ಗುಲ್ಬರ್ಗದ ಪಾತಕಿ ಸಾಯಿಬಣ್ಣನಿಗೆ ಗಲ್ಲೇ ಗತಿ
ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಣಬ್ ಅವರು ತಿರಸ್ಕರಿಸುತ್ತಿರುವ ಎರಡನೇ ಕ್ಷಮಾದಾನ ಅರ್ಜಿ ಇದಾಗಿದೆ. ಮೊದಲನೆಯದು ಕಸಬ್. 26x11 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಅಜ್ಮಲ್ ಕಸಬ್ ನನ್ನು ಕಳೆದ ನವೆಂಬರ್ 21 ರಂದು ಪುಣೆಯ ಯರವಾಡ ಸೆರೆಮನೆಯ ನೇಣುಗಂಬಕ್ಕೆ ಏರಿಸಲಾಯಿತು.
ಸಾಯಿಬಣ್ಣ ಗುಲ್ಬರ್ಗ ಜಿಲ್ಲೆಯ ಜೇವರ್ಗಿಯವನು. ಬೆಳಗಾವಿಯ ಹಿಂಡಲಗ ಸೆರೆಮನೆಯಲ್ಲಿ ಕೊಳೆಯುತ್ತಿರುವ ಇವನನ್ನು ಗಲ್ಲಿಗೇರಿಸುವ ಸಮಯ ಬಂದಿದೆ. ಗಲ್ಲು ಶಿಕ್ಷೆ ನೆರವೇರಿಸುವ ದಿನಾಂಕ ಮತ್ತಿತರ ವಿವರಗಳು ಇನ್ನಷ್ಟೇ ಬರಬೇಕಾಗಿದೆ. ಸಾಯಿಬಣ್ಣ ಎಸಗಿದ ಭಯಾನಕ ಕೃತ್ಯಗಳ ಸಂಕ್ಷಿಪ್ತ ಸ್ಟೋರಿ ಹೀಗಿದೆ :
* ಗುಲ್ಬರ್ಗದ ಜೇವರ್ಗಿ ತಾಲೂಕಿನ ಮಂಡೆವಾಲ ಗ್ರಾಮದ ಸಾಯಿಬಣ್ಣ ನಿಂಗಪ್ಪ ನಾಟಿಕಾರ್ ತನ್ನ ಮೊದಲ ಪತ್ನಿ ಮಲಕವ್ವಾಳನನ್ನು ಕೊಲೆ ಮಾಡಿದ. ದೇವದಾಸಿ ಪದ್ಧತಿಯಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದು ಆರೋಪಿಸಿ ಹತ್ಯೆ ಮಾಡಿದ್ದ. ಈ ಹತ್ಯೆಗೆ ಸಂಬಂಧಿಸಿದಂತೆ ಸಾಯಿಬಣ್ಣ ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿ ಕಾಲ ಕಳೆಯಬೇಕಾಯಿತು.
* ಹೀಗೆ ಜೈಲಿನಲ್ಲಿದ್ದಾಗ ಸಾಯಿಬಣ್ಣ ನಿಂಗಪ್ಪ ನಾಟಿಕಾರ್ಗೆ ದತ್ತು ಎಂಬ ಕೈದಿಯೊಬ್ಬನ ಪರಿಚಯವಾಯ್ತು. ದತ್ತುವಿಗೆ ನಾಗಮ್ಮ ಎಂಬ ಮಗಳೊಬ್ಬಳು ಇದ್ದಳು. ಹೀಗೆ ಸಾಯಿಬಣ್ಣ ಮತ್ತು ದತ್ತು ಪರಿಚಯ ಬೆಳೆದಂತೆ ನಿನ್ನ ಮಗಳು ನಾಗಮ್ಮನನ್ನ ನನಗೆ ಮದ್ವೆ ಮಾಡಿಕೊಡು ಎಂದು ಸಾಯಿಬಣ್ಣ ದತ್ತುವಿಗೆ ಕೇಳಿಕೊಂಡ. ಅದಕ್ಕೆ ಒಪ್ಪಿಕೊಂಡ ದತ್ತು, ನೀನು ನಿರಪರಾಧಿಯಾಗಿ ಬಿಡುಗಡೆಯಾದರೆ ನನ್ನ ಮಗಳನ್ನು ಮದ್ವೆ ಮಾಡಿಕೊಡುವುದಾಗಿ ಮಾತು ಕೊಟ್ಟ.
* ಈ ನಡುವೆ ದತ್ತು ಜೈಲಿನಿಂದ ಬಿಡುಗಡೆಗೊಂಡ. ಇದೇ ವೇಳೆ ಸಾಯಿಬಣ್ಣ ಜಾಮೀನು ಪಡೆದು ಜೈಲಿನಿಂದ ಹೊರಬಂದ. ಈ ಸಮಯವನ್ನ ಉಪಯೋಗಿಸಿಕೊಂಡ ಸಾಯಿಬಣ್ಣ, ದತ್ತುವಿನ ಮಗಳು ನಾಗಮ್ಮನನ್ನ ಮದುವೆಯಾದ.. ಈ ಮದುವೆ ನಡೆದಿದ್ದು ಸುಮಾರು 29 ವರ್ಷಗಳ ಹಿಂದೆ. ನಾಗಮ್ಮ ಮತ್ತು ಸಾಯಿಬಣ್ಣ ದಂಪತಿಗೆ ವಿಜಯಲಕ್ಷ್ಮೀ ಎಂಬ ಹೆಣ್ಣು ಮಗು ಕೂಡಾ ಆಯ್ತು. ಇದೇ ಸಮಯಕ್ಕೆ ಸರಿಯಾಗಿ ಸಾಯಿಬಣ್ಣನಿಗೆ ಮೊದಲ ಹೆಂಡತಿಯನ್ನ ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆ ಆಯ್ತು.
* ಜೀವಾವಧಿ ಶಿಕ್ಷೆ ಅನುಭವಿಸ್ತಿದ್ದ ಸಮಯದಲ್ಲೇ ಸಾಯಿಬಣ್ಣ 1994ರ ಆಗಸ್ಟ್ 19ರಂದು ಪೆರೋಲ್ ಮೇಲೆ ಹೊರಬಂದ. ನಂತರ 1994ರ ಸೆಪ್ಟೆಂಬರ್ 12ರಂದು ತನ್ನ ಎರಡನೇ ಪತ್ನಿ ನಾಗಮ್ಮ, ಮಗಳು ವಿಜಯಲಕ್ಷ್ಮೀ, ಶರಣವ್ವ, ಮಹಾಂತಪ್ಪ ಮತ್ತು ಇತರ ಜೊತೆ ಸೇರಿ ಜೀಪಿನಲ್ಲಿ ಭೋಸ್ಗಾ ಗ್ರಾಮದಲ್ಲಿರೋ ತನ್ನ ಮಾವ ದತ್ತು ಮನೆಗೆ ಹೋದ. ಈ ವೇಳೆ ತನ್ನನ್ನು ಜೈಲಿನಿಂದ ಬಿಡಿಸುವಂತೆ ಪರಿಪರಿಯಾಗಿ ಬೇಡಿಕೊಂಡ.
* ನಿನ್ನ ಬಿಡುಗಡೆಗೆ ನಮ್ಮ ಕೈಯಲ್ಲಾದ ಪ್ರಯತ್ನ ಮಾಡ್ತೇವೆ ಎಂದು ಮಾವ ದತ್ತು ಮತ್ತು ಎಲ್ಲರೂ ಮಾತು ಕೊಟ್ರು. ಇನ್ನು ಅವತ್ತು ಹಬ್ಬವಿದ್ದ ಕಾರಣ ಎಲ್ಲರೂ ಚೆನ್ನಾಗಿ ಹಬ್ಬದೂಟ ಮಾಡಿದ್ರು. ಇದಾದ ನಂತ್ರ ಸಾಯಿಬಣ್ಣ ಪತ್ನಿ ನಾಗಮ್ಮ, ಮಗಳು ವಿಜಯಲಕ್ಷ್ಮಿ, ಶರಣವ್ವ, ಮಹಾಂತಪ್ಪ ಮತ್ತು ಮಾವ ದತ್ತು ಎಲ್ಲರೂ ಸೇರಿ ದತ್ತುವಿನ ಸಹೋದರ ಹನುಮಂತಪ್ಪ ಕಟ್ಟಿಸಿದ್ದ ಹೊಸ ಮನೆಯಲ್ಲಿ ಮಲಗಲು ಹೋದರು. ಎಲ್ಲರೂ ಆ ಹೊಸ ಮನೆಯಲ್ಲಿ ಮಲಗಿದ್ರು. ಸಾಯಿಬಣ್ಣ, ಮಗಳು ನಾಗಮ್ಮ ಮಲಗಿದ್ದ ಕೋಣೆಯ ಹೊರಗಿನ ವರಾಂಡದಲ್ಲಿ ದತ್ತು ಮಲಗಿದ್ದ.
* ಆದ್ರೆ ಆ ರಾತ್ರಿ ತನ್ನ ಹೆಂಡತಿ ಬಗ್ಗೆ ಅನುಮಾನ ಪಟ್ಟ ಸಾಯಿಬಣ್ಣ, ಪತ್ನಿ ನಾಗಮ್ಮಳ ಎದೆ, ಹೊಟ್ಟೆ ಸೇರಿದಂತೆ ದೇಹದ ಹಲವು ಭಾಗಕ್ಕೆ 21 ಸಲ ಚೂರಿಯಿಂದ ಚುಚ್ಚಿದ. ಗಂಭೀರವಾಗಿ ಗಾಯಗೊಂಡ ನಾಗಮ್ಮ ಪ್ರಾಣ ರಕ್ಷಣೆಗಾಗಿ ತಾನು ಮಲಗಿದ್ದ ಕೋಣೆಯಿಂದ ಹೊರಗೆ ಓಡಿ ಹೋದಳು. ಹೀಗೆ ಓಡುತ್ತಿರಬೇಕಾದ್ರೆ ತಂದೆ ದತ್ತು ಮಲಗಿದ್ದ ಚಾವಡಿಯಲ್ಲಿ ಬಿದ್ದಳು. ಆದ್ರೂ ಗಂಡ ಸಾಯಿಬಣ್ಣ ಅಟ್ಟಿಸಿಕೊಂಡು ಬಂದ.
* ಮತ್ತೆ ತಾನಿದ್ದ ಕೋಣೆಯೊಳಗೆ ಹೋದ ಸಾಯಿಬಣ್ಣ, ಮಗಳು ವಿಜಯಲಕ್ಷ್ಮಿಗೂ 6 ಬಾರಿ ಚಾಕುವಿನಿಂದ ಇರಿದ. ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ. ತೀವ್ರವಾಗಿ ಗಾಯಗೊಂಡಿದ್ದ ಪತ್ನಿ ನಾಗಮ್ಮ ಮತ್ತು ಮಗಳು ವಿಜಯಲಕ್ಷ್ಮೀ ಕೊನೆಯುಸಿರೆಳೆದರು. ಆದ್ರೆ, ಸಾಯಿಬಣ್ಣ ನಿಂಗಪ್ಪ ನಾಟಿಕಾರ್ ಮಾತ್ರ ಬದುಕುಳಿದ.
ವಿ.ಸೂ: ಅಂದಹಾಗೆ, ಅಫ್ಜಲ್ ಗುರುಗಳಿಗೆ ನೇಣು ಗಂಬ ಫಿಕ್ಸ್ ಆಗುವುದು ಯಾವಾಗ?