ಡೆಡ್ ಲೈನ್ ಗೆ ಹೆದರಲ್ಲ, ಬಜೆಟ್ ಮಂಡನೆ ಮಾಡ್ತೇನೆ
ಶೆಟ್ಟರ್ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾದೇಶದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರವನ್ನು ಯಾವುದೇ ಡೆಡ್ಲೈನ್ಗಳೂ ಅವಧಿಗೂ ಮುನ್ನವೇ ಕೆಳಗಿಳಿಸಲು ಸಾಧ್ಯವಿಲ್ಲ ಮಾರ್ಮಿಕವಾಗಿ ನುಡಿದರು.
ಈಗಾಗಲೇ ಬಜೆಟ್ ತಯಾರಿ ನಡೆಯುತ್ತಿದ್ದು, ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ರಾಜ್ಯದ ಜನರಿಗೆ ಉತ್ತಮ ಮುಂಗಡ ಪತ್ರ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಯಾವ ಡೆಡ್ಲೈನ್ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಈಗಾಗಲೇ ಜನಪರ ಬಜೆಟ್ ಕೊಡುವ ಬಗ್ಗೆ ಗಮನ ಹರಿಸಿದ್ದು, ಫೆಬ್ರವರಿ ಎರಡನೇ ವಾರದೊಳಗೆ ಬಜೆಟ್ ಮಂಡಿಸುತ್ತೇನೆ ಎಂದು ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಈ ಬಾರಿಯ ಬಜೆಟ್ ಅಧಿವೇಶನವು ಬೆಂಗಳೂರಿನಲ್ಲೇ ನಡೆಯಲಿದೆ ಎಂದರು.
ಡೆಡ್ಲೈನ್ನಿಂದ ಯಾವ ತೊಂದರೆಯೂ ತಮ್ಮ ಸರ್ಕಾರಕ್ಕೆ ಆಗುವುದಿಲ್ಲ. ನಾಡಿನ ಜನರಿಗೆ ಹೊಸ ವರ್ಷದ ಶುಭಾಶಯ ಕೋರಿದ ಸಿಎಂ ಶೆಟ್ಟರ್, ಇಷ್ಟು ದಿನ ಸಾಕಷ್ಟು ಬರಗಾಲ ಅನುಭವಿಸಿಯಾಗಿದೆ. ಅಂತೆಯೇ ಬಹಳಷ್ಟು ಕಷ್ಟದ ಸನ್ನಿವೇಶಗಳು ಎದುರಾಗಿವೆ.
2013 ರಿಂದ ಈ ಎಲ್ಲಾ ಕಷ್ಟಗಳು ದೂರಾಗಿ ಬದಲಾವಣೆ ಪರ್ವ ಆರಂಭವಾಗಲಿ ಎಂದು ಆಶಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿತವಾಗಿದ್ದು, ಮುಂದೆಯೂ ಇದಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸಲಾಗುವುದು ಎಂದು ಹೇಳಿದರು.
ಬಜೆಟ್ ಮಂಡನೆ ಪೂರ್ವ ತಯಾರಿಗೆ ಚಾಲನೆ ನೀಡಲಾಗಿದೆ. ಈಗಾಗಲೇ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.
ಚಾಮರಾಜನಗರಕ್ಕೆ ಪ್ರವಾಸ ಹೋಗುವುದು ಗ್ಯಾರಂಟಿ. ಅಧಿಕಾರರೂಢ ಮುಖ್ಯಮಂತ್ರಿ ಚಾಮರಾಜನಗರಕ್ಕೆ ಭೇಟಿ ಕೊಟ್ಟರೆ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮಾತನ್ನು ನಂಬುವುದಿಲ್ಲ ಎಂದ ಶೆಟ್ಟರ್, ಜ.9 ರಂದು ಚಾಮನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವುದು ಖಚಿತ ಎಂದು ಹೇಳಿದರು.
ಚಾಮರಾಜನಗರಕ್ಕೆ ಭೇಟಿ ನೀಡದಿರುವ ಮುಖ್ಯಮಂತ್ರಿಗಳ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಭೇಟಿ ನೀಡಲು ಮುಂದಾದ ತಮ್ಮ ವಿರುದ್ಧವೂ ಧರಣಿ ನಡೆಯುತ್ತಿದೆ. ಇದು ಆ ಭಾಗದ ಜನರಿಗೆ ಬಿಟ್ಟ ವಿಚಾರ. ಅದೇನೇ ಆದರೂ ಚಾಮರಾಜನಗರದಲ್ಲಿ ಜ.9 ರಂದು ತಮ್ಮ ಪ್ರವಾಸ ನಡೆಯಲಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.