ಹಾಲಿನ ಬೆಲೆ ಏರಿಕೆ ಸುಳಿವು ನೀಡಿದ ಶೆಟ್ಟರ್
ಕೆಎಂಎಫ್ ಮತ್ತು ಅದರ ಅಂಗಸಂಸ್ಥೆಗಳಲ್ಲಿ 3200 ಟನ್ ಹಾಲಿನ ಪುಡಿ ತಯಾರಿಕೆಯಾಗುತ್ತಿದೆ. ಈ ಪುಡಿಯನ್ನುಹಾಲು ಮಾಡಿ ಮಕ್ಕಳಿಗೆ ವಿತರಿಸಲಿದ್ದು, ಸದ್ಯದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಶೆಟ್ಟರ್ ಹೇಳಿದರು.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಭಾನುವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಈ ಕಾರ್ಯಕ್ರಮವನ್ನು ಘೋಷಿಸಿದರು.
ಬೆಲೆ ಏರಿಕೆ ಬಗ್ಗೆ : ಕೆಎಂಎಫ್ನಿಂದ ಹಾಲಿನ ಪುಡಿ ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಹಾಲು ಪುಡಿ ಸಂಸ್ಕರಣಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದರು.
ಸಂಪುಟದಲ್ಲಿ ಹಾಲಿನ ದರ ಏರಿಕೆ ನಿರ್ಧಾರ ಇದೇ ವೇಳೆ, ನಂದಿನಿ ಹಾಲು ದರವನ್ನು ಹೆಚ್ಚಳ ಮಾಡುವಂತೆ ಹಾಲು ಉತ್ಪಾದಕರು ಇಟ್ಟ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಶೆಟ್ಟರ್, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು. ಹೀಗಾಗಿ 5-6 ರು ಬೆಲೆ ಏರಿಕೆ ಬಹುತೇಕ ಖಚಿತ ಎನ್ನಬಹುದು.
ಶೀಥಲೀಕರಣ ಘಟಕ ಸ್ಥಾಪನೆಗೆ ಕೆಎಂಎಫ್ ಗುರುತಿಸುವ 40 ಎಕರೆ ಜಮೀನು ಮಂಜೂರು ಸರ್ಕಾರ ಸಿದ್ಧವಿದೆ. ಈ ಭಾಗದ ಕುಡಿಯುವ ನೀರಿನ ಬವಣೆಗೆ ಶಾಶ್ವತ ಪರಿಹಾರ ನೀಡಲು ಎತ್ತಿನಹೊಳೆ ಯೋಜನೆ ಜಾರಿಗೊಳಿಸುವುದಾಗಿ ತಿಳಿಸಿದರು. ಜತೆಗೆ ತಾವು ಈ ಬಾರಿ ಮಂಡಿಸುವ ಬಜೆಟ್ ನಲ್ಲಿ ಹಾಲು ಉತ್ಪಾದಕರ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಆದ್ಯತೆ ನೀಡುವುದಾಗಿ ಆಶ್ವಾಸನೆ ನೀಡಿದರು.
ಹಾಲಿನಾಣೆ ಅಕ್ರಮ ನಡೆದಿಲ್ಲ: ನಾನು ತಾಯಿ ಎದೆ ಹಾಲು ಕುಡಿದು ಬೆಳೆದವ. ಅದರ ಮೇಲೆ ಆಣೆ ಮಾಡಿ ಹೇಳ್ತೇನೆ ಕೆಎಂಎಫ್ನಲ್ಲಿ ಯಾವುದೇ ಹಗರಣ ನಡೆದಿಲ್ಲ. ನಂಬಿ ಪ್ಲೀಸ್ ಎಂದು ಕೆಎಂಎಫ್ ಅಧ್ಯಕ್ಷ ಜಿ.ಸೋಮಶೇಖರರೆಡ್ಡಿ ಗೋಳಾಡಿದರು.
ಹಾಲು ಉತ್ಪಾದಕರ ಸಮಾವೇಶದಲ್ಲಿ ತಮ್ಮ ಭಾಷಣದ ನಡುವೆ ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟೀಕರಣ ನೀಡದ ಅವರು, ಕೆಎಂಎಫ್ನಲ್ಲಿ ಯಾವುದೇ ಹಗರಣ ನಡೆದಿಲ್ಲವಾದರೂ ಹಾಲು ಉತ್ಪನ್ನಗಳ ಸರಬರಾಜುದಾರರ ಒತ್ತಡಕ್ಕೆ ಮಣಿಯದ್ದರಿಂದ ಈ ರೀತಿಯ ಆರೋಪಕ್ಕೆ ಗುರಿಯಾಗಬೇಕಾಗಿದೆ. ಆದರೆ, ಈಗಲೂ ತಾಯಿ ಹಾಲಾಣೆ ಯಾವುದೇ ಅಕ್ರಮ ನಡೆದಿಲ್ಲ ಎಂದರು.