ಆಂಧ್ರ ಮೂಲದ ಉದ್ಯಮಿ ಯುಎಸ್ ನಲ್ಲಿ ಕೊಲೆ
ಅಮೆರಿಕದ ಒಹಾಯೋದಲ್ಲಿರುವ ಸಿಂಸಿನ್ನಾಟಿ ಸೂಪರ್ ಮಾರ್ಕೆಟ್ ನಲ್ಲಿ ಈ ಘಟನೆ ಸಂಭವಿಸಿದ್ದು, ಭಾರತ ಮೂಲದ 40 ವರ್ಷ ವಯಸ್ಸಿನ ಜಿ ವೆಂಕಟ ರೆಡ್ಡಿ ಮೃತಪಟ್ಟ ದುರ್ದೈವಿ.
ವೆಂಕಟರೆಡ್ಡಿ ಅವರ ಮೇಲೆ ದರೋಡೆಕೋರರು ಆಕ್ರಮಣ ನಡೆಸಿ, ಸುಮಾರು 800 ಡಾಲರ್ ಗಳಷ್ಟು ಹಣ ದೋಚಿದ್ದಾರೆ. ನಂತರ ವೆಂಕಟರೆಡ್ಡಿ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಕರೀಂ ನಗರದಲ್ಲಿರುವ ಅವರ ಕುಟುಂಬದ ಮೂಲಗಳು ಹೇಳಿದೆ.
12 ವರ್ಷಗಳ ಹಿಂದೆಯೇ ವೆಂಕಟರೆಡ್ಡಿ ಅವರ ಕುಟುಂಬ ಅಮೆರಿಕಕ್ಕೆ ಬಂದು ನೆಲೆಸಿತ್ತು. ವೆಂಕಟರೆಡ್ಡಿ ಅವರ ಪತ್ನಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ತಡ ರಾತ್ರಿಯಾದರೂ ಪತಿ ಮನೆಗೆ ಬರದ ಕಾರಣ ತಿಳಿಯಲು ಯತ್ನಿಸಿದಾಗ ಪತಿ ಇದ್ದ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ ನಡೆದಿರುವುದು ತಿಳಿದು ಬಂದಿದೆ.
ನೆರೆ ಮನೆಯವರನ್ನು ಕರೆದುಕೊಂಡು ಸೂಪರ್ ಮಾರ್ಕೆಟ್ ಗೆ ಬಂದು ನೋಡಿದರೆ ರಕ್ತದ ಮಡುವಿನಲ್ಲಿ ಪತಿ ಮಲಗಿರುವುದು ಕಂಡು ಬಂದಿದೆ.
ದರೋಡೆ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ವೆಂಕಟ ರೆಡ್ಡಿ ಅವರ ಭಾವ ಮೈದುನ ಶಾಮಸುಂದರ ರೆಡ್ಡಿ ಅವರು ಅಮೆರಿಕಕ್ಕೆ ತೆರಳಿದ್ದು, ಕರೀಂನಗರದಲ್ಲೇ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ ಎಂದು ಕುಟುಂಬ ವರ್ಗ ಹೇಳಿದೆ.
ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಔಷಧ ಹಾಗೂ ಚಿಕಿತ್ಸೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿ ಹರಿನಾಥ್ ಕೊಟ್ಟೆ ಅವರ ನಿಗೂಢ ಕೊಲೆ ಪ್ರಕರಣದ ನಂತರ ವೆಂಕಟರೆಡ್ಡಿ ಅವರ ಕೊಲೆ ಎರಡನೇ ಪ್ರಕರಣವಾಗಿದೆ.
ಮೃತ ದೇಹವನ್ನು ಅಮೆರಿಕದಿಂದ ಭಾರತಕ್ಕೆ ಕಳಿಸಲು ಬೇಕಾದ ವ್ಯವಸ್ಥೆ ಮಾಡುವ ಭರವಸೆಯನ್ನು ಅಮೆರಿಕದ ತೆಲುಗು ಸಂಘ(ATA) ನೀಡಿದೆ.
ಹರಿನಾಥ್ ಅವರನ್ನು ಕೊಲ್ಲುವ ಮುನ್ನ ದುಷ್ಕರ್ಮಿಗಳ ಗುಂಪು ಅವರನ್ನು ಹಣಕ್ಕಾಗಿ ಪೀಡಿಸಿದ್ದಾರೆ, ಹರಿನಾಥ್ ನಿರಾಕರಿಸಿದ್ದಾಗ ಅವರ ಮೇಲೆ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ಎಲ್ಲೆಡೆ ವರದಿಯಾಗಿತ್ತು.
ವೆಂಕಟ ರೆಡ್ಡಿ ಪ್ರಕರಣದಲ್ಲಿ ಮೊದಲಿಗೆ ಆತ್ಮಹತ್ಯೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದರು. ನಂತರ ಹಣಕ್ಕಾಗಿ ಕೊಲೆ ನಡೆದಿದೆ ಎಂದು ಅನುಮಾನ ಪಡಲಾಗಿದೆ. ಆದರೆ, ಅಷ್ಟು ಕಡಿಮೆ ಮೊತ್ತದ ಹಣಕ್ಕಾಗಿ ಕೊಲೆ ನಡೆದಿದೆ ಎಂಬುದನ್ನು ನಂಬಲು ಕುಟುಂಬ ವರ್ಗ ಸಿದ್ಧವಿಲ್ಲ. ಒಟ್ಟಾರೆ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಎಂದು ಕುಟುಂಬ ವರ್ಗ ಆಗ್ರಹಿಸಿದೆ.