ಚಂದ್ರಮನಿಗೆ ಚಕೋರಿ ಚಿಂತೆ,ಬಿಎಸ್ವೈಗೆ ಶೋಭಕ್ಕನ ಚಿಂತೆ
ಅವರಿಗಿರುವ ಚಿಂತೆಯೇ ಬೇರೆ. ಅದೇನೋ ಹೇಳ್ತಾರಲ್ಲಾ 'ಚಂದ್ರಮನಿಗೆ ಚಕೋರಿ ಚಿಂತೆಯಾದರೆ ನಮ್ಮ ಕೆಜೆಪಿ ಅಧ್ಯಕ್ಷ ಯಡಿಯೂರಪ್ಪನವರಿಗೆ ಶೋಭಾ ಕರಂದ್ಲಾಜೆ ಚಿಂತೆ' ಎಂದು ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
'ಕೈ ನಡಿಗೆ ಕೃಷ್ಣೆಯಡೆಗೆ' ಘೋಷಣೆಯೊಂದಿಗೆ ಕಾಂಗ್ರೆಸ್ ನಾಯಕರ ಪಾದಯಾತ್ರೆ ಸೋಮವಾರ (ಜ 7) ಬೆಳಗ್ಗೆ 10:30ಕ್ಕೆ ಆರಂಭವಾಗಿದೆ. ಹೊಸಪೇಟೆಯ ಗಾಂಧಿ ವೃತ್ತದಿಂದ ಟಿ ಬಿ ಡ್ಯಾಂವರೆಗಿನ 4 ಕಿ.ಮೀ. ಅಂತರವನ್ನು ಕ್ರಮಿಸಿ ಕಾಂಗ್ರೆಸ್ ನಾಯಕರು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ರಾಜ್ಯದಲ್ಲಿ ಏನಾಗುತ್ತಿದೆ, ಆಡಳಿತ ಯಂತ್ರ ಎತ್ತ ಸಾಗುತ್ತಿದೆ ಎಂದು ಖುದ್ದು ಮುಖ್ಯಮಂತ್ರಿಗಳಿಗೇ ಅರಿವಿಲ್ಲ. ಕ್ಯಾಬಿನೆಟ್ ದರ್ಜೆ ಸಚಿವರೆಲ್ಲರೂ ಮುಖ್ಯಮಂತ್ರಿಗಳಾಗಿಬಿಟ್ಟಿದ್ದಾರೆ.
ಅವರಿಗೆ ಯಾವಾಗ ಯಡಿಯೂರಪ್ಪ ಸರಕಾರ ಬೀಳಿಸುತ್ತಾರೋ ಅನ್ನೋ ಭಯದಿಂದ ಆಡಳಿತ ನಡೆಸುತ್ತಿದ್ದಾರೆ ಎಂದು ಇಬ್ರಾಹಿಂ ಟೀಕಿಸಿದ್ದಾರೆ.
ಕಿಕ್ಕಿರಿದು ಸೇರಿದ್ದ ಜನಸ್ತೋಮವನ್ನು ಉದ್ದೇಶಿಸಿ ಉತ್ತರ ಕರ್ನಾಟಕ ಶೈಲಿಯಲ್ಲಿ ಮಾತನಾಡುತ್ತಿದ್ದ ಇಬ್ರಾಹಿಂ, ಗಣಿಧಣಿ ಜೈಲು ಸೇರುವ ಮುನ್ನ ಬಳ್ಳಾರಿ ಜಿಲ್ಲೆ ಗೂಂಡಾ ಜಿಲ್ಲೆಯಾಗಿತ್ತು. ದುಡ್ಡಿನ ಅಹಂಕಾರದಿಂದ ಮೆರೆಯುತ್ತಿದ್ದ ಅವರಿಗೆ ದೇವರು ಸರಿಯಾದ ಪಾಠ ಕಲಿಸಿದ್ದಾನೆ.
ವರ್ಷ ವರ್ಷ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತಿದ್ದರು. 70 ಲಕ್ಷ ಮೌಲ್ಯದ ಚಿನ್ನದ ಖಡ್ಗ ಅವರಿಗೆ ರೆಡ್ಡಿಗಳು ನೀಡುತ್ತಿದ್ದರು.
ಜನಾರ್ಧನ ರೆಡ್ಡಿ ಜೈಲು ಸೇರುವ ಮುನ್ನ 'ವೋ ಮೇರಾ ಬೇಟಾ ಹೇ' ಅನ್ನುತ್ತಿದ್ದ ಸುಷ್ಮಾ ಮೇಡಂ, ರೆಡ್ಡಿ ಜೈಲು ಸೇರಿದ ನಂತರ 'ವೋ ಮೇರಾ ಬೇಟಾ ನಹಿ ಹೇ' ಎನ್ನುತ್ತಿದ್ದಾರೆ ಎಂದು ಇಬ್ರಾಹಿಂ ಲೇವಡಿ ಮಾಡಿದ್ದಾರೆ.
ಯಡಿಯೂರಪ್ಪನವರ ಹೊಸ ಪಕ್ಷದಿಂದ ಬಿಜೆಪಿಗೆ ತೊಂದರೆ ಹೊರತು ಕಾಂಗ್ರೆಸಿಗಲ್ಲ. ಮುಖ್ಯಮಂತ್ರಿಯಾಗಿದ್ದಾಗ ರಾಜ್ಯವನ್ನು ಲೂಟಿ ಮಾಡಿದ ಹಣ ಅವರ ಬಳಿ ಬೇಕಾದಷ್ಟಿದೆ ಎಂದು ಇಬ್ರಾಹಿಂ ಯಡಿಯೂರಪ್ಪ ವಿರುದ್ದ ಕಿಡಿಕಾರಿದ್ದಾರೆ.