ಬಿಜಿಎಸ್ ಆಸ್ಪತ್ರೆ ಅಟ್ಯಾಕ್ ಬಗ್ಗೆ ಬೇಸರ: ಖೇಣಿ
ಸಂತಾಪ: ಮಂಗಳವಾರ ಬೆಳಗ್ಗೆ 11 ಗಂಟೆಯಿಂದ 05 ನಿಮಿಷಗಳ ಕಾಲ NICE ರಸ್ತೆಯಲ್ಲಿ ಅಶೋಕ್ ಖೇಣಿ ನೇತೃತ್ವದಲ್ಲಿ ಅಗಲಿದ ಮಹಾನ್ ಚೇತನ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ ಎಂದು ನೈಸ್ ವಕ್ತಾರರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.
ಹಲ್ಲೆ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ತೆರಳಿದ್ದಾಗ ಯಾರ ವಿರುದ್ಧವೂ ನಾನು ಏನನ್ನೂ ಆರೋಪಿಸಲಿಲ್ಲ. ಆದರೂ ತಪ್ಪು ತಿಳಿದ ಕೆಲವು ಯುವಕರು ನನ್ನನ್ನು ಸ್ಥಳದಿಂದ ತೊಲಗುವಂತೆ ಆಗ್ರಹಿಸಿ ಹಲ್ಲೆ ನಡೆಸಿದರು.
ನಾಡಿನ ಜನತೆಯ ಒಳಿತಿಗಾಗಿ ಅಪಾರ ಸೇವೆ ಸಲ್ಲಿಸಿರುವ ಸ್ವಾಮೀಜಿಯವರ ಅಂತಿಮ ದರ್ಶನಕ್ಕೆ ತೆರಳಿದ್ದಾಗ ನಡೆದ ಈ ಅಹಿತರ ಘಟನೆ ಬೇಸರ ತರಿಸಿದೆ. ಆದರೆ ಘಟನೆಯನ್ನು ನಾನು ಅಲ್ಲಿಗೇ ಮರೆತಿದ್ದೇನೆ. ಮುಂದೆ ನಾವೆಲ್ಲ ಶ್ರೀಗಳ ಮಾರ್ಗದರ್ಶನದಂತೆ ಮುನ್ನಡೆಯೋಣ ಎಂದು ಅಶೋಕ್ ಖೇಣಿ ತಿಳಿಸಿದ್ದಾರೆ.
ಆಸ್ಪತ್ರೆಗೆ ಅಶೋಕ್ ಖೇಣಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಆಸ್ಪತ್ರೆಯಲ್ಲಿದ್ದರು. ಆ ವೇಳೆ ಖೇಣಿ ಗೌಡರನ್ನು ಮಾತನಾಡಿಸಿ 'ಏನು ಸ್ವಾಮಿ ಗೌಡ್ರೇ ಆಸ್ಪತ್ರೆಯಲ್ಲೂ ರಾಜಕೀಯ ಮಾಡುತ್ತಿದ್ದೀರಿ' ಎಂದು ಹೇಳಿದರು ಎನ್ನಲಾಗಿತ್ತು.
ಇದನ್ನು ಅಲ್ಲಗೆಳೆದಿರುವ ಖೇಣಿ, ನಾನು ಯಾರನ್ನು ಮಾತನಾಡಿಸಲಿಲ್ಲ. ಹಾಗೂ ಯಾವ ರಾಜಕೀಯದ ಬಗ್ಗೆಯೂ ನಾನು ಮಾತನಾಡಲಿಲ್ಲ. ಸುಮ್ಮನೆ ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಪರಿಸ್ಥಿತಿ ಬಗ್ಗೆ ನನಗೆ ಅರಿವಿದೆ. ಎಲ್ಲಿ ಏನು ಮಾತನಾಡಬೇಕು ಎಂಬ ಕನಿಷ್ಠ ಅರಿವು ನನಗಿದೆ ಎಂದು ಖೇಣಿ ಹೇಳಿದ್ದಾರೆ.
ದೇವೇಗೌಡರ ಬೆಂಬಲಿಗರು ಖೇಣಿ ಅವರನ್ನು ಅಟ್ಟಾಡಿಸಿಕೊಂಡು ಹೋದ ದೃಶ್ಯ ಮಾಧ್ಯಮಗಳಲ್ಲಿ ಹೈಲೇಟ್ ಆಗಿಬಿಟ್ಟಿತು. ಪೊಲೀಸರು ಸರಿಯಾದ ಸಮಯಕ್ಕೆ ಮಧ್ಯ ಪ್ರವೇಶಿಸಿ ಉದ್ವಿಗ್ನ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದರು.