ಶಂಕರ್ ಬಿದರಿ ನಿಷ್ಠೆ ಕಾಂಗ್ರೆಸ್ಸಿಗೋ, ಯಡಿಯೂರಪ್ಪಗೋ?
ಕೃಷ್ಣೆ ನೀರು ಹರಿಸಲು ಕೊಪ್ಪಳದವರೆಗೂ ಹೋಗಿರುವ ಡಾ. ಪರಮೇಶ್ವರ್ ಅವರು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಮಹಾದೇವ ಬಿದರಿ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಪ್ರಕಟಿಸಿದ್ದಾರೆ. ಇದರಿಂದ ಬಿದರಿ ಸಾಹೇಬರು ರಾಜಕೀಯ ಪ್ರವೇಶ ಮಾಡುವುದು ಬಹುತೇಕ fix ಆಗಿದೆ.
ಇದೇ ವೇಳೆ 'ಬಿದರಿಗೆ ಸುಪ್ರೀಂ ಕೋರ್ಟಿನಲ್ಲಿ ಜಯ ಸಿಕ್ಕಿರುವುದು ತಮಗೆ ಅತೀವ ಸಂತೋಷ ತಂದಿದೆ' ಎಂದು ಪರಮೇಶ್ವರ ಹೇಳಿದ್ದಾರೆ. 'ಡಿಜಿ-ಐಜಿಪಿ ಹುದ್ದೆ, ಗೌರವಕ್ಕೆ ಬಿದರಿ ಅರ್ಹರು' ಎಂದು ಸುಪ್ರೀಂಕೋರ್ಟ್ ನಿನ್ನೆಯಷ್ಟೇ ಸಾರಿತ್ತು.
ಕುತೂಹಲದ ಸಂಗತಿಯೆಂದರೆ ಶಂಕರ್ ಮಹಾದೇವ ಬಿದರಿ ಅವರು ಎಲ್ಲ ರಾಜಕೀಯ ನಾಯಕರಿಗೂ ಆಪ್ತರೇ, ಎಲ್ಲರಿಂದಲೂ (except ಗೌಡ ಫ್ಯಾಮಿಲಿ) ಸಮಾನ ಗೌರವಕ್ಕೆ ಪ್ರಾಪ್ತರಾಗುವವರೇ. ಆದರೆ ಮಾಜಿ ಮುಖ್ಯಮಂತ್ರಿ, ಕೆಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರಿದ್ದಾರಲ್ಲ, ಅವರಿಗೆ ತುಸು ಹೆಚ್ಚೇ ಅನ್ನಿಸುವಷ್ಟು ಬಿದರಿ ಆಪ್ತರು. ಹಾಗಾಗಿ ಬಿದರಿಗೆ ಈಗಾಗಲೇ KJP ಟಿಕೆಟ್ ನೀಡಿದೆ. ಮತ್ತು ಯಾವ ಕ್ಷೇತ್ರ ಎಂಬುದೂ ನಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲೇ ನಿನ್ನೆ ಶಂಕರ್ ಬಿದರಿಯವರು 'ಎಲ್ಲವನ್ನೂ ನ್ಯಾಯಾಂಗದಿಂದ ಸರಿಪಡಿಸಬೇಕು ಎಂದೇನಿಲ್ಲ. ಶಾಸಕಾಂಗ, ಕಾರ್ಯಾಂಗದಿಂದಲೂ ಮಾಡಬೇಕಾಗುತ್ತದೆ. ಈ ಎಲ್ಲದರ ಬಗ್ಗೆ ನಾನು ಯೋಜನೆ ಹಾಕಿಕೊಂಡಿದ್ದೇನೆ. ಅದು ಹೇಗೆ, ಏನು, ಯಾವ ರೀತಿ? ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ' ಎಂದು ನಿಗೂಡಾರ್ಥದಲ್ಲಿ ಹೇಳಿದ್ದರು ಎಂಬುದು ಗಮನಾರ್ಹ.