ಬೆಂಗಳೂರಲ್ಲಿ ಕುಡಿತದ ಚಟಕ್ಕೆ ಎರಡು ಜೀವ ಬಲಿ
ಕುಮಾರಸ್ವಾಮಿ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಯಲಚೇನಹಳ್ಳಿಯಲ್ಲಿ ಹೋಂಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಾಲಾ (23) ಎಂಬ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹವೇ ಆಕೆಯ ಜೀವ ಹರಣಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಆರು ವರ್ಷಗಳ ಹಿಂದೆ ಕೃಷ್ಣಮೂರ್ತಿ ಎಂಬಾತನ ಜೊತೆ ಮಾಲಾ ಮದುವೆ ನಡೆದಿತ್ತು. ಅವರಿಗೆ 1 ವರ್ಷ ಗಂಡುಮಗುವಿದೆ. ಗಂಡ ಕೃಷ್ಣಮೂರ್ತಿ ದಿನವೂ ಮನೆಗೆ ಕುಡಿದು ಬರುತ್ತಿದ್ದ. ಈ ಕಾರಣ ಇಬ್ಬರ ನಡುವೆ ಜಗಳಗಳಾಗುತ್ತಿದ್ದವು. ಬುಧವಾರ ರಾತ್ರಿ ಕೂಡ ದಂಪತಿಗಳ ನಡುವೆ ಭಾರೀ ಜಗಳ ನಡೆದಿದೆ.
ಇದರಿಂದ ತೀವ್ರ ನೊಂದಿದ್ದ ಮಾಲಾ ತಾನು ತವರುಮನೆಗೆ ಹೋಗುವುದಾಗಿ ಬೆದರಿಕೆ ಹಾಕಿದ್ದಾಳೆ. ಅದಕ್ಕೂ ಜಗಳ ತೆಗೆದ ಗಂಡ ಆಕೆಯನ್ನು ಮನೆಯಿಂದ ಹೋಗಲು ಬಿಟ್ಟಿಲ್ಲ. ರಾತ್ರಿ ಊಟ ಮಾಡಿ ಮಗುವನ್ನು ಮಲಗಿಸಿದ ಮೇಲೆ ಹೆಂಡತಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ.
ಗಂಡ ಆತ್ಮಹತ್ಯೆ : ಇನ್ನೊಂದು ಘಟನೆಯಲ್ಲಿ ಜೆ.ಬಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಾಬುಸಾಬ್ ಪಾಳ್ಯದ ಲಾಂಡ್ರಿ ಕೆಲಸ ಮಾಡುತ್ತಿದ್ದ ರಾಜು (40) ಎಂಬಾತ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕುಡಿದು ಬರುತ್ತಿದ್ದ ಗಂಡನ ಜಗಳಗಳಿಂದ ಬೇಸತ್ತು ಹೆಂಡತಿ ಕೋಪಗೊಂಡು ತವರುಮನೆಗೆ ತೆರಳಿದ್ದರಿಂದ ಖಿನ್ನನಾದ ಗಂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜು ದಂಪತಿಗಳಿಗೆ 4 ಮಕ್ಕಳಿದ್ದು, ಪ್ರತಿದಿನ ಮನೆಗೆ ರಾತ್ರಿ ಕುಡಿದು ಬರುತ್ತಿದ್ದ ರಾಜು ಗಲಾಟೆ ಮಾಡುತ್ತಿದ್ದ.
ಗಂಡನ ವರ್ತನೆಯಿಂದ ಬೇಜಾರು ಮಾಡಿಕೊಂಡಿದ್ದ ಹೆಂಡತಿ ಹತ್ತಿರದಲ್ಲಿದ್ದ ತವರುಮನೆಗೆ ತೆರಳಿದ್ದಾಳೆ. ಹೆಂಡತಿ ಮನೆಬಿಟ್ಟು ಹೋಗಿದ್ದರಿಂದ ನೊಂದುಕೊಂಡ ಗಂಡ ರಾಜು ನೇಣಿಗೆ ಶರಣಾಗಿದ್ದಾನೆ. ಹೆಂಡತಿ ತಿರುಗಿ ಮನೆಗೆ ಮರಳುವಷ್ಟರಲ್ಲಿ ಗಂಡ ದುಡುಕಿ ಜೀವ ಕಳೆದುಕೊಂಡಿದ್ದಾನೆ.