ಸಬ್ಸಿಡಿ ಸಿಲಿಂಡರ್: ಹಣಕಾಸು ಸಚಿವಾಲಯದ ಬಾಂಬ್
'ಸ್ವಲ್ಪ ತಡೆದುಕೊಳ್ಳಿ, ಗುಜರಾತ್ ಚುನಾವಣೆ ಮುಗಿಯಲಿ 6/12 ಅನ್ನು 9/12ಕ್ಕೆ ಏರಿಸುತ್ತೇವೆ' ಎಂದು ಕರ್ನಾಟಕದವರೇ ಆದ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ ಅವರು ಹೇಳಿದ್ದೇ ಹೇಳಿದ್ದು. ಆದರೆ ಹಣಕಾಸು ಸಚಿವಾಲಯ ಮಾತ್ರ ಅಂಥಾದ್ದೇನೂ ಇಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದೆ.
ಆತಂಕಕಾರಿಯೆಂದರೆ ಹಣಕಾಸು ಸಚಿವಾಲಯದ 'ಇಂಥದ್ದೊಂದು ಕಠಿಣ ನಿಲುವನ್ನು ತೆಗೆದುಕೊಳ್ಳುತ್ತೆದೆ' ಎಂದು ಪರಿಭಾವಿಸಿ, ಮೊಯ್ಲಿ ಸಾರಥ್ಯದ ಪೆಟ್ರೋಲಿಯಂ ಸಚಿವಾಲಯ ಇದುವರೆಗೆ ಎಲ್ಪಿಜಿ ಮಿತಿಯನ್ನು 9ಕ್ಕೆ ಏರಿಸುವ ಸಂಬಂಧ ಸಂಪುಟ ಟಿಪ್ಪಣಿಯನ್ನು ಸಿದ್ಧಪಡಿಸುವ ಗೋಜಿಗೂ ಹೋಗಿಲ್ಲ ಎನ್ನಲಾಗಿದೆ.
'ಈಗಾಗಲೇ ಕೇಂದ್ರ ಸರಕಾರದ ಹಣಕಾಸು ಪರಿಸ್ಥಿತಿ ಶೋಚನೀಯವಾಗಿದೆ. ಅಂಥಾದ್ಧರಲ್ಲಿ LPG ಮಿತಿಯನ್ನು 9ಕ್ಕೆ ಏರಿಸಿದರೆ ಅದರಿಂದ 3,000 ಕೋಟಿ ರೂ. ಹೊರೆ ಹೊರಬೇಕಾಗುತ್ತದೆ. ಅದು ಅಸಾಧ್ಯ' ಎಂದು ಹಣಕಾಸು ಸಚಿವಾಲಯ ವಾದಿಸುತ್ತಿದೆ.
ಜತೆಗೆ 'ಸಬ್ಸಿಡಿ ಹೊರೆ ಕಡಿಮೆ ಮಾಡುವ ಕಾರಣಕ್ಕಾಗಿಯೇ 6 ಸಿಲಿಂಡರ್ಗಳ ಮಿರಿ ಹೇರಿರುವಾಗ ಆ ಮಿತಿಯನ್ನು ಸಡಿಲಿಕೆ ಮಾಡುವುದರಿಂದ ಅದರ ಆಶಯಕ್ಕೇ ಭಂಗಬರುವುದಿಲ್ವೇ?' ಎಂದು ಸಚಿವವಾಲಯ ಪ್ರಶ್ನಿಸಿದೆ. ಅಲ್ಲಿಗೆ 9/12 ಕನಸಿಗೆ ಎಳ್ಳುನೀರು ಬಿಟ್ಟಂತೆಯೇ ಸರಿ.
ಆದರೂ ಕೇಂದ್ರ ಸಚಿವಾಲಯ ಜನಸಾಮಾನ್ಯನನ್ನು ನಿರಾಶೆಗೊಳಿಸಲು ಸಿದ್ಧವಿಲ್ಲ. ಆತನ ಕನಸುಕಾಣುವಿಕೆ ಸದಾ ಜಾರಿಯಲ್ಲಿರಲಿ ಎಂದು 'ಮುಂದಿನ ಬಜೆಟ್ ಬಳಿಕ, ಯಾವುದಾದರೂ ಹೊಸ ಮೂಲದಿಂದ ಹಣ ಹೊಂದಾಣಿಕೆ ಮಾಡಿ ಈಗಿನ ಮಿತಿಯನ್ನು ಸಡಿಲಿಸುತ್ತೇವೆ, ಏನೂ ವರಿ ಮಾಡ್ಕೋಬೇಡಿ' ಎಂದು ಹಣಕಾಸು ಸಚಿವಾಲಯ ಭರವಸೆ ನೀಡಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.