ಕೆಜೆಪಿಗೆ ದೇಣಿಗೆ ಸಂಗ್ರಹಿಸುತ್ತಿರುವ ಶೋಭಾ ?
ಬಿಜೆಪಿಯಲ್ಲಿದ್ದೂ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಶೋಭಾ ಕರಂದ್ಲಾಜೆ ವಿರುದ್ದ ಪಕ್ಷದ ಬಹುತೇಕ ಶಾಸಕರು ಮತ್ತು ಸಚಿವರು ಸಂಸದೀಯ ಮಂಡಳಿಯ ಸಭೆಯಲ್ಲಿ ತಿರುಗಿ ಬಿದ್ದಿದ್ದಾರೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.
ಇಂಧನ ಸಚಿವಾಯಲದ ಪ್ರಭಾವ ಬಳಸಿಕೊಂಡು ಶೋಭಾ ಕರಂದ್ಲಾಜೆ ತಮ್ಮ ರಾಜಕೀಯ 'ಮೆಂಟರ್' ಯಡಿಯೂರಪ್ಪ ಪಕ್ಷದ ಪರವಾಗಿ ದೇಣಿಗೆ ಸಂಗ್ರಹಿಸುತ್ತಿದಾರೆ ಎನ್ನುವು ಸುದ್ದಿ ವರಿಷ್ಠರ ಗಮನಕ್ಕೆ ಬಂದಿದೆ.
ಯಡಿಯೂರಪ್ಪ ಪಕ್ಷದಲ್ಲಿದ್ದಾಗಲೂ, ಬಿಟ್ಟಾಗಲೂ ಅವರ ಜೊತೆ ಗುರುತಿಸಿಕೊಂಡಿರುವ ಶೋಭಾ, ಬಿಜೆಪಿಯಲ್ಲಿ ಇದ್ದುಕೊಂಡೇ ಕೆಜೆಪಿಗೆ ಪರೋಕ್ಷವಾಗಿ ದೇಣಿಗೆ ಸಂಗ್ರಹಿಸಲು ಇಂಧನ ಸಚಿವಾಲಯದ ಮೂಲಕ ತಮ್ಮ ಕೈಲಾದ 'ಭರಪೂರ' ಸಹಾಯ ಮಾಡುತ್ತಿದ್ದಾರೆ ಎನ್ನುವ ಸುದ್ದಿ ತಡವಾಗಿ ಪಕ್ಷದ ದೊಡ್ಡ ತಲೆಗಳಿಗೆ ಗಮನಕ್ಕೆ ಬಂದಿದೆ.
ಶನಿವಾರ (ಜ 5) ನಡೆದ ಬಿಜೆಪಿ ಸಭೆಯಲ್ಲಿ ಯಡಿಯೂರಪ್ಪ ಆಪ್ತ ಸಚಿವರುಗಳಾದ ಶೋಭಾ, ಉದಾಸಿ, ಬಸವರಾಜ್ ಬೊಮ್ಮಾಯಿ, ರೇಣುಕಾಚಾರ್ಯ ಮುಂತಾದವರು ಭಾಗವಹಿಸಿರಲಿಲ್ಲ.
ಈ ಸಂದರ್ಭದಲ್ಲಿ ಶೋಭಾ ಇತ್ತೀಚೆಗೆ ಗೃಹ ಸಚಿವಾಲಯದ ವಿರುದ್ದ ನೀಡಿದ ಹೇಳಿಕೆ, ಯಡಿಯೂರಪ್ಪ ಮೇಲಿನ ನಿಷ್ಠೆ, ದೇಣಿಗೆ ಸಂಗ್ರಹಣೆ ಮುಂತಾದ ಆಪಾದನೆಗಳಿವೆ. ತಕ್ಷಣವೇ ಅವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎನ್ನುವ ಹಠಕ್ಕೆ ಬಹಳಷ್ಟು ಸಚಿವರು ಬಿದ್ದಿದ್ದರು ಎನ್ನಲಾಗಿದೆ.
ಒಂದು ಹಂತದಲ್ಲಿ ಶೋಭಾ ವಿರುದ್ದ ಕ್ರಮ ತೆಗೆದುಕೊಂಡು ಯಡಿಯೂರಪ್ಪಗೆ ಶಾಕ್ ನೀಡಲು ಬಿಜೆಪಿ ನಿರ್ಧರಿಸಿದ್ದರೂ, ದುಡುಕದೇ ಹೆಜ್ಜೆ ಇಡಲು ನಿರ್ಧರಿಸಿದ್ದಾರೆನ್ನಲಾಗಿದೆ.
ಹಾಗಾಗಿ ತಾಜಾ ಬೆಳವಣಿಗೆಯ ಪ್ರಕಾರ ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಲೆದಂಡ ಸದ್ಯಕ್ಕಿಲ್ಲ, ಅಥವಾ ಇಲ್ಲವೇ ಇಲ್ಲ.