ವಿಧಾನಸಭೆ ಚುನಾವಣೆ: ಪಕ್ಷ 5, ಸಿಎಂ ಅಭ್ಯರ್ಥಿ 'ಆರು'?
ಬೆಂಗಳೂರು, ಜ.7: ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣೆ ದಿನಾಂಕ ಘೋಷಣೆಯೊಂದೇ ಬಾಕಿಯಿರುವುದು. ಇದರ ಸುಳಿವನ್ನು ಯಾವಾಗಲೋ ಆರಿತ ರಾಜಕೀಯ ಪಕ್ಷಗಳು ಶಕ್ತಿ ಮೀರಿ ತಯಾರಿ ನಡೆಸಿವೆ. ಈ ಸಂದರ್ಭದಲ್ಲಿ ಮುಂದೆ ವಿಧಾನಸೌಧದ ಮೂರನೆಯ ಮಹಡಿಯಲ್ಲಿ ಕುಳಿತುಕೊಳ್ಳುವುದು ತಮ್ಮ ಕ್ಯಾಂಡಿಡೇಟೇ ಎಂದು ಕನಸು ಕಾಣುತ್ತಿರುವ ಹಲವಾರು ಪಕ್ಷಗಳು ಮತದಾರನ ಮುಂದೆ ಠಳಾಯಿಸುತ್ತಿವೆ.
ಹಾಗೆ ನೋಡಿದರೆ ವಿಧಾನಸೌಧದ ಮೂರನೆಯ ಮಹಡಿಯಲ್ಲಿ ಸಿಎಂ ಗಾದಿ ಮೇಲೆ ಟವಲ್ ಹಾಕಿರುವವರು ಅನೇಕ ಮಂದಿಯಿದ್ದಾರೆ. ಮತ್ತು ಇನ್ನು ಕೆಲವರು, ಐದು ವರ್ಷಗಳ ಹಿಂದೆ 13ನೇ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ದಿನದಿಂದಲೂ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಹೇಳುತ್ತಾ ಬಂದವರೂ ಇದ್ದಾರೆ.
ಸಿಎಂ ಕೂಸು, ಕನಸು-ಕಸುವು: ಈ ಮಧ್ಯೆ ಹೊಸದಾಗಿ ಟೋಪಿ, ಛತ್ರಿ ಹಂಚುತ್ತಾ ಬಿಎಸ್ಆರ್ ಕಾಂಗ್ರೆಸ್ ಅನ್ನು ಅಧೀಕಾರಕ್ಕೆ ತರಲು ಶ್ರಮಿಸುತ್ತಿರುವ ಶ್ರೀರಾಮುಲು ಅವರಿಂದ ಹಿಡಿದು ಒಂದೂವರೆ ವರ್ಷದ ಹಿಂದೆ ದಿಢೀರನೆ ಸಿಎಂ ಪಟ್ಟದಿಂದ ಕೆಳಗುರುಳಿದ ಯಡಿಯೂರಪ್ಪವರೆಗೂ ಅನೇಕ ಮಂದಿ ಸಿಎಂ ಕನಸು ಕಾಣುತ್ತಿದ್ದಾರೆ. ಆದರೆ ಇವರುಗಳಲ್ಲಿ/ ಇವರು ಪ್ರತಿನಿಧಿಸುವ ಪಕ್ಷಗಳಲ್ಲಿ ಎಷ್ಟು ಕಸುವಿದೆ ಎಂಬುದನ್ನು ಅವಲಂಬಿಸಿ ಕೊನೆಗೆ ಮತದಾರರು ನಿರ್ಣಯಿಸುತ್ತಾರೆ.
ಕಳೆದ
ವಾರ
ಆಡಳಿತಾರೂಢ
ಪಕ್ಷದ
ವತಿಯಿಂದ
ಮುಖ್ಯಮಂತ್ರಿ
ಅಭ್ಯರ್ಥಿ
ಘೋಷಣೆಯಾಗಿರುವ
ಸಂದರ್ಭದಲ್ಲಿ
ಬಹುತೇಕ
ಇತರೆ
ಪಕ್ಷಗಳಲ್ಲೂ
ಇಂತಹ
ಪ್ರಯತ್ನಗಳು
ಆಖೈರಾಗಿವೆ
ಎನ್ನಬಹುದು.
ಈ
ಸಂದರ್ಭದಲ್ಲಿ
ಆಯ್ದ
ಐದು
ಪಕ್ಷಗಳ
ಐವರು
ಮುಖ್ಯಮಂತ್ರಿ
ಅಭ್ಯರ್ಥಿಗಳತ್ತ
ಐದು
ಇಣುಕು
ನೋಟ
ಇಲ್ಲಿದೆ.
ಜತೆಗೆ,
ಕೊಸರಿಗೆ
ಇರಲಿ
ಎಂದು
ಒಂದು
Dark
Horse
ಬಗ್ಗೆಯೂ
ಒಂದಷ್ಟು
ಇಲ್ಲಿ
ಚರ್ಚಿಸಲಾಗಿದೆ.
ಪಕ್ಷಗಳೇನೋ
ಇವರೇ
ನಮ್ಮ
ಸಿಎಂ
ಅಭ್ಯರ್ಥಿಗಳು
ಎಂದು
ಘೋಷಿಸಿಯಾಗಿದೆ.
ಆದರೆ
ಮತದಾರ
ಅಧಿಕೃತ
ಮುದ್ರೆಯೊತ್ತಬೇಕಿದೆ,
ಅಷ್ಟೇ.
ಬಿಎಸ್ಆರ್ ಕಾಂಗ್ರೆಸ್ ಮತ್ತು ಶ್ರೀರಾಮುಲು:
ಮೊದಲಿಗೆ ಬಿಎಸ್ಆರ್ ಕಾಂಗ್ರೆಸ್ ಅನ್ನೇ ಪರಿಗಣಿಸುವುದಾದರೆ ಬಿ. ಶ್ರೀ. ರಾ.ಮುಲು (BSR) ಸಿಎಂ ಪಟ್ಟವನ್ನೇರುವವರ ಪೈಕಿ ಮುಂಚೂಣಿಯಲ್ಲಿದ್ದಾರೆ. ಕೂಸು ಹುಟ್ಟುವ ಮುಂಚೆಯೇ ಕುಲಾವಿ ಹೊಲಿಸಿಕೊಂಡು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವುದು ಅವರ ಏಕೈಕ ಮತ್ತು ಅನಿವಾರ್ಯ ಗುರಿಯಾಗಿದೆ. ಆ ನಿಟ್ಟಿನಲ್ಲಿ ಅವರು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದೂ ಸೋಜಿಗವಾಗಿದೆ. ಬಿಎಸ್ಆರ್ ಕಾಂಗ್ರೆಸ್ ಸೋಲು-ಗೆಲುವು ದೂರಗಾಮಿ ಪರಿಣಾಮ ಬೀರಲಿದೆ. ರಾಮುಲು ಸಿಎಂ ಆಗುವುದು ಖುದ್ದು ರಾಮುಲು ಸೇರಿದಂತೆ ಯಾರಿಗೇ ಆಗಲಿ ಅಚ್ಚರಿ ತರುವುದರಲ್ಲಿ ಅನುಮಾನವಿಲ್ಲ.
ಬುಗುರಿಯಂತಾಡಲು ಯಡಿಯೂರಪ್ಪ ರೆಡಿ:
ನಿನ್ನೆಯಷ್ಟೇ ದೇವೇಗೌಡರು ಹೇಳಿದಂತೆ ಕಾಂಗ್ರೆಸ್ ಪಕ್ಷದ ಬುಗುರಿಯಾಗಿ ಇವರು ಮುಖ್ಯಮಂತ್ರಿ ಪಟ್ಟಕ್ಕೇರುತ್ತಾರೋ ಅಥವಾ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತಾರೋ ಅಥವಾ ಶಕ್ತಿಹೀನರಾಗಿ ಕನಿಷ್ಠ ಶಾಸಕರಾಗಿಯಾದರೂ ಆಯ್ಕೆಯಾಗುವಲ್ಲಿ ಸೋಲುತ್ತಾರೋ ಮತದಾರ ಹೇಳಬೇಕು.ಆದರೆ ಯಾರೇನೇ ಹೇಳಲಿ/ ಖುದ್ದು ಬಿಎಸ್ವೈ ತಮ್ಮ KJP ಅಧಿಕಾರಕ್ಕೆ ಬಂದರೂ ತಾವು ಮುಖ್ಯಮಂತ್ರಿಯಾಗೊಲ್ಲ ಎಂದು ಘೋಷಿಸಿದ್ದಾರಾದರೂ ಪಕ್ಷ ಅಧಿಕಾರಕ್ಕೆ ಬಂದರೆ ಬಿಎಸ್ವೈ ಸಿಎಂ ಆಗೇ ಆಗುವುದರಲ್ಲಿ ಮತದಾರನಿಗೆ ಅನುಮಾವಿಲ್ಲ. ಆದರೆ ಬಿಎಸ್ವೈರನ್ನು ಆರಿಸಿ, ವಿಧಾನಸೌಧದವರೆಗೂ ಕಳಿಸಿಕೊಡಬೇಕಷ್ಟೇ.
ಧೃತರಾಷ್ಟ್ರನೋ, ಭೀಷ್ಮ ಪಿತಾಮಹನೋ?
ತಮ್ಮ ಪುತ್ರ ವಾಮಮಾರ್ಗದಿಂದ ಸಿಎಂ ಆಗಿದ್ದನ್ನು ಸಹಿಸದ ದೇವೇಗೌಡಗೆ JDS ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿಯನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬುದು ಜೀವಮಾನದ ಹಂಬಲವಾಗಿದೆ. ಇವರು ಇಚ್ಚಾ ಮರಣಿಯಂತೆ ಭೀಷ್ಮ ಪಿತಾಮಹನೋ ಅಥವಾ ಪುತ್ರ ವ್ಯಾಮೋಹದ ಧೃತರಾಷ್ಟ್ರನೋ ಎಂಬುದನ್ನು ಮತದಾರರೇ ನಿರ್ಣಯಿಸಬೇಕು.ಅಂದಹಾಗೆ ದೇವೇಗೌಡರೂ 'ವಾಮ'ಮಾರ್ಗದಿಂದಲೇ ಅಲ್ವೇ ಪ್ರಧಾನಿಯಾಗಿದ್ದು. ಅಂದರೆ ವಾಮ ಪಕ್ಷಗಳ ಬೆಂಬಲಿತ ಪ್ರಧಾನಿಯಾಗಿದ್ದು.
ಕಾಂಗ್ರೆಸ್ ಸಿಎಂ ಪರಮೇಶ್ವರನೇ ಬಲ್ಲ:
ಮುಂದಿನ ಚುನಾವಣೆಗೆ ಪರಮೇಶ್ವರದೇ ನಾಯಕತ್ವ ಎಂದು ಘೋಷಿಸುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಈಗಲೇ ಒಂದು ತೀರ್ಮಾನಕ್ಕೆ ಬಂದಿರುವುದು ನಿಜಕ್ಕೂ ಸೋಜಿಗವಾಗಿದೆ. ಸಾಲು ಸಾಲು ನಾಯಕರ ಮಧ್ಯೆ ಪರಮೇಶ್ವರ್ ಅವರ ಹೆಸರು ಸ್ಪಷ್ಟವಾಗಿರುವುದು ಕುತೂಹಲಕಾರಿಯಾಗಿದೆ. ಅಥವಾ ಅದುವೇ ಪಕ್ಷಕ್ಕೆ ಮುಳುವಾಗುವ ಸಾಧ್ಯತೆಯೂ ಇದೆ. ಚುನಾವಣೆ ಫಲಿತಾಂಶ ನೋಡಿಕೊಂಡು ಪಕ್ಷವು ಪೂರ್ವಯೋಚಿತ ರೀತಿಯಲ್ಲಿ ಕೊನೆಯ ಕ್ಷಣದಲ್ಲಿ ಪರಮೇಶ್ವರ್ ಅವರನ್ನು ಹಿಟ್ ವಿಕೆಟ್ ಮಾಡುತ್ತದಾ? ಎಂಬ ಅನುಮಾನವೂ ಕಾಡುತ್ತಿದೆ.
ಜಗದೀಶನೇ ಸೂತ್ರಧಾರ
ಪಕ್ಷದ ವರಿಷ್ಠ ಅನಂತಕುಮಾರ್ ಕಳೆದ ವಾರ ದೊಡ್ಡ ರಾಜಕೀಯ ದಾಳವನ್ನೇ ಉರುಳಿಸಿದ್ದಾರೆ. ಇದು ಮುಂದಿನ ಚುನಾವಣೆಗೆ ಸ್ಪಷ್ಟ ದಿಕ್ಕನ್ನೂ ನೀಡಿದೆ. ಎಲ್ಲರ ಲೆಕ್ಕಾಚಾರಗಳನ್ನೂ ತಲೆಕೆಳಗು ಮಾಡಿ, ಖುದ್ದು ಶೆಟ್ಟರ್ ಅವರನ್ನೂ ಸೇರಿದಂತೆ ಎಲ್ಲರನ್ನೂ ಆಶ್ಚರ್ಯದ ಮಡುವಿಗೆ ತಳ್ಳಿ, ಮುಂದಿನ ಚುನಾವಣೆಗೆ ಬಿಜೆಪಿ ನಾಯಕನ ಹೆಸರನ್ನು ಘೋಷಿಸಿರುವುದು ಆಶ್ಚರ್ಯ. ಒಂದೇ ಏಟಿಗೆ ಹಲವಾರು ದಳಗಳನ್ನು ಉದುರಿಸಿರುವ ಅನಂತಕುಮಾರ್ ದಾಳ, ಚುನಾವಣೆಯಲ್ಲಿ ಕಮಲಕ್ಕೆ ಹೇಗೆ ನೀರೆರೆಯಬಲ್ಲದು ಎಂಬುದು ಇಂಟರೆಸ್ಟಿಂಗ್ ಆಗಿದೆ.
ಡಾರ್ಕ್ ಹಾರ್ಸೋ ಓಡುವ ಕುದುರೆಯೋ?
CM ಕ್ಯಾಂಡಿಡೇಟ್ ಬಗ್ಗೆ ಸದ್ಯಕ್ಕೆ ಈ ಪಕ್ಷಗಳಲ್ಲಿ ಗೊಂದಲ ಇದ್ದಂತಿಲ್ಲ. ಆದರೆ ಮತದಾರನಿಗೇ ಗೊಂದಲವಿದೆ. ಕಳೆದೈದು ವರ್ಷಗಳ ರಾಜಕೀಯ ನೋಡಿದರೆ ನಕಾರಾತ್ಮಕ ಮನೋಭಾವವೇ ಇಲ್ಲಿ ಹೆಚ್ಚಾಗಿ ಕೆಲಸ ಮಾಡಲಿದೆ.ಕರ್ನಾಟಕದ ರಾಜಕೀಯವನ್ನು ಇನ್ನಿಲ್ಲದಂತೆ ಆಡಿಸಿ, ಬೀಳಿಸಿದ ಪಕ್ಷೇತರರು ಬಾಲವೇ ನಾಯಿಯನ್ನು ಅಲ್ಲಾಡಿಸಿತು ಎಂಬಂತೆ ನಡೆದುಕೊಂಡಿದ್ದು ಸುಳ್ಳಲ್ಲ. ಇದಕ್ಕೆಲ್ಲ ಮತದಾರನ broken madate ಹೇತುವಾಯಿತು ಎಂಬುದೂ ಅಷ್ಟೇ ನಿಜ. ಹಾಗಾಗಿ ಈ ಬಾರಿಯೂ ಡಾರ್ಕ್ ಹಾರ್ಸ್ ಓಡುತ್ತಾ ಬಂದು ಮತ್ತೆ ಕುಂಟು ಕುದುರೆಯಾಗಿ ಆಡಳಿತ ನಡೆಸಿದರೆ ಅದು ನಾಡಿನ ದೌರ್ಭಾಗ್ಯ.