದಿಗೂ ರೈತರ ಪರ ಇರುತ್ತದೆ.
ಸರ್ಕಾರವೂ ಭೂಮಿಯನ್ನು ರೈತರಿಗೆ ನೀಡಲು ಒಪ್ಪಿದೆ. ಆದರೆ, ಯಡಿಯೂರಪ್ಪ ಅವರ ಪಿತೂರಿಯಿಂದ ವಿಳಂಬವಾಗಿದೆ. ಎಲ್ಲವನ್ನೂ ರಾಜಕೀಯ ಉದ್ದೇಶದಿಂದ ನೋಡುವುದು ನೀವು, ದೇವೇಗೌಡರು ಎಂದಿದ್ದರೂ ರೈತರ ಪರ ಎಂದು ವೇದಿಕೆ ಸದಸ್ಯರು ಕಿಡಿಕಾರಿದ್ದಾರೆ.
'ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ತೆರಳಿದ್ದಾಗ ಯಾರ ವಿರುದ್ಧವೂ ನಾನು ಏನನ್ನೂ ಆರೋಪಿಸಲಿಲ್ಲ. ಆದರೂ ತಪ್ಪು ತಿಳಿದ ಕೆಲವು ಯುವಕರು ನನ್ನನ್ನು ಸ್ಥಳದಿಂದ ತೊಲಗುವಂತೆ ಆಗ್ರಹಿಸಿ ಹಲ್ಲೆ ನಡೆಸಿದರು.
ನಾಡಿನ ಜನತೆಯ ಒಳಿತಿಗಾಗಿ ಅಪಾರ ಸೇವೆ ಸಲ್ಲಿಸಿರುವ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ತೆರಳಿದ್ದಾಗ ನಡೆದ ಈ ಅಹಿತಕರ ಘಟನೆ ಬೇಸರ ತರಿಸಿದೆ. ಆದರೆ ಘಟನೆಯನ್ನು ನಾನು ಅಲ್ಲಿಗೇ ಮರೆತಿದ್ದೇನೆ. ಮುಂದೆ ನಾವೆಲ್ಲ ಶ್ರೀಗಳ ಮಾರ್ಗದರ್ಶನದಂತೆ ಮುನ್ನಡೆಯೋಣ ಎಂದು ಅಶೋಕ್ ಖೇಣಿ ತಿಳಿಸಿದ್ದರು.
ಮಂಗಳವಾರ (ಜ.15) ಬೆಳಗ್ಗೆ 11 ಗಂಟೆಯಿಂದ 05 ನಿಮಿಷಗಳ ಕಾಲ NICE ರಸ್ತೆಯಲ್ಲಿ ಅಶೋಕ್ ಖೇಣಿ ನೇತೃತ್ವದಲ್ಲಿ ಅಗಲಿದ ಮಹಾನ್ ಚೇತನ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು.