2012 : ಭಾರತದ ಘಟನೆಗಳತ್ತ ಹಿನ್ನೋಟ
2012- ಭಾರತದಲ್ಲಿ ಹತ್ತು ಹಲವು ಸಾವು ನೋವು, ಹಗರಣಗಳು ಬೆಳಕಿಗೆ ಬಂದರೂ ಒಂದಷ್ಟು ಭರವಸೆ ಮೂಡಿಸಿದ ವರ್ಷ.
ಬಾಲಿವುಡ್ ದಿಗ್ಗಜ ರಾಜೇಶ್ ಖನ್ನ, ಮಾಜಿ ಪ್ರಧಾನಿ ಇಂದ್ರಕುಮಾರ್ ಗುಜ್ರಾಲ್, ಶಿವಸೇನಾ ಮುಖ್ಯಸ್ಥ ಬಾಳಾ ಠಾಕ್ರೆ, ವಿಶ್ವಖ್ಯಾತ ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ಅಗಲಿಕೆ.
ಅಸ್ಸಾಂ ಹಿಂಸಾಚಾರ, ವರ್ಷಾಂತ್ಯಕ್ಕೆ ಭುಗಿಲೆದ್ದ ದೆಹಲಿ ಅತ್ಯಾಚಾರ ವಿರುದ್ಧದ ಪ್ರತಿಭಟನೆ, ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಅವರು ಟೆಸ್ಟ್ ಕ್ರಿಕೆಟ್ ಗೆ ಗುಡ ಬೈ ಹೇಳಿದ್ದು, ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದು, ಇದಕ್ಕೂ ಮುನ್ನ ಲಯ ಕಳೆದುಕೊಂಡಿದ್ದ ಸಚಿನ್ ತೆಂಡೂಲ್ಕರ್ ಅವರು ವೃತ್ತಿ ಜೀವನದ 100ನೇ ಶತಕ ದಾಖಲಿಸಿದ್ದು ಪ್ರಮುಖ ಘಟನೆ.
2012 ಎಲೆಕ್ಷನ್ ವರ್ಷ ಎನ್ನಬಹುದು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಮುಲಾಯಂ ಸಿಂಗ್ ಯಾದವ್ ಪುತ್ರ ಅಖಿಲೇಶ್ ಯಾದವ್ ಕಿರಿಯ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಹೊಸ ದಾಖಲೆ ಬರೆದರು.
ಗುಜರಾತಿನಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ NaMo ಜಪ ಎಲ್ಲರ ಬಾಯಲ್ಲಿ ನಲಿಯುವಂತೆ ಮಾಡಿದರು. ನಾಲ್ಕನೇ ಬಾರಿಗೆ ಸಿಎಂ ಆಗಿ ಅಧಿಕಾರಕ್ಕೆ ಬಂದರು. ಪ್ರಧಾನಿ ಅಭ್ಯರ್ಥಿಯಾಗಬೇಕಿದ್ದ ಪ್ರಣಬ್ ಮುಖರ್ಜಿ ಅವರು ರೈಸಿನಾ ಹಿಲ್ಸ್ ನ ಸುಂದರ ಭವನ ಸೇರಿ ದೇಶದ ಪ್ರಥಮ ಪ್ರಜೆಯಾದರು. ಹಮೀದ್ ಅನ್ಸಾರಿ ಉಪ ರಾಷ್ಟ್ರಪತಿಯಾಗಿ ಮುಂದುವರೆದರು.
ಈ ಬಾರಿ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಉತ್ತಮ ಫಲಿತಾಂಶ ಬಂದಿದ್ದು ಭಾರತಕ್ಕೆ ಅತ್ಯಂತ ಆಶಾದಾಯಕವಾಗಿತ್ತು. ಹಾಕಿಯಲ್ಲಿ ಕಳಪೆ ಸಾಧನೆ ತೋರಿದರೂ 6 ಪದಕ ಗೆದ್ದಿದ್ದು ದೊಡ್ಡ ಸಾಧನೆ. 2012ರ ಭಾರತದಲ್ಲಿನ ಪ್ರಮುಖ ಘಟನಾವಳಿಗಳ ದೃಶ್ಯಾವಳಿ ಇಲ್ಲಿದೆ.. ಸಾವಕಾಶವಾಗಿ ನೋಡಿ..
ಕಲ್ಮಾಡಿಗೆ ಬೇಲ್
ಕಾಮನ್ ವೆಲ್ತ್ ಕ್ರೀಡೆ ಹಗರಣ ಆರೋಪಿ ಕರ್ನಾಟಕ ಮೂಲದ ಸುರೇಶ್ ಕಲ್ಮಾಡಿಗೆ ಜನವರಿ 19ರಂದು ದೆಹಲಿ ಕೋರ್ಟಿನಿಂದ ಜಾಮೀನು
ಗಣತಂತ್ರ ದಿನದ ಗಣ್ಯ ಅತಿಥಿ
ಥೈಲ್ಯಾಂಡ್ ನ ಪ್ರಧಾನಿ ಯಿಂಗ್ ಲಕ್ ಶಿನಾವತ್ರಾ ಅವರು ಜನವರಿ 26ರಂದು 63ನೇ ಗಣರಾಜ್ಯೋತ್ಸವ ದಿನಾಚರಣೆಯ ಮುಖ್ಯ ಅತಿಥಿಯಾಗಿ ನವದೆಹಲಿಯಲ್ಲಿ ಪರೇಡ್ ವೀಕ್ಷಣೆ
ರಾಜಾ ಕೊಟ್ಟ ಲೈಸನ್ಸ್ ರದ್ದು
2ಜಿ ಹಗರಣದ ಪ್ರಮುಖ ಆರೋಪಿ ಮಾಜಿ ಟೆಲಿಕಾಂ ಸಚಿವ ಎ. ರಾಜಾ ನೀಡಿದ್ದ 122 ಟೆಲಿಕಾಂ ಲೈಸನ್ಸ್ ಗಳನ್ನು ಫೆಬ್ರವರಿ 2 ರಂದು ಸುಪ್ರೀಂಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿತು.
ಸ್ವಾಮಿ ದೂರು ತಿರಸ್ಕಾರ
2ಜಿ ಹಗರಣದಲ್ಲಿ ಅಂದಿನ ಗೃಹ ಸಚಿವ ಪಿ ಚಿದಂಬರಂ ಅವರನ್ನು ಆರೋಪಿಯಾಗಿಸುವಂತೆ ಕೋರಿ ಸುಬ್ರಮಣ್ಯಂ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಫೆ.5 ರಂದು ಸುಪ್ರೀಂಕೋರ್ಟ್ ತಳ್ಳಿ ಹಾಕಿತು.
ಡರ್ಟಿ ಪಿಕ್ಚರ್ ನೋಡಿದ ಕನ್ನಡ ಕಲಿಗಳು
ಬಿಜೆಪಿ ಸಚಿವರಾದ ಕೃಷ್ಣ ಪಾಲೇಮಾರ್, ಲಕ್ಷ್ಮಣ್ ಸವದಿ ಹಾಗೂ ಸಿಸಿ ಪಾಟೀಲ್ ಕರ್ನಾಟಕದ ಅಸೆಂಬ್ಲಿ ಹಾಲ್ ನಲ್ಲಿ ಫೆ.8ರಂದು ಪೋರ್ನ್ ಕ್ಲಿಪ್ಪಿಂಗ್ ನೋಡಿದ ಆರೋಪ ಹೊತ್ತು ರಾಜೀನಾಮೆ ಸಲ್ಲಿಕೆ
ರಾಯಭಾರಿ ಕಾರಲ್ಲಿ ಬಾಂಬ್
ಫೆ.14ರಂದು ದೆಹಲಿಯಲ್ಲಿ ಇಸ್ರೇಲಿ ರಾಯಭಾರಿಯ ಕಾರಿನಲ್ಲಿ ಬಾಂಬ್ ಸ್ಫೋಟ. ಸ್ಫೋಟಕ್ಕೆ ಕಾರಣನಾದ ಇರಾನ್ ಮೂಲದ ವ್ಯಕ್ತಿ ಬಂಧನ
ಮಹಿಳೆಯರ ಕೈಗೆ ಕಬಡ್ಡಿ ಚಾಂಪಿಯನ್ಸ್ ಕಪ್
ಕನ್ನಡತಿ ಮಮತಾ ಪೂಜಾರಿ ನೇತೃತ್ವದ ಮಹಿಳೆಯರ ತಂಡ ಮಾ.4 ರಂದು ಇರಾನ್ ತಂಡವನ್ನು ಸೋಲಿಸಿ ಪ್ರಥಮ ಬಾರಿಗೆ ಕಬಡ್ಡಿ ವಿಶ್ವಕಪ್ ಗೆದ್ದು ಬೀಗಿದರು.
ಮಹತ್ವದ ಚುನಾವಣೆ ಫಲಿತಾಂಶ
ಮಾ.6 ರಂದು ಹೊರಬಿದ್ದ ಫಲಿತಾಂಶದಂತೆ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಮಣಿಪುರ, ಉತ್ತರಾಖಂಡ್ ನಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ. ಗೋವಾದಲ್ಲಿ ಬಿಜೆಪಿ ಬಹುಮತ, ಪಂಜಾಬಿನಲ್ಲಿ ಅಕಾಲಿದಳದ ಜೊತೆ ಸಮ್ಮಿಶ್ರ ಸರ್ಕಾರಕ್ಕೆ ಅಸ್ತಿತ್ವಕ್ಕೆ. ಅಖಿಲೇಶ್ ಅತ್ಯಂತ ಕಿರಿಯ ವಯಸ್ಸಿಗೆ ಸಿಎಂ ಆಗಿ ಅಧಿಕಾರ ಸ್ವೀಕಾರ.
ಕುಸಿದು ಬಿದ್ದ ಕ್ರಿಕೆಟ್ ಗೋಡೆ
ಟೆಸ್ಟ್ ಕ್ರಿಕೆಟ್ ದಿಗ್ಗಜ ಕರ್ನಾಟಕದ ರಾಹುಲ್ ದ್ರಾವಿಡ್ ಮಾ.10 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದರು.
ತ್ರಿವೇದಿ ಮೇಲೆ ದೀದಿ ಗರಂ
ಮಾ.14 ರಂದು ರೈಲ್ವೆ ಬಜೆಟರ್ ಮಂಡಿಸಿದ ದಿನೇಶ್ ತ್ರಿವೇದಿ ಅವರು ತಮ್ಮ ಪಕ್ಷ ತೃಣಮೂಲ ಕಾಂಗ್ರೆಸ್ ನ ಕೋಪಕ್ಕೆ ಗುರಿಯಾದರು. ರೈಲ್ವೇ ದರ ಏರಿಕೆಗೆ ಮುಂದಾದ ತ್ರಿವೇದಿಗೆ ರಾಜೀನಾಮೆ ನೀಡುವಂತೆ ಮಮತಾ ಬ್ಯಾನರ್ಜಿ ತಾಕೀತು.
ಪ್ರಣಬ್ ರಿಂದ ಕೇಂದ್ರ ಬಜೆಟ್
ಮಾಜಿ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರಿಂದ 2012-13ನೇ ಸಾಲಿನ ಬಜೆಟ್ ಮಂಡನೆ
100ನೇ ಶತಕ ಬಾರಿಸಿದ ತಿವಿಕ್ರಮ ಸಚಿನ್
ಮಾ.16ರಂದು ಬಾಂಗ್ಲಾದೇಶದ ವಿರುದ್ಧ ಏಷ್ಯಾಕಪ್ ನಲ್ಲಿ ಶತಕ ಗಳಿಸಿದ ಸಚಿನ್ 100ನೇ ಅಂತಾರಾಷ್ಟ್ರೀಯ ಶತಕ ಬಾರಿಸಿದ ಏಕೈಕ ಆಟಗಾರರಾದರು. 49ನೇ ODI ಶತಕ ಇದಾಗಿದ್ದು, ಡಿ.23ರಂದು ODIನಿಂದ ರಿಟೈರ್. 463 ಪಂದ್ಯದಲ್ಲಿ 18246 ರನ್ ಗಳಿಕೆ
ದಾದಾ ಸಾಹೇಬ್ ಪುರಸ್ಕಾರ
ಮಾ.21 ರಂದು ಕಳೆದ ಸಾಲಿನ ದಾದಾ ಸಾಹೇಬ್ ಪುರಸ್ಕಾರಕ್ಕೆ ಸೌಮಿತ್ರ ಚಟರ್ಜಿ ಆಯ್ಕೆ
UN ನಲ್ಲಿ ಲಂಕಾ ವಿರುದ್ಧ ಭಾರತ
2009ರ ಎಲ್ ಟಿಟಿಐ ಯುದ್ಧದಲ್ಲಿನ ಹಿಂಸಾಚಾರ ಆರೋಪದ ವಿರುದ್ಧ ತನಿಖೆ ಗೊತ್ತುವಳಿ ವಿರುದ್ಧ ಮಾ.22 ರಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕೌನ್ಸಿಲ್ ನಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಮತ ಚಲಾವಣೆ
ಅಜ್ಮೇರ್ ದರ್ಗಾಕ್ಕೆ ಜರ್ದಾರಿ
ಪಾಕಿಸ್ತಾನದ ರಾಷ್ಟ್ರಪತಿ ಆಸೀಸ್ ಅಲಿ ಜರ್ದಾರಿ ಏ.8 ರಂದು ರಾಜಸ್ಥಾನದ ಅಜ್ಮೇರ್ ದ ದರ್ಗಾಕ್ಕೆ ಸಕುಟುಂಬ ಸಪರಿವಾರದೊಡನೆ ಭೇಟಿ
ಗುಜರಾತ್ ಹತ್ಯಾಕಾಂಡ ತೀರ್ಪು
2002ರಲ್ಲಿ ಗುಜರಾತಿನ ಗ್ರಾಮದಲ್ಲಿ ನಡೆದ ಹತ್ಯಾಕಾಂಡ ಪ್ರಕರಣದ 18 ಜನ ಆರೋಪಿಗಳಿಗೆ ಏಪ್ರಿಲ್ 12 ರಂದು ಜೀವಾವಧಿ ಶಿಕ್ಷೆ ಘೋಷಣೆ
ಅಗ್ನಿ V ಯಶಸ್ವಿ
ದೂರಗಾಮಿ ಕ್ಷಿಪಣಿ ಅಗ್ನಿ V ಏಪ್ರಿಲ್ 19 ರಂದು ಯಶಸ್ವಿ ಉಡಾವಣೆ 5,000 ಕಿ.ಮೀ ಗುರಿ ಸಾಮರ್ಥ್ಯ ಹೊಂದಿದೆ.
ಮಾವೋವಾದಿಗಳಿಗೆ ಒತ್ತೆಯಾಳಾದ ಡಿಸಿ
ಛತ್ತೀಸ್ ಗಢ ರಾಜ್ಯದ ಸುಕ್ಮಾ ಜಿಲ್ಲಾಧಿಕಾರಿ ಅಲೆಕ್ಸ್ ಪೌಲ್ ಮೆನನ್ ಏ.21 ರಂದು ಮಾವೋವಾದಿಗಳ ಕೈವಶ. 12 ದಿನ ಒತ್ತೆಯಾಳು. ಬಿಜೆಡಿ ಶಾಸಕ ಜಿಹಿನಾ ಜಿಹಿನಾ ಕೂಡಾ ನಕ್ಸಲರಿಂದ ಕಿಡ್ನಾಪ್ 33 ದಿನ ವನವಾಸ.
ನಾರ್ವೆ ಎನ್ನಾರೈ ಕಿಡ್ಸ್ ಪ್ರಾಬ್ಲಂ
ನಾರ್ವೆಯ ಚಿಲ್ಡ್ರನ್ ವೆಲ್ ಫೇರ್ ಸರ್ವೀಸಸ್ ಜೊತೆ ಸತತ ಕಾನೂನು ಹೋರಾಟದ ನಂತರ ಏ.24ರಂದು ಇಬ್ಬರು ಎನ್ನಾರೈ ಮಕ್ಕಳು ಕೋಲ್ಕತ್ತಾಕ್ಕೆ ವಾಪಸ್.
ಜೈಲು ಸೇರಿದ ಜಗನ್
ವೈಎಸ್ ಆರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಯನ್ನು ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇ 27 ರಂದು ಸಿಬಿಐ ಬಂಧಿಸಿ ಜೈಲಿಗೆ ಕಳಿಸಿತು. ಅದರೆ, ಜಗನ್ ಜೈಲಿನಲ್ಲಿದ್ದರೂ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಸೋಲಿಸುವಲ್ಲಿ ವೈಎಸ್ ಆರ್ ಪಕ್ಷ ಯಶಸ್ವಿ
ರಾಜ್ಯಸಭೆಗೆ ಸಚಿನ್, ರೇಖಾ
ಕ್ರಿಕೆಟರ್ ಸಚಿನ್ ತೆಂಡೂಲ್ಕರ್, ನಟಿ ರೇಖಾ ಹಾಗೂ ಉದ್ಯಮಿ ಅನು ಆಗಾ ಅವರನ್ನು ರಾಜ್ಯಸಭೆಗೆ ಏ.26ರಂದು ನಾಮಕಾರಣ. ಜೂ.5 ರಂದು ತೆಂಡೂಲ್ಕರ್ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರ.
'ಮಹಾರಾಜ'ಈಸ್ಟ್ ಇಂಡಿಯಾ ಕಂಪನಿ
ಮೇ.8 ರಂದು 100ಕ್ಕೂ ಅಧಿಕ ಏರ್ ಇಂಡಿಯಾ ಪೈಲಟ್ ಗಳಿಂದ ಮುಷ್ಕರ ಆರಂಭ 58 ದಿನಗಳ ಮುಂದುವರಿಕೆ ಜು.4 ರಂದು ಮುಷ್ಕರ ಹಿಂತೆಗೆತ
ಸಂಸತ್ತಿಗೆ ಷಷ್ಠಿಪೂರ್ತಿ
ಭಾರತದ ಸಂಸತ್ತಿಗೆ ಮೇ.13ರಂದು 60ನೇ ಹುಟ್ಟುಹಬ್ಬದ ಸಂಭ್ರಮ
ರಸ್ನಾ ಗರ್ಲ್ ಇನ್ನಿಲ್ಲ
ರಸ್ನಾ ಜಾಹೀರಾತಿನ ಸುಂದರ ಹುಡುಗಿ ನಟಿ ತರುಣಿ ಸಚದೇವ್ 14ನೇ ಹುಟ್ಟುಹಬ್ಬದ ದಿನದಂದೇ ದುರಂತ ಸಾವು. ನೇಪಾಳದ ವಿಮಾನ ದುರಂತದಲ್ಲಿ ತಾಯಿ ಜೊತೆ ಮೇ.14ರಂದು ಅಪಘಾತದಲ್ಲಿ ಸಾವು
ವಿಶಿ ದಿ ಗ್ರೇಟ್
ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಮಾಸ್ಕೋದಲ್ಲಿ ನಡೆದ ಟೂರ್ನಿಯಲ್ಲಿ ಇಸ್ರೇಲಿನ ಬೋರಿಸ್ ಗೆಲ್ ಫ್ಯಾಂಡ್ ಸೋಲಿಸಿ 5ನೇ ಬಾರಿಗೆ ವಿಶ್ವ ಚೆಸ್ ಚಾಂಪಿಯನ್ ಆದರು.
ಯುಪಿಎಗೆ 3
ಮೇ.21 ರಂದು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್ II ಸರ್ಕಾರಕ್ಕೆ ಮೂರು ವರ್ಷ ಪೂರೈಸಿದ ಸಂಭ್ರಮ
ಕೆಕೆಆರ್ ಐಪಿಎಲ್ ಚಾಂಪಿಯನ್
ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ 5 ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮೇ 27ರಂದು ಸೋಲಿಸಿತು. ಗಂಭೀರ್ ತಂಡ ಚೊಚ್ಚಲ ಐಪಿಎಲ್ ಕಪ್ ಗಳಿಸಿತು
ಭೂ ಸೇನಾ ಮುಖ್ಯಸ್ಥ
ಜನರಲ್ ಬೈಕ್ ರಾಮ ಸಿಂಗ್ ಅವರು 27ನೇ ಭೂ ಸೇನಾ ಮುಖ್ಯಸ್ಥರಾಗಿ ಮೇ 31ರಂದು ಅಧಿಕಾರ ಸ್ವೀಕಾರ. ಜನರಲ್ ವಿಕೆ ಸಿಂಗ್ ಸ್ಥಾನಕ್ಕೆ ಬೈಕ್ ರಾಮ್ ಸಿಂಗ್.
ಮುಖ್ಯ ಚುನಾವಣಾ ಆಯುಕ್ತ
ಸೈಯದ್ ಖುರೇಷಿ ಸ್ಥಾನಕ್ಕೆ ಹೊಸ ಮುಖ್ಯ ಚುನಾವಣಾ ಆಯುಕ್ತರಾಗಿ ವಿಎಸ್ ಸಂಪತ್ ಜೂನ್ 11 ರಂದು ಅಧಿಕಾರ ಸ್ವೀಕಾರ
ಸೈನಾ ಶೈನಿಂಗ್
ಜೂ.17ರಂದು ಚೀನಾದ ಕ್ಸುರು ಲಿ ಅವರನ್ನು ಸೋಲಿಸಿ ಸತತ ಮೂರನೇ ಬಾರಿಗೆ ಇಂಡೋನೇಷಿಯಾ ಓಪನ್ ಬಾಡ್ಮಿಂಟನ್ ಪ್ರಶಸ್ತಿ ಗೆದ್ದ ಸೈನಾ ನೆಹ್ವಾಲ್
ಐಎಂಎಫ್ ಗೆ ಭಾರತದ ಹಣ
ಯುರೋ ವಲಯದ ಸಂಕಷ್ಟ ಪರಿಹಾರಕ್ಕಾಗಿ ಜೂ.19 ರಂದು ಐಎಂಎಫ್ ಗೆ ಭಾರತದಿಂದ 10 ಬಿಲಿಯನ್ ಡಾಲರ್ ನೀಡಿಕೆ
ಬಿಲ್ಲುಗಾರ್ತಿ ದೀಪಿಕಾ
ಜೂ.21ರಂದು ದೀಪಿಕಾ ಕುಮಾರಿ ಅವರು ವಿಶ್ವದ ನಂ.1 ಬಿಲ್ಲುಗಾರ್ತಿಯಾದರು.
ಮಮತಾಗೆ ರಿಲೀಫ್
ಸಿಂಗೂರು ಭೂ ಹಗರಣದಿಂದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ರಿಲೀಫ್. ಜೂ.22 ರಂದು ಕೋಲ್ಕತ್ತಾ ಹೈಕೋರ್ಟ್ ನಿಂದ ತೀರ್ಪು
ಅಬು ಜುಂದಾಲ್ ಬಂಧನ
26/11 ರ ಪ್ರಮುಖ ಆರೋಪಿ ಲಷ್ಕರ್ ಇ ತೋಯ್ಬಾದ ಅಬು ಜುಂದಾಲ್ ನನ್ನು ಜೂ. 26 ರಂದು ದೆಹಲಿ ಪೊಲೀಸರು ಬಂಧಿಸಿದರು.
ಮಾಯಾವತಿಗೆ ರಿಲೀಫ್
ಅಕ್ರಮ ಆಸ್ತಿ ಪ್ರಕರಣದ ಆರೋಪ ಹೊತ್ತಿದ್ದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿಗೆ ಸುಪ್ರೀಂಕೋರ್ಟಿನಿಂದ ಜು.6 ರಂದು ರಿಲೀಫ್
ಟೈಮ್ ಮ್ಯಾಗಜೀನ್ ನಲ್ಲಿ ಸಿಂಗ್
ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು 'underachiever' ಎಂದು ತನ್ನ ಮುಖಪುಟದಲ್ಲಿ ಪ್ರಕಟಿಸಿದ ಪ್ರತಿಷ್ಠಿತ ಟೈಮ್ ಮ್ಯಾಗಜೀನ್(ಜು.16 ಸಂಚಿಕೆ). ಔಟ್ ಲುಕ್ ನಲ್ಲಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾಗೂ ಇದೆ ಮರ್ಯಾದೆ
ದಾರಾ ಸಿಂಗ್ ಇನ್ನಿಲ್ಲ
ಕುಸ್ತಿಪಟು, ನಟ ದಾರಾಸಿಂಗ್ ಮುಂಬೈನಲ್ಲಿ ಜು.12ರಂದು ನಿಧನ. ಅವರಿಗೆ 83 ವರ್ಷ ವಯಸ್ಸಾಗಿತ್ತು
ಜಗದೀಶ್ ಶೆಟ್ಟರ್ ಕರ್ನಾಟಕ ಸಿಎಂ
ಜುಲೈ 12 ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾದ ಜಗದೀಶ್ ಶೆಟ್ಟರ್. ಡಿವಿ ಸದಾನಂದ ಗೌಡರ ಕುರ್ಚಿಗೆ ಉತ್ತರ ಕರ್ನಾಟಕದ ಶೆಟ್ಟರ್ ಆಯ್ಕೆ. ನಾಲ್ಕು ವರ್ಷದಲ್ಲಿ ಮೂರು ಮಂದಿ ಸಿಎಂಗಳನ್ನು ಕರ್ನಾಟಕದ ಜನತೆ ಕಂಡರು.
ಅಸಲಿ ಸೂಪರ್ ಸ್ಟಾರ್ ಅಸ್ತಂಗತ
ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ರಾಜೇಶ್ ಖನ್ನ ಮುಂಬೈನಲ್ಲಿ ಜುಲೈ.18 ರಂದು ಅಸ್ತಂಗತರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಅಸ್ಸಾಂ ಹಿಂಸಾಚಾರ
ಅಸ್ಸಾಂನ ಕೊಕ್ರಾಜಾಹ್ರ್ ಜಿಲ್ಲೆ ಹಾಗೂ ಇನ್ನಿತರ ಪ್ರದೇಶದಲ್ಲಿ ನಡೆದ ಜನಾಂಗೀಯ ಹಿಂಸಾಚಾರಕ್ಕೆ ಸುಮಾರು 80ಕ್ಕೂ ಅಧಿಕ ಜನರ ಬಲಿ.
ರಾಷ್ಟ್ರಪತಿಯಾಗಿ ಪ್ರಣಬ್
ಯುಪಿಎ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಜು.22ರಂದು ಆಯ್ಕೆ. ಬಿಜೆಪಿಯ ಅಭ್ಯರ್ಥಿ ಪಿಎ ಸಂಗ್ಮಾ ಅವರಿಗೆ ಜು.19ರಂದು ನಡೆದ ಚುನಾವಣೆಯಲ್ಲಿ ಸೋಲು.
ಒಲಿಂಪಿಕ್ಸ್ ಪದಕ ವಿಜೇತರು
ಜುಲೈ 27 -ಆಗಸ್ಟ್ 12 ರ ನಡುವೆ ನಡೆದ ಲಂಡನ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಒಟ್ಟು 6 ಪದಕ ಲಭಿಸಿತು. ಶೂಟರ್ ವಿಜಯ್ ಕುಮಾರ್, ಕುಸ್ತಿಪಟು ಸುಶೀಲ್ ಗೆ ಬೆಳ್ಳಿ, ಶೂಟರ್ ಗಗನ್ ನಾರಂಗ್, ಶಟ್ಲರ್ ಸೈನಾ ನೆಹ್ವಾಲ್, ಬಾಕ್ಸರ್ ಮೇರಿ ಕೋಮ್, ಕುಸ್ತಿ ಪಟು ಯೋಗೇಶ್ವರ್ ದತ್ತಾಗೆ ಕಂಚಿನ ಪದಕ. ಹಾಕಿಯಲ್ಲಿ ಕೊನೆ ಸ್ಥಾನಕ್ಕೆ ತೃಪ್ತಿ. ಪೇಸ್ -ಭೂಪತಿ ಜೊತೆಗೆ ಆಡಲು ನಿರಾಕರಣೆ ವೈಮನಸ್ಸು ಮುಂದುವರಿಕೆ.
ಈಶಾನ್ಯ ರಾಜ್ಯದವರ ಗುಳೆ
ಅಸ್ಸಾಂ ಗಲಭೆ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಈಶಾನ್ಯ ರಾಜ್ಯದವರ ಮೇಲೆ ಹಲ್ಲೆ. ಗಾಳಿಸುದ್ದಿಗೆ ಕಿವಿಗೊಟ್ಟು ಸಾವಿರಾರು ಮಂದಿ ಬೆಂಗಳೂರಿನಿಂದ ಈಶಾನ್ಯ ಭಾರತದ ಕಡೆಗೆ ಪಯಣ.
ಚೆನ್ನೈ, ಹೈದರಾಬಾದ್, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಗಾಳಿಸುದ್ದಿ ಎಸ್ ಎಂಎಸ್/ ಎಂಎಂಎಸ್ ಹರಡಿತ್ತು. 15 ದಿನಗಳ ಕಾಲ ರಾಶಿಗಟ್ಟಲೆ ಎಸ್ ಎಂಎಸ್ ಕಳಿಸುವುದನ್ನು ನಿಷೇಧಿಸಲಾಗಿತ್ತು.ಉಪ ರಾಷ್ಟ್ರಪತಿಯಾಗಿ ಅನ್ಸಾರಿ
ಆಗಸ್ಟ್ 10ರಂದು ಹಮೀದ್ ಅನ್ಸಾರಿ ಉಪ ರಾಷ್ಟ್ರಪತಿಯಾಗಿ ಮರು ಆಯ್ಕೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ನಂತರ ಮರು ಆಯ್ಕೆಯಾದ ದಾಖಲೆ ಬರೆದ ಅನ್ಸಾರಿ.
ವಿಲಾಸ್ ರಾವ್ ದೇಶ್ ಮುಖ್ ವಿಧಿವಶ
ಕೇಂದ್ರ ಸಚಿವ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶ್ ಮುಖ್ ಅವರು ಅಗಸ್ಟ್ 14 ರಂದು ವಿಧಿ ವಶರಾದರು.
ವಿವಿಎಸ್ ಲಕ್ಷ್ಮಣ್ ನಿವೃತ್ತಿ
ಕಲಾತ್ಮಕ ಬ್ಯಾಟ್ಸ್ ಮನ್ ವಿವಿಎಸ್ ಲಕ್ಷ್ಮಣ್ ಅವರು ಅಗಸ್ಟ್ 18 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದರು.
ಎಕೆ ಹಂಗಲ್ ಇನ್ನಿಲ್ಲ
ಪದ್ಮಭೂಷಣ ಅವತಾರ್ ಕಿಷನ್ ಹಂಗಲ್ ಅವರು ಆಗಸ್ಟ್ 26ರಂದು ನಿಧನರಾದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಶೋಲೆ, ಲಗಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಕಮ್ಯೂನಿಸ್ಟ್ ಪಾರ್ಟಿ ಅಜೀವ ಸದಸ್ಯರಾಗಿದ್ದರು.
ಮುಂಗಾರು ಅಧಿವೇಶನ ವೇಸ್ಟ್
ಕಲ್ಲಿದ್ದಲು ಗಣಿ ಹಗರಣ ಸಂಸತ್ತಿನ ಮುಂಗಾರು ಅಧಿವೇಶನವನ್ನು ಸಂಪೂರ್ಣವಾಗಿ ನುಂಗಿ ಹಾಕಿತು. ಕೇವಲ 25 ಗಂಟೆಗಳ ಕಾಲ ಮಾತ್ರ ಕಲಾಪ ಸದ್ವಿನಿಯೋಗವಾಯಿತು. ಉಳಿದ ಅವಧಿಯಲ್ಲಿ ಆರೋಪ, ಪ್ರತ್ಯಾರೋಪಗಳಲ್ಲೇ ಕಾಲ ವ್ಯರ್ಥವಾಯಿತು.
ಕ್ಷೀರಕ್ರಾಂತಿ ಹರಿಕಾರ ಇನ್ನಿಲ್ಲ
ಕ್ಷೀರಕ್ರಾಂತಿ ಹರಿಕಾರ ವರ್ಗೀಸ್ ಕುರಿಯನ್ ಅವರು ಗುಜರಾತಿನ ನಾದಿಯಾಡ್ ನಲ್ಲಿ ಸೆ.9 ರಂದು ಅಸುನೀಗಿದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮಮತಾರಿಂದ ಬೆಂಬಲ ಹಿಂತೆಗೆತ
ಸೆ.18 ರಂದು ಯುಪಿಎ II ಸರ್ಕಾರಕ್ಕೆ ತೃಣಮೂಲ ಕಾಂಗ್ರೆಸ್ ನೀಡಿದ್ದ ಬೆಂಬಲವನ್ನು ಮಮತಾ ಬ್ಯಾನರ್ಜಿ ಹಿಂಪಡೆದರು. ಯುಪಿಎ 'ಜನ ವಿರೋಧಿ ನೀತಿ 'ಅನುಸರಿಸುತ್ತಿದೆ ಎಂದು ಮಮತಾ ದೂರಿದರು. ಸರ್ಕಾರ ಅಲ್ಪಮತಕ್ಕೆ ಕುಸಿದರೂ ಬಾಹ್ಯಬೆಂಬಲ ಪಡೆದು ಸುಧಾರಿಸಿಕೊಂಡಿತು.
ಕೆಎಸ್ ಬ್ರಾರ್ ಮೇಲೆ ದಾಳಿ
1984ರಲ್ಲಿ ಆಪರೇಷನ್ ಬ್ಲೂ ಸ್ಟಾರ್ ನಲ್ಲಿದ್ದ ಲೆಫ್ಟಿನೆಂಟ್ ಜನರಲ್ ಕೆಎಸ್ ಬ್ರಾರ್ ಅವರ ಮೇಲೆ ಲಂಡನ್ ನಲ್ಲಿ ಸೆ.30ರಲ್ಲಿ ದಾಳಿ ನಡೆಯಿತು. ದಾಳಿ ನಡೆಸಿದವರು ಖಾಲಿಸ್ತಾನಿ ಸಿಖ್ ಮೂಲವಾದಿಗಳು ಎಂದು ತಿಳಿದು ಬಂದಿತ್ತು.
ಯಶ್ ಛೋಪ್ರಾ ದಿವಂಗತ
ಹಿಂದಿ ಚಿತ್ರ ನಿರ್ಮಾತೃ ಯಶ್ ಛೋಪ್ರಾ ಅವರು ಮುಂಬೈ ಆಸ್ಪತ್ರೆಯಲ್ಲಿ ಅಕ್ಟೋಬರ್ 21ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರ ನಿರ್ದೇಶನ ಕೊನೆ ಚಿತ್ರ ಜಬ್ ತಕ್ ಹೇ ಜಾನ್ ನ.13 ರಂದು ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿದೆ.
ಎಫ್ 1 ರೇಸ್ ಎರಡನೇ ಸದ್ದು
ಅಕ್ಟೋಬರ್ 28 ರಂದು ಎರಡನೇ ಬಾರಿಗೆ ಗ್ರೇಟರ್ ನೋಯ್ಡಾದಲ್ಲಿರುವ ಇಂಡಿಯನ್ ಗ್ರ್ಯಾಂಡ್ ಪ್ರೀಕ್ಸ್ ಬುದ್ಧ ಅಂತಾರಾಷ್ಟ್ರೀಯ ಸರ್ಕೀಟ್ ನಲ್ಲಿ ಯಶಸ್ವಿಯಾಗಿ ಜರುಗಿತು.
ಸವಿತಾ ಹಾಲಪ್ಪನವರ್ ದುರಂತ ಸಾವು
ಕರ್ನಾಟಕದ ಮೂಲದ ಸವಿತಾ ಹಾಲಪ್ಪನವರ್ ಅವರು ಗರ್ಭಿಣಿ ಸಂಬಂಧಿತ ಸಮಸ್ಯೆಗೆ ಸಿಲುಕಿ ಮಗು ಅಥವಾ ತಾಯಿ ಮಾತ್ರ ಉಳಿಯುವ ಸಂದರ್ಭ ಒದಗಿ ಬಂದಿತ್ತು.
ಐರ್ಲೆಂಡ್ ನಲ್ಲಿ ಗರ್ಭಪಾತಕ್ಕೆ ಅನುಮತಿ ಇಲ್ಲದ ಕಾರಣ ಸವಿತಾ ಅಕ್ಟೋಬರ್ 28ರಂದು ಸಾವನ್ನಪ್ಪಿದ್ದರು.ಇದರ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾನೂನು ಬದಲಿಸಲು ಐರ್ಲೆಂಡ್ ಮುಂದಾಯಿತುಬಾಳಾ ಠಾಕ್ರೆ ನಿಧನ
ಶಿವಸೇನೆ ಸ್ಥಾಪಕ, ಮರಾಠಿಗರ ಹೃದಯ ಸಾಮ್ರಾಟ ಬಾಳಾ ಠಾಕ್ರೆ ನ.17ರಂದು ನಿಧನರಾದರು. ನ.18ರಂದು ನಡೆದ ಅಂತಿಮಯಾತ್ರೆಯಲ್ಲಿ 20 ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ್ದರು.
ಉಗ್ರ ಕಸಬ್ ಗೆ ಗಲ್ಲು
26/11/2008ರ ಮುಂಬೈ ಉಗ್ರರ ದಾಳಿ ನಂತರ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ನಂತರ ಅದೇ ಜೈಲಿನಲ್ಲಿ ದಫನ್ ಮಾಡಲಾಯಿತು.
ಐಕೆ ಗುಜ್ರಾಲ್ ನಿಧನ
ಮಾಜಿ ಪ್ರಧಾನಿ ಇಂದ್ರ ಕುಮಾರ್ ಗುಜ್ರಾಲ್ ಅವರು ನವೆಂಬರ್ 30 ರಂದು ಅಸುನೀಗಿದರು.
ಇಂಗ್ಲೆಂಡ್ ಗೆ ಐತಿಹಾಸಿಕ ಸರಣಿ
ಧೋನಿ ನೇತೃತ್ವದ ಟೀಂ ಇಂಡಿಯಾವನ್ನು 1-2 ಅಂತರದಲ್ಲಿ ಸೋಲಿಸಿದ ಕುಕ್ ನೇತೃತ್ವದ ಇಂಗ್ಲೆಂಡ್ ತಂಡ 1984ರ ನಂತರ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ದಾಖಲೆ ಬರೆಯಿತು. ಇದಕ್ಕೂ ಮುನ್ನ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ 4-0 ಅಂತರದಿಂದ ಸೋತಿತ್ತು.
ಎಫ್ ಡಿಐ: ಯುಪಿಎಗೆ ಗೆಲುವು
ರೀಟೈಲ್ ಕ್ಷೇತ್ರದಲ್ಲಿ ಬಹುಬ್ರ್ಯಾಂಡ್ ನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ಗೆ ಮುಂದಾಗಿರುವ ಯುಪಿಎ ಸರ್ಕಾರಕ್ಕೆ ಸಂಸತ್ತಿನಲ್ಲಿ ಕೊನೆಗೂ ಗೆಲುವು
IOA ಮಾನ್ಯತೆ ರದ್ದು ಮಾಡಿದ IOC
ಭ್ರಷ್ಟಾಚಾರ, ನಿಯಮ ಉಲ್ಲಂಘನೆ ಆರೋಪದ ಮೇಲೆ ಡಿ.4 ರಂದು ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಮಾನ್ಯತೆಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕೌನ್ಸಿಲ್ ರದ್ದುಗೊಳಿಸಿತು.
ಸಿತಾರ್ ಮಾಂತ್ರಿಕ ರವಿಶಂಕರ್
ವಿಶ್ವ ಖ್ಯಾತ ಸಿತಾರ್ ವಾದಕ, ಸಂಗೀತಗಾರ ಪಂಡಿತ್ ರವಿಶಂಕರ್ ಅವರು ಕ್ಯಾಲಿಪಫೋರ್ನಿಯಾದ ಸ್ಯಾಡಿಯಾಗೋದಲ್ಲಿ ಡಿ.11 ರಂದು ಕೊನೆಯುಸಿರೆಳೆದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಮತ್ತೆ ಮೋದಿ ಮೋಡಿ
ಡಿ.20 ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಹೊರಬಂತು. ಹಿಮಾಚಲದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಗುಜರಾತಿನಲ್ಲಿ ನರೇಂದ್ರ ಮೋದಿ ನಾಲ್ಕನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು.
ಹೆಮ್ಮೆಯ ಹಾಕಿಪಟು ನಿಧನ
1948,1952 ಹಾಗೂ 1956 ರಲ್ಲಿ ಒಲಿಂಪಿಕ್ಸ್ ಚಿನ್ನ ಗೆದ್ದ ಹಾಕಿ ತಂಡದ ಸದಸ್ಯ ಲೆಸ್ಲಿ ಕ್ಲಾಡಿಯಸ್ ಅವರು ಡಿ.20ರಂದು ಕೋಲ್ಕತ್ತಾದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ದೆಹಲಿ ಸಾಮೂಹಿಕ ಅತ್ಯಾಚಾರ
ಡಿ. 16ರಂದು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಲು ಡಿ.22,23 ರಂದು ಪ್ರತಿಭಟನೆ ತೀವ್ರಗೊಂಡಿತು. ಪೊಲೀಸ್ ಪೇದೆ ತೋಮಾರ್ ಗಲಭೆಯಲ್ಲಿ ಸಾವನ್ನಪ್ಪಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರದ ಮೌಂಟ್ ಎಲೆಜಬೆತ್ ಆಸ್ಪತ್ರೆಗೆ ಸೇರಿದ್ದ ವಿದ್ಯಾರ್ಥಿನಿ ಶನಿವಾರ (ಡಿ.29) ಮೃತಪಟ್ಟಳು.ನಿರ್ಭಯ, ದಾಮಿನಿ, ಅಮಾನತ್ ಹೆಸರಿನಲ್ಲಿ ಕರೆಯಲ್ಪಟ್ಟ ಸಂತ್ರಸ್ತೆ ಈಗ ದೇಶದ ಮಗಳಾಗಿ ಅತ್ಯಾಚಾರಿಗಳ ವಿರುದ್ಧದ ಅಸ್ತ್ರವಾಗಿದ್ದಾಳೆ