ಸಾವಿನ ಮನೆಯಲ್ಲೂ ಹೊತ್ತಿ ಉರಿದ ರಾಜಕೀಯ ದ್ವೇಷ
ಭಾನುವಾರ ( ಜ 13) ಕಾಲೈಕ್ಯರಾದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಅಶೋಕ್ ಖೇಣಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಬಂದಾಗ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಆಸ್ಪತ್ರೆಗೆ ಅಶೋಕ್ ಖೇಣಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕೂಡಾ ಆಸ್ಪತ್ರೆಯಲ್ಲಿದ್ದರು. ಆ ವೇಳೆ ಖೇಣಿ ಗೌಡರನ್ನು ಮಾತನಾಡಿಸಿ 'ಏನು ಸ್ವಾಮಿ ಗೌಡ್ರೇ ಆಸ್ಪತ್ರೆಯಲ್ಲೂ ರಾಜಕೀಯ ಮಾಡುತ್ತಿದ್ದೀರಿ' ಎಂದು ಹೇಳಿದರು ಎನ್ನಲಾಗಿದೆ.
ಇದರಿಂದ ಕುಪಿತಗೊಂಡ ದೇವೇಗೌಡರ ಹಿಂಬಾಲಕರು ಖೇಣಿ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೀಗಳ ಪಾರ್ಥಿವ ಶರೀರದ ದರ್ಶನ ಮಾಡಿ ಹೊರಬಂದ ಖೇಣಿ ಮೇಲೆ ಮತ್ತೆ ಕೆಲವರು ಹಲ್ಲೆ ನಡೆಸಲು ಮುಂದಾಗಿದ್ದಾರೆ. ಆವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಖೇಣಿ ಅವರನ್ನು ಕಾರಿಗೆ ಹತ್ತಿಸಿ ಕಳುಹಿಸಿದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ವಿಜಯನಗರದ ಶಾಖಾ ಮಠದಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆದಿದ್ದಾರೆ. ಚಲನಚಿತ್ರ ನಟರು, ಧಾರ್ಮಿಕ ಮುಖಂಡರು ಸೇರಿ ಪ್ರಮುಖ ಗಣ್ಯರು ಶ್ರೀಗಳ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ.
ಶ್ರೀಗಳು ವಿಧಿವಶರಾಗಿರುವ ಹಿನ್ನಲೆಯಲ್ಲಿ ಅವರ ಉತ್ತರಾಧಿಕಾರಿಯಾಗಿ ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠದ ನಿರ್ಮಲಾನಂದ ಸ್ವಾಮೀಜಿ ಪೀಠಾರೋಹಣ ಮಾಡುವ ಸಾಧ್ಯತೆಯಿದೆ.
ತನ್ನ ಆರೋಗ್ಯ ಹದೆಗೆಡುತ್ತಿರುವ ಹಿನ್ನಲೆಯಲ್ಲಿ ಮುಂದೆ ಅನಗತ್ಯ ಗೊಂದಲ, ವಿವಾದಕ್ಕೆ ಕಾರಣವಾಗದಿರಲಿ ಎಂದು ಬಾಲಗಂಗಾಧರನಾಥ ಶ್ರೀಗಳು ನಾಲ್ಕು ವರ್ಷಗಳ ಹಿಂದೆಯೇ ಸಮುದಾಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ನಿರ್ಮಲಾನಂದ ಸ್ವಾಮೀಜಿ ಅವರನ್ನು ಉತ್ತರಾಧಿಕಾರಿ ಪಟ್ಟಕ್ಕೆ ಅಂತಿಮಗೊಳಿಸಿದ್ದ ವಿಲ್ ಬೆಳ್ಳೂರಿನ ವೈಶ್ಯ ಬ್ಯಾಂಕಿನ ಶಾಖೆಯಲ್ಲಿ ಲಭ್ಯವಾಗಿದೆ.
ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿದೆ. ಡಿಸಿಎಂ ಅಶೋಕ್, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ. ಸಂಸದ ಚೆಲುವರಾಯಸ್ವಾಮಿ ಮೆರವಣಿಗೆ ನೇತೃತ್ವ ವಹಿಸಿದ್ದಾರೆ.