ಎಸ್ಸೆಂ ಕೃಷ್ಣ ಕೃಪೆ, ಡಿಕೆಶಿ ಅಕ್ರಮ ಮೊತ್ತ 2K ಕೋಟಿ
ಹಲವು ಅವ್ಯವಹಾರದ ಆರೋಪ ಹೊತ್ತಿರುವ ಡಿ.ಕೆ.ಶಿವಕುಮಾರ್, ಎಸ್.ಎಂ.ಕೃಷ್ಣ ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ, ಸಚಿವರಾಗಿದ್ದ ಡಿಕೆಶಿ 2 ಸಾವಿರ ಕೋಟಿ ರೂಪಾಯಿಗಳಷ್ಟು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ್ದಾರೆ.
ಆ ನಷ್ಟವನ್ನು ತುಂಬಿಕೊಡುವಂತೆ ಸಮಾಜ ಪರಿವರ್ತನಾ ಸುಮುದಾಯದ ವತಿಯಿಂದ ಈಗಾಗಲೇ ಸುಪ್ರಿಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು ಸಿಬಿಐ ತನಿಖೆಗೆ ಆದೇಶ ಹೊರಡಿಸುವಂತೆ ಒತ್ತಾಯಿಸಲಾಗಿದೆ. ಅವರನ್ನು ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ್ ಆಗ್ರಹಿಸಿದ್ದಾರೆ.
ಮೈಸೂರು ಮಿನರಲ್ ಲಿಮಿಟೆಡ್ ನಿಂದ 10 ಲಕ್ಷ ಮೆಟ್ರಿಕ್ ಕಬ್ಬಿಣದ ಅದಿರು ಮತ್ತು ಮಣ್ಣನ್ನು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಿ (ಪ್ರತಿ ಮೆಟ್ರಿಕ್ ಟನ್ಗೆ 25,50,75 ರೂ.) ಸರ್ಕಾರದ ಬೊಕ್ಕಸಕ್ಕೆ ಹಾನಿಮಾಡಿದ್ದನ್ನು ಎನ್. ಸಿ.ಪಿ.ಎನ್.ಆರ್ ಅಭ್ಯಾಸ ತಂಡ ಅಭ್ಯಸಿಸಿ ವರದಿ ಮಾಡಿದೆ ಎಂದು ಹೇಳಿದರು.
ಶಿವಕುಮಾರ್ ಹಾಗೂ ಅವರ ಪಾಲುದಾರರಾದ ಪಿ.ಕೆ.ಪೊನ್ನರಾಜ್ (ಸತ್ಯಂ ಗ್ರಾನೈಟ್) ಹಾಗೂ ಇತರ 8 ಕಂಪೆನಿಗಳು ಡಿಕೆಶಿ ಒಡೆತನದಲ್ಲಿದ್ದು, ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತದ ಮೂಲಕ ಅಕ್ರಮ ಸಂಪಾದನೆ ಮಾಡಿದ್ದಲ್ಲದೆ ಸರ್ಕಾರಿ ಸ್ವಾಮಿತ್ವದ ಮೈಸೂರ್ ಮಿನರಲ್ ಲಿಮಿಟೆಡ್ ಕಂಪೆನಿಗೆ ಆರ್ಥಿಕವಾಗಿ ನಷ್ಟ ಉಂಟುಮಾಡಿದ್ದಾರೆ
ಮೈಸೂರ್ ಮಿನರಲ್ ಲಿಮಿಟೆಡ್ ಕಾರ್ಯ ನಿರ್ವಾಹಕ ನಿರ್ದೇಶಕರೂ ಸಹ ಗಂಭೀರ ಕರ್ತವ್ಯ ಲೋಪ ಎಸಗಿ ಸರ್ಕಾರಕ್ಕೆ ಹಾನಿ ಉಂಟು ಮಾಡಿದ್ದಾರೆ. ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಹಿರೇಮಠ್ ಆಗ್ರಹಿಸಿದರು.
ರೆಡ್ಡಿಗಾದ ಗತಿ ಡಿಕೆಶಿಗೆ: ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಕೊಂಡಿದ್ದ ಜನಾರ್ದನ ರೆಡ್ಡಿ ಅವರಿಗೆ ಬಂದಿರುವ ದುರ್ಗತಿ ಈಗ ಡಿಕೆ ಶಿವಕುಮಾರ್ ಅವರಿಗೂ ಬರಲಿದೆ ಎಂದು ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಹಿರೇಮಠ್ ಹೇಳಿದ್ದಾರೆ.
ಎಸ್ಸೆಂ ಕೃಷ್ಣ ಹಾಗೂ ಧರಂ ಸಿಂಗ್ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಡಿಕೆ ಶಿವಕುಮಾರ್ ಅವರು ತಮ್ಮ ಲೆಟರ್ ಹೆಡ್ ನಲ್ಲಿ ಮೈಸೂರು ಮಿನರಲ್ ಲಿಮಿಟೆಡ್ ಕಂಪನಿಗೆ ಬರೆದ ಪತ್ರಗಳು ಸಿಕ್ಕಿದೆ.ರಾಚೇನಹಳ್ಳಿ, ನಾಗವಾರ ಡಿನೋಟಿಫಿಕೇಶನ್ನಲ್ಲಿ ಡಿಕೆಶಿ ಅಕ್ರಮ ಎಸಗಿದ್ದು, ಈ ಬಗ್ಗೆ ಸಂಪೂರ್ಣ ದಾಖಲೆ ಇದೆ.
ಡಿಕೆ ಶಿವಕುಮಾರ್ ಅವರು ತಮ್ಮ ಕಂಪನಿಗಳ ಮೂಲಕ ಮಾಡಿರುವ ಗಣಿ ಅಕ್ರಮಗಳ ತನಿಖೆ ಸಿಬಿಐಗೆ ವಹಿಸಬೇಕು ಎಂದು ಸುಪ್ರೀಂಕೋರ್ಟಿಗೆ ಮನವಿ ಸಲ್ಲಿಸಿದ್ದೇವೆ ಎಂದು ಹಿರೇಮಠ್ ಹೇಳಿದರು.