ದೇವೇಗೌಡರ ಪರ ಬಾಡೂಟ ಹಾಕಿಸಿದ್ದ ಶಾಸಕಗೆ ಜೈಲು
ಏನಪ್ಪಾ ಅಂದರೆ 2009ರ ಲೋಕಸಭೆ ಚುನಾವಣೆ ವೇಳೆ ಮತದಾರರಿಗೆ ಬಾಡೂಟ ತಿನ್ನಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಆರೋಪಕ್ಕಾಗಿ ಅರಸೀಕೆರೆಯ ಹಾಲಿ ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡಗೆ ಇಲ್ಲಿನ ಜೆಎಂಎಫ್ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರೂಪಾಯಿ ದಂಡ ವಿಧಿಸಿದೆ.
ಹಾಸನ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಚೆನ್ನಪ್ಪ ಕುರುಬೆಟ್ ಶಾಸಕರಿಗೆ ಈ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಮತಾ ಹಾಗೂ ಶಾಸಕರ ಪರವಾಗಿ ರವಿಶಂಕರ್ ವಾದ ಮಂಡಿಸಿದರು.
ಅತ್ಯಾಶ್ಚರ್ಯ, ಅಪರೂಪ: ಹಾಲಿ ಶಾಸಕರೊಬ್ಬರಿಗೆ ಹೀಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿರುವುದು ಅಪರೂಪ. ಅದೂ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂಬ ಆರೋಪದಡಿ ಹೀಗೆ ಶಿಕ್ಷೆಯಾಗಿರುವುದು ಅತ್ಯಾಶ್ಚರ್ಯವಾಗಿದೆ. ಖುದ್ದು ಶಿವಲಿಂಗೇಗೌಡ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಶಿವಲಿಂಗೇಗೌಡಗೆ ಜಾಮೀನು ಸಿಕ್ಕಿದ್ದು, ಮೇಲ್ಮನವಿ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ.
ಚುನಾವಣೆ ಬಂತೆಂದರೆ 'ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ' ಎಂಬ ವರದಿಗಳು ಪತ್ರಿಕೆಗಳಲ್ಲಿ ನೂರೆಂಟು ವರದಿಯಾಗುತ್ತವೆ. ಅವುಗಳ ಪೈಕಿ ಯಾವೊಂದು ದೂರು ಬರಕತ್ತಾದ ನಿದರ್ಶನಗಳಿಲ್ಲ. ಸುಮ್ಮನೆ ಕಾಟಾಚಾರಕ್ಕೆ ಕೇಸು ದಾಖಲಿಸಿಕೊಂಡು ಕಾಲಾಂತರದಲ್ಲಿ ಕೈತೊಳೆದುಕೊಳ್ಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಆರೋಪಿಗೆ ಜೈಲು ಶಿಕ್ಷೆ ತೀರ್ಪು ನೀಡಿರುವುದು ರಾಜಕಾರಣಿಗಳಿಗೆ ಆಘಾತವುಂಟುಮಾಡಿದೆ.
ದೊಡ್ಡಗೌಡರ ಪರ ಬಾಡೂಟ: ಏನಾಗಿತ್ತೆಂದರೆ ಹಾಸನ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡಗೇ ಮತ ಹಾಕಿ ಎಂದು ಮತದಾರರನ್ನು ಓಲೈಸಲು ಶಾಸಕ ಶಿವಲಿಂಗೇಗೌಡ, ಬಾಣಾವರ ಬಳಿ ಪಕ್ಷದ ತಾಲೂಕು ಪಂಚಾಯಿತಿ ಸದಸ್ಯ ಸೋಮಶೇಖರ್ ಅವರಿಗೆ ಸೇರಿದ ತೋಟವೊಂದರಲ್ಲಿ ಬಾಡೂಟ ಏರ್ಪಡಿಸಿದ್ದರು. 'ಅದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಆ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದು ಕಾಂಗ್ರೆಸ್ ಮುಖಂಡ ಅಜ್ಜನಹಳ್ಳಿ ಬಸವರಾಜ್ ದೂರಿದ್ದರು.