ಶಾಸಕ ವಿಶ್ವನಾಥ್ ಲೋಕಾ ತನಿಖೆಗೆ ಸ್ಪೀಕರ್ ಅಡ್ಡಗಾಲು
ಆದರೆ ಈ ಬಗ್ಗೆ ಮುಂದೇನು ಮಾಡಬೇಕು ಎಂಬುದನ್ನು ಲೋಕಾಯುಕ್ತ ಕೋರ್ಟಿನ ನ್ಯಾ ಸುಧೀಂದ್ರರಾವ್ ಜನವರಿ 5ರಂದು ವಿಚಾರಣೆ ವೇಳೆ ತಿಳಿಸಲಿದ್ದಾರೆ.
ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಅವರು ಆದಾಯ ಮೀರಿದ ಆಸ್ತಿ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ. ಹಾಗಾಗಿ ಅವರನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1988ರ ಅಡಿ ವಿಚಾರಣೆ ನಡೆಸಬೇಕು. ಅನುಮತಿ ನೀಡಿ' ಎಂದು ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯಗೆ ಲೋಕಾಯುಕ್ತ ಪೊಲೀಸರು ಬಹಳ ಹಿಂದೆಯೇ ಮನವಿ ಮಾಡಿದ್ದರು.
ಆದರೆ ಅದರ ಬಗ್ಗೆ ಯಾವೊಂದೂ ನಿರ್ಣಯ ತೆಗೆದುಕೊಳ್ಳದಿದ್ದ ಬೋಪಯ್ಯ ಕಳೆದ ವಾರ ಲೋಕಾಯುಕ್ತ ಪೊಲೀಸರಿಗೆ ಮಾರುತ್ತರ ನೀಡಿದ್ದು, ಶಾಸಕರ ವಿರುದ್ಧ ತನಿಖೆ ನಡೆಸುವುದಕ್ಕೆ ಅನುಮತಿ ನೀಡಲಾಗದು ಎಂದಿದ್ದಾರೆ. 'ನೀವು ಸಲ್ಲಿಸಿರುವ ವರದಿಯಲ್ಲಿ ವಿಚಾರಣೆಗೆ ಅನುಮತಿ ನೀಡಲು ಪೂರಕವಾಗುವಂತಹ ಅಂಶಗಳು ಇಲ್ಲ' ಎಂದು ಸ್ಪೀಕರ್ ಷರಾ ಬರೆದಿರುವುದಾಗಿ ಮೂಲಗಳು ತಿಳಿಸಿವೆ.
ಅಲ್ಲಾಳಸಂದ್ರ ನಿವಾಸಿ ಶಶಿಧರ್ ಸಲ್ಲಿಸಿದ್ದ ದೂರಿನ ಆರೋಪ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಾಲಯ ಆದೇಶ ಹೊರಡಿಸಿತ್ತು. ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಶಾಸಕರು 7.74 ಕೋಟಿ ರೂಪಾಯಿ ಅಕ್ರಮ ಆಸ್ತಿ ಹೊಂದಿರುವುದು ಪತ್ತೆಯಾಗಿದೆ ಎಂದು ಆಗಸ್ಟ್ 4ರಂದೇ ವರದಿ ಸಲ್ಲಿಸಿದ್ದರು.
ವಿಶ್ವನಾಥ್ ವಿರುದ್ಧ ವಿಚಾರಣೆಗೆ ಅನುಮತಿ ನೀಡುವಂತೆ ಅದೇ ದಿನ ಸ್ಪೀಕರ್ ಅವರಿಗೆ ಪ್ರಸ್ತಾವ ಸಲ್ಲಿಸಿದ್ದರು. ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಈ ಪ್ರಸ್ತಾವ ಸ್ಪೀಕರ್ ಬಳಿಯೇ ಇತ್ತು.