ಕುಮಾರಕೃಪಾ ರಸ್ತೆಯಲ್ಲಿ ಮತ್ತೊಮ್ಮೆ ಬಣ್ಣದ ಚಿತ್ತಾರ
ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಸಾವಿರಕ್ಕೂ ಅಧಿಕ ಹವ್ಯಾಸಿ ಹಾಗೂ ವೃತ್ತಿನಿರತ ಕಲಾವಿದರು ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜ.27ರಂದು ಬೆಳಗ್ಗೆ 9 ರಿಂದ ರಾತ್ರಿ 8 ಗಂಟೆ ತನಕ ಶಿವಾನಂದ ಸರ್ಕಲ್ ನಿಂದ ವಿಂಡ್ಸರ್ ಮ್ಯಾನರ್ ವೃತ್ತದವರೆಗೆ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ ಎಂದು ಚಿತ್ರಕಲಾ ಪರಿಷತ್ ನ ಆಡಳಿತಾಧಿಕಾರಿ ಜೆ.ಎಸ್ ನಾರಾಯಣಸ್ವಾಮಿ ಹೇಳಿದರು.
ಅಧಿಕೃತವಾಗಿ ಸುಮಾರು 2 ಸಾವಿರಕ್ಕೂ ಅಧಿಕ ಕಲಾವಿದರು ಈ ಬಾರಿ ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಕಳೆದ ವರ್ಷ 1200ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. 1400 ಕಲಾವಿದರು ಪಾಲ್ಗೊಂಡಿದ್ದರು. ಕನಿಷ್ಠ 100 ರು.ನಿಂದ 1 ಲಕ್ಷ ರು ವರೆಗೆ ಕಲಾಕೃತಿಗಳು ಮಾರಾಟವಾಗುವ ಸಾಧ್ಯತೆಯಿದೆ. ಕಳೆದ ಬಾರಿ ಸುಮಾರು 2 ಕೋಟಿ ರು ಸಂಗ್ರಹವಾಗಿತು. ಈ ಬಾರಿ ಹೆಚ್ಚಿನ ಮೊತ್ತ ನಿರೀಕ್ಷಿಸಲಾಗಿದೆ ಎಂದು ನಾರಾಯಣ ಸ್ವಾಮಿ ಹೇಳಿದರು.
ಪರಸ್ಥಳದಿಂದ ಬರುವ ಕಲಾವಿದರಿಗೆ ಊಟ, ತಿಂಡಿ, ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವೇಶ ಶುಲ್ಕ 200 ರು ನಿಗದಿಪಡಿಸಲಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಒರಿಸ್ಸಾ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಇನ್ನಿತರ ಕಡೆಗಳಿಂದ ಕಲಾವಿದರು ಈ ಚಿತ್ರಸಂತೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಾಂಪ್ರದಾಯಿಕ ಮೈಸೂರು ಶೈಲಿ, ತಂಜಾವೂರು, ರಾಜಸ್ಥಾನಿ, ಮಧುಬನಿ, ತೈಲ ಮತ್ತು ಜಲವರ್ಣದ ಚಿತ್ರಗಳೂ ಪ್ರದರ್ಶನಗೊಳ್ಳಲಿವೆ. ಜತೆಗೆ ಅಕ್ರಾಲಿಕ್, ಗಾಜಿನ ಮೇಲೆ ಬಿಡಿಸಿದ ಚಿತ್ತಾರಗಳು, ಕೊಲಾಜ್, ಲಿಥೋಗ್ರಾಫ್ ಚಿತ್ರಗಳನ್ನು ನೋಡಲು, ಕೊಳ್ಳಲು ಲಭ್ಯವಿವೆ. ಕ್ಷಣದಲ್ಲೇ ಭಾವಚಿತ್ರಗಳನ್ನು ಬಿಡಿಸಿಕೊಡುವ ಕಲಾವಿದರೂ ಚಿತ್ರಸಂತೆಯಲ್ಲಿ ಭಾಗವಹಿಸಲಿದ್ದಾರೆ.