ವಿವೇಕಾನಂದರಿಗೆ ಹಾರ ಹಾಕಿ ಭಾಷಣ ಬಿಗಿದರೆ ಸಾಕೆ?
ಎಲ್ಲಿ ನೋಡಿದಲ್ಲಿ ದೌರ್ಜನ್ಯ, ಅಸಹ್ಯ ಹುಟ್ಟಿಸುತ್ತಿರುವ ರಾಜಕೀಯ, ತಾಂಡವವಾಡುತ್ತಿರುವ ಭ್ರಷ್ಟಾಚಾರ, ಕಂಡಕಂಡಲ್ಲಿ ದಗಲ್ಬಾಜಿ ಅನಾಚಾರ, ಮಗಳನ್ನೇ ಭೋಗಿಸುವ ತಂದೆ, ವಿದ್ಯಾರ್ಥಿನಿಯನ್ನು ಕಾಮತೃಷೆಗೆ ಬಳಸುವ ಶಿಕ್ಷಕ, ಹೆಂಡತಿಯನ್ನೇ ಕಾಮದಂಧೆಗೆ ಅಟ್ಟುವ ಗಂಡ...
ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ, ಒಳ್ಳೆಯತನಕ್ಕೆ ನೆಲೆ ಇಲ್ಲದಂತಾಗಿದೆ, ತತ್ತ್ವ ಆದರ್ಶಗಳು ಮಣ್ಣು ಪಾಲಾಗಿವೆ, ಧಾರ್ಮಿಕತೆ ಅರ್ಥವನ್ನೇ ಕಳೆದುಕೊಂಡಿದೆ. ಇನ್ನು, ಮಾನವೀಯತೆ, ಆದರ್ಶ, ದೇಶಭಕ್ತಿ, ನಿಸ್ವಾರ್ಥ ಸೇವೆಗಳನ್ನು ದುರ್ಬೀನು ಹಾಕಿ ಹುಡುಕುವಂತಹ ಸಂದರ್ಭ ಒದಗಿಬಂದಿದೆ.
ಇಂತಹ ಹೊತ್ತಿನಲ್ಲಿ ದೇಶದ ಒಳ್ಳೆಯ ಕೆಟ್ಟ ಜನರು ಸ್ವಾಮಿ ವಿವೇಕಾನಂದರನ್ನು ನೆನಪಿಸಿಕೊಳ್ಳಬೇಕಾಗಿದೆ. ದೇಶಪ್ರೇಮ, ಆದರ್ಶ, ತತ್ತ್ವಸಿದ್ಧಾಂತ, ಮಾನವೀಯತೆ, ನಿರ್ವಾರ್ಥ ಸೇವೆ, ಹಿಂದೂತ್ವವನ್ನು ಉಸಿರಾಗಿಸಿಕೊಂಡಿದ್ದ ಮಹಾನ್ ಚೇತನದ 150ನೇ ಜನ್ಮದಿನದಂದು ದೇಶದಲ್ಲಿ ಅನೇಕ ಕಾರ್ಯಕ್ರಮಗಳು ನಡೆದಿವೆ.
ವಿವೇಕಾನಂದರ ಪ್ರತಿಮೆಗೆ ಹೂವಿನ ಹಾರ ಹಾಕಿದರೆ, ಹೂವಿನಂದಲೇ ತಯಾರಿಸಿದ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಿದರೆ, ವಿವೇಕಾನಂದರ ಕುರಿತು ಗಂಟೆಗಟ್ಟಲೆ ಭಾಷಣಗಳನ್ನು ಬಿಗಿದರೆ, ಅವರ ಹುಟ್ಟುಹಬ್ಬದಂದು ಸಿಹಿ ಹಂಚಿ ಸಂಭ್ರಮಿಸಿದರೆ ಸಾಕೆ? ಉಪದೇಶ ಮಾಡಿದರೆ ಯಾರ ತಲೆಗೂ ಹೋಗುವುದಿಲ್ಲ. ಏನೇ ಆಗಲಿ ದೇಶದ ನಾನಾ ಭಾಗಗಗಳಲ್ಲಿ ಸ್ವಾಮಿ ವಿವೇಕಾನದರ ಜನ್ಮದಿನದ ಕುರಿತು ಏನೇನು ಕಾರ್ಯಕ್ರಮ ನಡೆದಿವೆ ನೋಡೋಣ. (ಪಿಟಿಐ ಚಿತ್ರಗಳು)
ಬೆಂಗಳೂರಿನಲ್ಲಿ ಶೆಟ್ಟರ್ರಿಂದ ಯುವಜಾಥಾ ಚಾಲನೆ
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಯುವಜಾಥಾಕ್ಕೆ ಚಾಲನೆ ನೀಡಿದರು. ನಂತರ, ಬಳೆಪೇಟೆಯಲ್ಲಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಸಂಸದ ಅನಂತ್ ಕುಮಾರ್ ಮತ್ತು ಅನೇಕ ಗಣ್ಯರು ಹಾಜರಿದ್ದರು.
ಗಾಂಧಿನಗರದಲ್ಲಿ ನರೇಂದ್ರ ಮೋದಿಯಿಂದ ನಮನ
6ನೇ ವೈಬ್ರಂಟ್ ಗುಜರಾತ್ ಜಾಗತಿಕ ಸಮಾವೇಶ 2013ರ ಸಮಾರೋಪ ಸಮಾರಂಭದಲ್ಲಿ ಗುಜರಾತಿನ ಗಾಂಧಿನಗರದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿಯವರು ವಿವೇಕಾನಂದರಿಗೆ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ, ವಿವೇಕಾನಂದರು ತಮಗೆ ವೈಯಕ್ತಿಕವಾಗಿ ಸ್ಫೂರ್ತಿ ತುಂಬಿದ್ದಾರೆ ಎಂದು ಮನತುಂಬಿ ಮಾತನಾಡಿದರು. ಅವರು ತಮ್ಮ ಬ್ಲಾಗಿನಲ್ಲಿ ಯುವಜನತೆಗೆ ವಿವೇಕಾನಂದರ ಸಂದೇಶವನ್ನೂ ರವಾನಿಸಿದ್ದಾರೆ.
ದೆಹಲಿಯಲ್ಲಿ ವಿದೇಶಿಯರಿಂದ ವಿವೇಕಾನಂದರ ನೆನಪು
ಅತ್ಯಾಚಾರಗಳ ರಾಜಧಾನಿ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ನವದೆಹಲಿಗೆ ವಿವೇಕಾನಂದರೇ ಸ್ಫೂರ್ತಿ ತುಂಬಬೇಕಾಗಿದೆ. ದೇಶದ ರಾಜಧಾನಿಯ ಕೆಂಪು ಕೋಟೆಯಲ್ಲಿ ಶನಿವಾರ 'ಶೋಭಾ ಯಾತ್ರೆ' ಹಮ್ಮಿಕೊಳ್ಳಲಾಗಿತ್ತು. ವಿವೇಕಾನಂದರಿಂದ ಅಣ್ಣತಮ್ಮಂದಿರೆ, ಅಕ್ಕತಂಗಿಯರೆ ಎಂದು ಕರೆಸಿಕೊಂಡಿದ್ದ ವಿದೇಶಿ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಧ್ಯಾತ್ಮಿಕ ದಿಗ್ಗಜನಿಗೆ ನಮನ ಸಲ್ಲಿಸಿದರು.
ದೆಹಲಿಯಲ್ಲಿ ಮಾತಾ ಅಮೃತಾನಂದಮಯಿ
ಕೆಂಪು ಕೋಟೆಯಲ್ಲಿ ನಡೆದ 'ಶೋಭಾ ಯಾತ್ರೆ' ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಗುರು ಮಾತಾ ಅಮೃತಾನಂದಮಯಿ ಕೂಡ ಭಾಗವಹಿಸಿ ಆಶೀರ್ವಚನ ನೀಡಿದರು.
ಗುವಾಹಾಟಿಯಲ್ಲಿ ಮಕ್ಕಳಿಂದ ಮೆರವಣಿಗೆ
ಅಸ್ಸಾಂ ರಾಜಧಾನಿ ಗುವಾಹಾಟಿಯಲ್ಲಿ ನೂರಾರು ಮಕ್ಕಳು ಪ್ರತಿವರ್ಷದಂತೆ ಸ್ವಾಮಿ ವಿವೇಕಾನಂದರ ವೇಷ ಧರಿಸಿ ಮೆರವಣಿಗೆ ನಡೆಸಿದರು. ಆ ನೋಟವೇ ಮೈನವಿರೇಳಿಸುವಂತಿತ್ತು.
ಕೋಲ್ಕತಾದಲ್ಲಿ ಸನ್ಯಾಸಿಗಳ ಜಾಥಾ
ಸ್ವಾಮಿ ವಿವೇಕಾನಂದರ ಜನ್ಮಭೂಮಿ ಕೋಲ್ಕತಾದಲ್ಲಿ ಸನ್ಯಾಸಿಗಳು ಪಂಜಿನ ಮೆರವಣಿಗೆ ಮಾಡಿ ಆಧ್ಯಾತ್ಮಿಕ ಗುರು ವಿವೇಕಾನಂದರಿಗೆ ಗೌರವ ಅರ್ಪಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿವೇಕಾನಂದರ ವಂಶ ಪರಂಪರಾಗತ ಮನೆಯ ದಾಖಲಾತಿಗಳನ್ನು ರಾಮಕೃಷ್ಣ ಮಿಷನ್ನಿಗೆ ನೀಡಿದರು.
ಬೆಂಗಳೂರಿನ ಇಂದಿರಾನಗರದಲ್ಲಿ ಅನಂತ್ ಭಾಷಣ
ಇಂದಿರಾನಗರದಲ್ಲಿ ಉದ್ಯಾನವನ ಉದ್ಘಾಟನೆಗೆ ಸಂರ್ಭಮದಿಂದ ಆಗಮಿಸುತ್ತಿರುವ ಶಾಲಾ ಬಾಲಕಿಯರು. ಅನಂತ್ ಕುಮಾರ್ ಪಾರ್ಕ್ ಉದ್ಘಾಟಿಸಿ, ದೇಶಪ್ರೇಮ ಉಕ್ಕಿಸುವ, ಪಾಕ್ ಖಂಡಿಸುವ ಮತ್ತು ವಿವೇಕಾನಂದರನ್ನು ನೆನಪಿಸುವ ಸ್ಫೂರ್ತಿದಾಯಕ ಭಾಷಣ ಮಾಡಿದರು.