ಚುನಾವಣೆಗೆ ಸ್ಪರ್ಧಿಸಲ್ಲ, ಬ್ರೇಕ್ ಆದ್ಮೇಲೆ ಸಿಗೋಣ
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗೀಶ್ವರ್, ರಾಜಕೀಯದಿಂದ ಜಂಜಾಟದಿಂದ ತಮ್ಮ ವೈಯಕ್ತಿಕ ಬದುಕಿನ ಕಡೆಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ.
ನಾನು ಬಿಜೆಪಿ ಬಿಡುತ್ತಿಲ್ಲ. ಕಾಂಗ್ರೆಸ್ ಸೇರುತ್ತೇನೆ ಎಂಬುದು ಊಹಾಪೋಹಾ ಸುದ್ದಿ ಅಷ್ಟೇ. ಇದು ತಾತ್ಕಾಲಿಕ ಬ್ರೇಕ್. ಕನಿಷ್ಠ ಎರಡು ವರ್ಷವಾದರೂ ತಾತ್ಕಾಲಿಕ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಯೋಗೀಶ್ವರ್ ಹೇಳಿದರು.
ಕುಟುಂಬ ಮುಖ್ಯ: ಸಿ.ಪಿ ಯೋಗೇಶ್ವರ್ ಅವರು ಮಂಜುಳಾ ಕುಮಾರಿ ಎಂಬ ಬೇರೆ ಜಾತಿ ಮಹಿಳೆಯನ್ನು ಮದುವೆಯಾಗಿದ್ದರು. ಇವರಿಗೆ ನಿಶಾ ಮತ್ತು ಶ್ರವಣ್ ಎಂಬ ಮಕ್ಕಳಿದ್ದಾರೆ. ಇಂಜಿನಿಯರಿಂಗ್ ಓದಿರುವ ನಿಶಾ, ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ ಮುಗಿಸಿ ಬಂದಿದ್ದಾರೆ.
ಒಂದು ವೇಳೆ ಯೋಗಿ ಅವರು ಜೈಲಿಗೆ ಹೋಗುವ ಸಂದರ್ಭದ ಬಂದರೆ, ಮಗಳು ನಿಶಾರನ್ನು ಚನ್ನಪಟ್ಟಣ ಕ್ಷೇತ್ರದಿಂದ ಕಣಕ್ಕಿಳಿಸುವ ಇರಾದೆ ಇಟ್ಟುಕೊಂಡಿದ್ದಾರೆ.
ಉತ್ತರ ಧ್ರುವದಿಂ ದಕ್ಷಿಣ ಧ್ರುವಕ್ಕೂ ಚಿತ್ರದ ಸಾಂಗ್ ನಲ್ಲಿ ನಟಿ ಪ್ರೇಮಾ ಜೊತೆ ಅಗತ್ಯಕ್ಕಿಂತ ಹೆಚ್ಚಾಗಿ ಬೆಡ್ ರೂಮ್ ನಲ್ಲಿ ಹಾಡಿ ಕುಣಿದಿದ್ದ ನಟ ಯೋಗೇಶ್ವರ್ ಅವರನ್ನು ದಿಕ್ಕರಿಸಿ ಮೊದಲ ಪತ್ನಿ ಮಂಜುಳಾ ಮನೆ ಬಿಟ್ಟು ಹೊರ ನಡೆದಿದ್ದರು.
ಈ ನಡುವೆ ಪತ್ನಿ ಸ್ನೇಹಿತೆ ಬಿವಿ ಶೀಲಾ ಎಂಬ ಮಹಿಳೆ ಪರಿಚಯ, ಸ್ನೇಹ ಗಳಿಸಿದ್ದ ಯೋಗೇಶ್ವರ ಆಕೆಯನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಿದ, ಇದಕ್ಕೂ ಮುನ್ನ ಶಾಸ್ತ್ರೋಕ್ತವಾಗಿ ಮೊದಲ ಪತ್ನಿಗೆ ಡಿವೊರ್ಸ್ ನೀಡಿದ್ದರು.
ಸಂಸಾರದಲ್ಲಿ ಇಷ್ಟೆಲ್ಲ ರಾದ್ಧಾಂತವಾದರೂ, ಯೋಗೇಶ್ವರ್ ಉಪ ಚುನಾವಣೆಗೆ ಸ್ಪರ್ಧಿಸಿದ್ದಾಗ ಮೊದಲ ಪತ್ನಿ ಮಗಳು ನಿಶಾ ಅಪ್ಪನಿಗೆ ಬೆಂಬಲಿಸಿದ್ದರು. ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಈಗ ಜೈಲಿನ ಹಾದಿ ಹಿಡಿದಿರುವ, ವೈರಾಗ್ಯ ಮಾತನಾಡುವ ಯೋಗೇಶ್ವರ್ ತಮ್ಮ ಮಗಳು ನಿಶಾಳನ್ನು ತನ್ನ ಕ್ಷೇತ್ರದಲ್ಲಿ ನಿಲ್ಲಿಸಿ ರಾಜಕೀಯಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಬಿಜೆಪಿ ಹೈಕಮಾಂಡ್ ಮುನಿಸಿಕೊಂಡಾಗ 'ನಾನಿದ್ದೀನಿ ಬಿಡು' ಎನ್ನುತ್ತಿದ್ದ ಯಡಿಯೂರಪ್ಪ ಅವರು ಪಕ್ಷ ಬಿಟ್ಟಿದ್ದಾರೆ. ಯೋಗೇಶ್ವರ ಕೆಜೆಪಿ ಸೇರುವ ಬಗ್ಗೆ ಸುದ್ದಿ ಗಾಳಿ, ನೀರು, ಬಸ್ ನಲ್ಲೂ ಹರಿದಾಡಿಲ್ಲ. ಸಿಪಿವೈ ವೈರಾಗ್ಯ ಎಷ್ಟು ದಿನ ಕಾದು ನೋಡಬೇಕಿದೆ.
ಸಿಪಿವೈಗೆ ವೈರಾಗ್ಯ ಏಕೆ?: ಮೆಗಾಸಿಟಿ ಹಗರಣದ ಆರೋಪಿ, ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ಸಚಿವ ಸ್ಥಾನ ಕಳೆದುಕೊಳ್ಳುವ ಎಲ್ಲ ಸಾಧ್ಯತೆಗಳು ಇದೆ ಎಂದು ಸದಾನಂದ ಗೌಡರ ಕಾಲದಿಂದಲೂ ಪ್ರತಿಧ್ವನಿಸುತ್ತಿತ್ತು.
ಆದರೆ, ಅರಣ್ಯ ಸಚಿವರಾಗಿ ಯೋಗಿ ಮುಂದುವರೆದಿದ್ದಾರೆ. ಮೆಗಾಸಿಟಿ ಹಗರಣ ಸಂಬಂಧ ಯೋಗೀಶ್ವರ್ ವಿರುದ್ಧ ಒಂದಲ್ಲ ಎರಡಲ್ಲ 14 ಪ್ರಕರಣಗಳು ಎಸಿಎಂಎಂ ಮತ್ತು ವಿಶೇಷ ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ದಾಖಲಾಗಿದೆ. ಇದೆಲ್ಲ ಯೋಗಿ ಅವರನ್ನು ಹೈರಾಣಾಗಿಸಿದೆ.
ವಜ್ರಗಿರಿ ಟೌನ್ಶಿಪ್ ಯೋಜನೆಯಲ್ಲಿ ಸಾವಿರಾರು ಸಾರ್ವಜಕರಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಸಿ.ಪಿ ಯೋಗೀಶ್ವರ್ ಹಾಗೂ ಹಾಗೂ ಅವರ ಪತ್ನಿ ಮಂಜು ಕುಮಾರಿ ಮತ್ತು ಕುಟುಂಬ ಸದಸ್ಯರ ಮೇಲೂ ಆರೋಪ ಕೇಳಿ ಬಂದಿದೆ.
ಭಾರತೀಯ ದಂಡ ಸಂಹಿತೆ 420, 404, 405, 464, 465, 468, 120(ಎ) 120 'ಬಿ' ಅಡಿಯಲ್ಲಿ 6 ಕ್ರಿಮಿನಲ್ ಖಾಸಗಿ ದೂರು ಮತ್ತು ಕಂಪನಿ ಕಾಯ್ದೆ ಉಲ್ಲಂಘನೆ ಸಂಬಂಧ 8 ಪ್ರಕರಣಗಳು ಸೇರಿದಂತೆ ಒಟ್ಟು 14 ಪ್ರಕರಣಗಳನ್ನು ದಾಖಲಿಸಲಾಗಿದೆ.