ಶ್ರೀಆದಿ ಮಠಕ್ಕೆ ನಿರ್ಮಲಾನಂದನಾಥ ಉತ್ತರಾಧಿಕಾರಿ
ಬೆಳ್ಳೂರು ಕ್ರಾಸ್ ಐಎನ್ ಜಿವೈಶ್ಯ ಬ್ಯಾಂಕಿನಲ್ಲಿ ಭದ್ರವಾಗಿ ಇರಿಸಲಾಗಿದ್ದ ಬಾಲಗಂಗಾಧರನಾಥ ಸ್ವಾಮೀಜಿಗಳ ಉಯಿಲು ಪತ್ರವನ್ನು ಮಠದ ಅಧಿಕಾರಿ ಬಾಲಕೃಷ್ಣೇಗೌಡ ಅವರು ಜಿಲ್ಲಾಧಿಕಾರಿ ಕೃಷ್ಣಯ್ಯ ಹಾಗೂ ಇತರೆ ಪ್ರಮುಖರ ಸಮ್ಮುಖದಲ್ಲಿ ಓದಿದರು.
ಸುಮಾರು 26 ಪುಟಗಳ ವಿಲ್ ನಲ್ಲಿ ಮೊಟ್ಟ ಮೊದಲಿಗೆ ನನ್ನ ಉತ್ತರಾಧಿಕಾರಿಯಾಗಿ ನಿರ್ಮಲಾನಂದರನ್ನು ನೇಮಿಸಲು ಸೂಚನೆ ಇತ್ತ. ಅದರಂತೆ, ನಿರ್ಮಲಾನಂದರನ್ನು ನಾಥ ಪರಂಪರೆಯ 72ನೇ ಪೀಠಾಧ್ಯಕ್ಷರಾಗಿ, ಬಾಲಗಂಗಾಧರನಾಥ ಸ್ವಾಮೀಜಿಗಳ ಉತ್ತರಾಧಿಕಾರಿಯಾಗಿ ಘೋಷಿಸಲಾಯಿತು.
ಉತ್ತರಾಧಿಕಾರಿ ನೇಮಕಗೊಂಡ ನಿರ್ಮಲಾನಂದನಾಥ ಸ್ವಾಮೀಜಿಗಳು ಬಾಲಗಂಗಾಧರನಾಥ ಸ್ವಾಮಿಗಳ ಉತ್ತರ ಕ್ರಿಯಾಧಿಗಳನ್ನು ಪೂರೈಸಿದರು.
ಉತ್ತರಾಧಿಕಾರಿ ಸ್ಥಾನಕ್ಕೆ ನಿರ್ಮಲಾನಂದರಲ್ಲದೆ ಶಿವಮೊಗ್ಗ ಮಠದ ಪ್ರಸನ್ನನಾಥ ಸ್ವಾಮೀಜಿ, ಚುಂಚನಗಿರಿಯ ಭೈರವನಾಥ ಸ್ವಾಮೀಜಿ, ಕಾಶಿ ಮಠದ ವಿದ್ಯಾಧರನಾಥ ಸ್ವಾಮೀಜಿ ಮುಂತಾದವರು ಆಕಾಂಕ್ಷಿಗಳಾಗಿದ್ದರು ಎಂದು ತಿಳಿದು ಬಂದಿದೆ.
ನಿರ್ಮಲಾನಂದನಾಥರ ಪೂರ್ವಾಪರ: ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೀರನಹಳ್ಳಿಯ ದಿವಂಗತ ನರಸಪ್ಪ ಹಾಗೂ ನಂಜಮ್ಮ್ ದಂಪತಿಗಳ ಪುತ್ರರಾಗಿ 20/07/1969ರಲ್ಲಿ ನಿರ್ಮಲಾನಂದರ ಜನನ.
ನಿರ್ಮಲಾನಂದರು ಎಂಟೆಕ್ ಪದವೀಧರರು. 34ನೇ ವಯಸ್ಸಿನಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಗಳ ಸೇವಾಕೈಂಕರ್ಯಕ್ಕೆ ಮನಸೋತು ಅವರಲ್ಲಿ ಶಿಷ್ಯವೃತ್ತಿ ಬಯಸಿದರು.
ಚಿಕ್ಕಬಳ್ಳಾಪುರದಲ್ಲಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಶೈಕ್ಷಣಿಕ ಕ್ರಾಂತಿಯನ್ನು ಬೆಳೆಸಿದ್ದು, ರೈತರೊಡನೆ ಸಂಪರ್ಕ, ಸ್ವಾಮೀಜಿಗಳ ನಿರಂತರ ಆರೈಕೆ ಅವರನ್ನು ಪೀಠಾಧ್ಯಕ್ಷರನ್ನಾಗಿ ಮಾಡಿದೆ.
ಚಿಕ್ಕಬಳ್ಳಾಪುರದಲ್ಲಿ ನಿರ್ಮಲಾನಂದರು ತೋರಿದ ಸಾಧನೆಯನ್ನು ಪರಿಗಣಿಸಿ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ. ಆದರೆ, ಬಾಲಗಂಗಾಧರನಾಥರ ಸಮಸ್ತ ಆಸ್ತಿ ಯಾರಿಗೆ ಸೇರಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಆದಿಚುಂಚನಗಿರಿ ಶ್ರೀಮಠ ಕಾಶಿ, ಧರ್ಮಪುರಿ, ಸೇಲಂ ಅಲ್ಲದೆ ಅಮೆರಿಕದಲ್ಲೂ ಸಂಸ್ಥಾನ ಹೊಂದಿದೆ. ಮೆಡಿಕಲ್ ಕಾಲೇಜು, ಶಾಲೆ, ಡಿಇಡಿ ಕಾಲೇಜು, ವಸತಿ ಶಾಲೆ, ಆಸ್ಪತ್ರೆ ಮುಂತಾದವುಗಳ ಅಧಿಕಾರ ಯಾರಿಗೆ ಸಿಗಲಿದೆ ಗೊತ್ತಿಲ್ಲ.
ಬಾಲಗಂಗಾಧರನಾಥ ಸ್ವಾಮೀಜಿಗಳ ಖಾಸಗಿ ಹೆಲಿಕಾಪ್ಟರ್, ಹಲವಾರು ಐಷಾರಾಮಿ ಕಾರುಗಳು ಹಾಗೂ ಹೈಟೆಕ್ ಮಲಗುವ ಕೋಣೆಗಳ ಅಧಿಕಾರ ಯಾರ ವ್ಯಾಪ್ತಿಗೆ ಬರಲಿದೆ ಇನ್ನೂ ತಿಳಿಯಬೇಕಿದೆ.