ಗದಗ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ ಪರಾರಿ
ಗದಗಿನ ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆರೋಪಿಯನ್ನು ಬಾಳೀಕಾಯಿ ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿಗೆ ಚಾಕಲೋಟ್ ಆಮಿಷ ಒಡ್ಡಿ ಕರೆದೊಯ್ದ ಬಾಳೀಕಾಯಿ, ನಿರ್ಜನ ಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಹರಪ್ಪನಹಳ್ಳಿ ತಾಲೂಕಿನ ಹರಿಮ್ಮನಹಳ್ಳಿಯ ಯುವತಿ ಮೇಲೆ ಅತ್ಯಾಚಾರ ಎಸಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಅರಸಿಕೇರೆ, ಹರಪ್ಪನಹಳ್ಳಿ ಪೊಲೀಸ್ ಠಾಣೆ ಪೊಲೀಸರ ನಿರ್ಲಕ್ಷ್ಯ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವತಿ ಹೊಲಕ್ಕೆ ಹೋಗಿದ್ದಾಗ ಮಂಜು ಅಲಿಯಾಸ್ ಹುಲಿಯ ಎಂಬುವನು ಹಿಂಬಾಲಿಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿದೆ. ನಂತರ ಯುವತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೊದಲಿಗೆ ಅರಸೀಕೆರೆ ಆಸ್ಪತ್ರೆ ಸೇರಿಸಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.
ಘಟನೆ ನಡೆದು 2 ದಿನವಾದರೂ ಪೊಲೀಸರು ದೂರು ಸ್ವೀಕರಿಸಲು ಒಪ್ಪಲಿಲ್ಲ ಹೀಗಾಗಿ ನಾವು ಮಾಧ್ಯಮದ ಮುಂದೆ ಬಂದು ಕಷ್ಟ ತೋಡಿಕೊಳ್ಳುತ್ತಿದ್ದೇವೆ ಎಂದು ಯುವತಿಯ ಸಂಬಂಧಿಕರಾದ ಮಲ್ಲೇಶ್ ಹೇಳಿದ್ದಾರೆ.
ಆರೋಪಿತ ಮಂಜು ಅವರು ಪ್ರಭಾವಿ ರಾಜಕಾರಣಿ ಜಿಎಂ ಸಿದ್ದೇಶ್ ಅವರ ಆಪ್ತ. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದು ಮುಂದು ನೋಡುತ್ತಿದ್ದಾರೆ ಎಂದು ಸಂತ್ರಸ್ತೆ ಸಂಬಂಧಿಕರು ಆರೋಪಿಸಿದ್ದಾರೆ.