ಆರೆಸ್ಸೆಸ್ ಗೂ ತಾಲಿಬಾನ್ ಗೂ ವ್ಯತ್ಯಾಸವಿಲ್ಲ
ದೇಶ ಅಭಿವೃದ್ಧಿ ಪಥದಲ್ಲಿರುವಾಗ ನಮ್ಮನ್ನು 18ನೇ ಶತಮಾನಕ್ಕೆ ಕರೆದೊಯ್ಯುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ. ಆರೆಸ್ಸೆಸ್ ಹಾಗೂ ತಾಲಿಬಾನಿಗಳ ಉದ್ದೇಶ ಒಂದೇ ರೀತಿಯಾಗಿದೆ ಎಂದು ದಿಗ್ವಿಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರಿಗೆ ವಸ್ತ್ರಸಂಹಿತೆ, ರಾತ್ರಿ ವೇಳೆ ಅಡ್ಡಾಟಕ್ಕೆ ನಿರ್ಬಂಧ ಹೇರುವುದು ಮೂಲಭೂತವಾದಿಗಳ ಕೆಲಸ. ತಮ್ಮ ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಇನ್ನೊಬ್ಬರ ಮೇಲೆ ನಿರ್ಬಂಧ ಹೇರಲು ಹೊರಟಿದ್ದಾರೆ ಎಂದು ದಿಗ್ವಿಜಯ್ ಹೇಳಿದರು.
ಭಾರತೀಯ ಸಂಸ್ಕೃತಿಯ ಸಂರಕ್ಷರು ಎಂದು ತಿಳಿದಿರುವ ಆರೆಸ್ಸೆಸ್ ನವರು ಇನ್ನು ಕೆಲವು ದಿನಗಳು ಕಳೆದರೆ ಜೀನ್ಸ್ ಧರಿಸಬೇಡಿ, ಕಂಪ್ಯೂಟರ್ ನೋಡಬೇಡಿ, ಸಿನಿಮಾ ವೀಕ್ಷಿಸಬೇಡಿ ಕೊನೆಗೆ ಮೊಬೈಲ್ ಫೋನ್ ಬಳಸಬೇಡಿ ಎಂದು ಮಹಿಳೆಯರಿಗೆ ಫರ್ಮಾನು ಹೊರಡಿಸುತ್ತಾರೆ.
ಚಡ್ಡಿ ಏಕೆ ಧರಿಸುತ್ತೀರಿ?: ಪಾಶ್ಚಿಮಾತ್ಯ ಸಂಸ್ಕೃತಿಯಿಂದ ದೇಶ ಹಾಳಾಗುತ್ತಿದೆ ಎಂದು ಬೊಬ್ಬೆ ಹಾಕುವ ಆರೆಸ್ಸೆಸ್ ನ ಸ್ವಯಂ ಸೇವಕರು ಮಾತ್ರ ಪಾಶ್ಚಿಮಾತ್ಯರಂತೆ ಶಾರ್ಟ್ಸ್(ಚಡ್ಡಿ) ಧರಿಸುವುದೇಕೆ? ಎಂದು ದಿಗ್ವಿಜಯ್ ಪ್ರಶ್ನಿಸಿದ್ದಾರೆ.
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಹಿಳೆ, ಮದುವೆ ಬಗ್ಗೆ ಗುತ್ತಿಗೆ ಎಂಬ ಪದ ಬಳಸಿರುವುದು ಅವರ ಸಿದ್ಧಾಂತವನ್ನು ಎತ್ತಿ ತೋರಿಸುತ್ತದೆ. ಪುರುಷ, ಮಹಿಳೆಯರ್ ಉದ್ಯೋಗ, ದೈನಂದಿನ ಕಷ್ಟ ನಷ್ಟ ಬಗ್ಗೆ ಇವರೇಗೇನು ಗೊತ್ತು?
ಮಧ್ಯಪ್ರದೇಶ ಸಚಿವ ಕೈಲಾಶ್ ವಿಜಯ್ ವಾರ್ಗಿಯಾ ಅವರು ಮಹಿಳೆಯರಿಗೆ ಲಕ್ಷ್ಮಣ ರೇಖೆ ಹಾಕುವ ಬಗ್ಗೆ ಪ್ರತಿಕ್ರಿಯಿಸಿದ ದಿಗ್ವಿಜಯ್, ನಾನೇನಾದರೂ ಸಿಎಂ ಆಗಿದ್ದರೆ ತಕ್ಷಣವೇ ಅಂಥ ಹೇಳಿಕೆ ನೀಡಿದ ಸಚಿವರನ್ನು ಕಿತ್ತು ಹಾಕುತ್ತಿದ್ದೆ ಎಂದರು.
ಸಚಿವ ಕೈಲಾಶ್ ಹೇಳಿಕೆ ಮಹಿಳೆಯರಿಗೆ ಮಾತ್ರವಲ್ಲ. ರಾಮ, ಸೀತೆ, ರಾಮಾಯಣಕ್ಕೆ ಅಪಮಾನಕರ ಎಂದು ದಿಗ್ವಿಜಯ್ ಹೇಳಿದ್ದಾರೆ.