ಪತ್ರಕರ್ತನ ಬಿಡುಗಡೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ
ಈ ವಿಷಯವನ್ನು ತಿಳಿಸಲು ಪತ್ರಕರ್ತರ ಅಕ್ರಮ ಬಂಧನ ವಿರೋಧಿ ವೇದಿಕೆ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಪತ್ರಿಕಾಗೋಷ್ಠಿ ಕರೆದಿತ್ತು. ನವೆಂಬರ್ 7ರಂದು ಬಂಧಿತರಾಗಿರುವ ಸೂರಿಂಜೆ ಅವರನ್ನು ಕೂಡಲೆ ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ಧ ಮಾಡಲಾಗಿರುವ ಎಲ್ಲ ಸುಳ್ಳು ಆರೋಪಗಳನ್ನು ಕೈಬಿಡಬೇಕು ಎಂದು ವೇದಿಕೆ ಆಗ್ರಹಿಸಿದೆ.
ಇಂದಿನ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗಂಗಾಧರ ಮೊದಲಿಯಾರ್, ಪ್ರೆಸ್ ಕ್ಲಬ್ ವತಿಯಿಂದ ವೈ.ಜಿ.ಅಶೋಕ್ ಕುಮಾರ್, ಪತ್ರಕರ್ತರಾದ ಭಾಗೇಶ್ರೀ, ದಿನೇಶ್ ಕುಮಾರ್, ಬರಹಗಾರ ರವಿ ಕೃಷ್ಣಾರೆಡ್ಡಿ, ಮತ್ತು ಮಹಿಳಾಪರ ಹೋರಾಟಗಾರ್ತಿ ಕೆ.ಎಸ್.ಲಕ್ಷ್ಮಿ ಮಾತನಾಡಿದರು.
2012ರ ಜುಲೈ 28ರಂದು ಮಂಗಳೂರಿನಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಹೋಮ್ಸ್ಟೇವೊಂದರ ಮೇಲೆ ದಾಳಿ ನಡೆಸಿ ಹಲವು ವಿದ್ಯಾರ್ಥಿಗಳು ಮತ್ತು ಹೆಣ್ಣುಮಕ್ಕಳ ಮೇಲೆ ದಾಳಿ ನಡೆಸಿದ್ದವು. ಈ ಘಟನೆಯನ್ನು ಕಸ್ತೂರಿ ಕನ್ನಡ ಚಾನಲ್ನ ಮಂಗಳೂರು ವರದಿಗಾರ ನವೀನ್ ಸೂರಿಂಜೆ ಅವರು ಚಿತ್ರೀಕರಿಸಿದ್ದರು.
ಸಾಕ್ಷಿಯನ್ನಾಗಿ ಪರಿಗಣಿಸಬೇಕಿದ್ದ ನವೀನ್ ಸೂರಿಂಜೆಯನ್ನು ಆರೋಪಿಯನ್ನಾಗಿ ಹೆಸರಿಸಿ ಇಂದಿನವರೆಗೂ ಬಂಧನದಲ್ಲಿರುವಂತೆ ನೋಡಿಕೊಂಡಿರುವುದು ಕೇವಲ ಪತ್ರಿಕಾ ಸ್ವಾತಂತ್ರ್ಯದ ಹರಣ ಮಾತ್ರವಲ್ಲ, ಸಂವಿಧಾನಬದ್ಧ ನಾಗರಿಕ ಹಕ್ಕುಗಳನ್ನು ಹತ್ತಿಕ್ಕುವಂತಹ ದಮನಕಾರಿ ನಡೆಗಳೂ ಸಹ ಎಂದು ವೇದಿಕೆ ಆರೋಪಿಸಿದೆ. ಪತ್ರಕರ್ತರ ನಿಯೋಗ ರಾಜ್ಯಪಾಲರನ್ನು ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದೆ. ಈ ವಿಚಾರವನ್ನು ಗೃಹಮಂತ್ರಿಗಳ ಗಮನಕ್ಕೂ ತರಲಾಗಿದೆ ಎಂದು ವೇದಿಕೆ ಹೇಳಿದೆ.
ಸ್ಥಳ
:
ಸ್ವಾತಂತ್ರ್ಯ
ಉದ್ಯಾನ,
ಬೆಂಗಳೂರು
ದಿನಾಂಕ
:
ಜನವರಿ
5,
2013
ರಿಂದ
ಜನವರಿ
7,
2013
ನವೀನ್ ಸೂರಿಂಜೆ ವಿರುದ್ಧ ಪೋಲಿಸರು ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಿರುವ ಆರೋಪ ಪಟ್ಟಿ: ಅಕ್ರಮ ಕೂಟ (ಐಪಿಸಿ 143), ದೊಂಬಿ (147), ಮಾರಕಾಸ್ತ್ರಗಳಿಂದ ದೊಂಬಿ (148), ಅಕ್ರಮ ಪ್ರವೇಶ (447), ಮನೆ ಮೇಲೆ ದಾಳಿ (448), ಅಕ್ರಮವಾಗಿ ಮತ್ತೊಬ್ಬರನ್ನು ಹಿಡಿದು ನಿಲ್ಲಿಸುವುದು (341), ಪ್ರಚೋದನೆ ಇಲ್ಲದೆ ಮಾರಕಾಸ್ತ್ರಗಳಿಂದ ಹಲ್ಲೆ (323/324), ಬೆದರಿಕೆ (506), ಉದ್ದೇಶ ಪೂರ್ವಕ ದಾಳಿ ಮತ್ತು ಶಾಂತಿ ಭಂಗ (504), ಮಹಿಳೆ ಮೇಲೆ ದಾಳಿ (354) ಮತ್ತು ಡಕಾಯತಿ (395).