ಮದುವೆ ದಿಬ್ಬಣ ವಾಹನ ಪಲ್ಟಿ ನಾಲ್ವರು ಸಾವು
ದಾವಣಗೆರೆ, ಜ.6 : ಮದುವೆ ದಿಬ್ಬಣ ಹೊರಟಿದ್ದ ಮಂದಿ ಜವರಾಯನ ಸುಳಿಗೆ ಸಿಲುಕಿದ ದಾರುಣ ಘಟನೆ ಭಾನುವಾರ ಬೆಳಗ್ಗೆ ಹರಪನಹಳ್ಳಿ ತಾಲೂಕಿನಲ್ಲಿ ನಡೆದಿದೆ. ದಿಬ್ಬಣ ಹೊರಟಿದ್ದ ಮಂದಿ ಹೊತ್ತು ಸಾಗಿದ್ದ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದು, 18ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಹಗರಿಬೊಮ್ಮನಹಳ್ಳಿಯಿಂದ ಅರಸೀಕೆರೆಯ ಕಡೆ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದಾಗ ಪಲ್ಟಿಯಾಗಿದೆ. ಟ್ರ್ಯಾಕ್ಟರ್ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡಿದ್ದಾನೆ. ಜನರಿಂದ ತುಂಬಿದ್ದ ಟ್ರ್ಯಾಕ್ಟರ್ ಅನೇಕ ಪಲ್ಟಿ ಹೊಡೆದಿದೆ.
ಹರಪನಹಳ್ಳಿ ತಾಲೂಕಿನ ಕಸನವಹಳ್ಳಿ ಬಳಿ ನಡೆದ ಈ ದುರ್ಘಟನೆಯಲ್ಲಿ ಮದುವೆ ದಿಬ್ಬಣದಲ್ಲಿದ್ದ 4 ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 18 ಜನ ಗಾಯಾಳುಗಳಾಗಿದ್ದಾರೆ. ಎಲ್ಲರೂ ಕಸವನಹಳ್ಳಿ ನಿವಾಸಿಗಳು ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಮೃತಪಟ್ಟವರನ್ನು ಕೊಟ್ಟೂರು ಮೂಲದ ಸಂಗಮೇಶ್ವರ, ಮಲ್ಲಮ್ಮ, ಬಾಲಕಿ ನಯನಾ ಎಂದು ಗುರುತಿಸಲಾಗಿದೆ. ಉಳಿದವರ ಗುರುತು ಪತ್ತೆ ಜಾರಿಯಲ್ಲಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಟ್ರ್ಯಾಕ್ಟರ್ ನಲ್ಲಿ ಹೆಚ್ಚಿನ ಮಂದಿ ತುಂಬಿದ್ದು, ನಿಯಂತ್ರಣ ತಪ್ಪಲು ಕಾರಣ ಎಂದು ತಿಳಿದು ಬಂದಿದೆ. ತನಿಖೆ ಜಾರಿಯಲ್ಲಿದೆ ಎಂದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಎಸ್ಪಿ ಲಬೂರಾಮ್ ಹೇಳಿದ್ದಾರೆ.
ಇನ್ನೊಂದು ಪ್ರಕರಣ: ಗುಲ್ಬರ್ಗಾ ಜಿಲ್ಲೆ ಜೇವರ್ಗಿ ರಸ್ತೆಯ ಶಿರನೂರಿನಲ್ಲಿ ಲಾರಿ ಟೈರ್ ಸ್ಫೋಟಗೊಂಡು ಲಾರಿ ಪಲ್ಟಿ ಹೊಡೆದಿದೆ. ಮದುವೆ ದಿಬ್ಬಣ ಹೊರಟ್ಟಿದ್ದ ತಂಡದ ಮೂವರು ಸಾವನ್ನಪ್ಪಿದ್ದಾರೆ. ಫರಾಹತಾಬಾದ್ ಪೊಲೀಸ್ ಠಾಣಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಲ್ಲಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ಜೇವರ್ಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರನ್ನು ಸುಭಾಷ್(32), ಲಾಲ್ ಅಹಮ್ಮದ್(22), ಅನ್ವರ್(18) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.