ಪಕ್ಷ ಮತ್ತು ಸರಕಾರದ ಮರ್ಯಾದೆ ಉಳಿಸಿದ್ದೇನೆ, ಈಶ್ವರಪ್ಪ
ಇದರಿಂದ ಪಕ್ಷ ಮತ್ತು ಸರಕಾರದ ಮರ್ಯಾದೆ ಉಳಿಸಿದ ಸಮಾಧಾನ ನನಗಿದೆ ಎಂದು ಉಪಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಹೇಳಿದ್ದಾರೆ.
ಲೋಕಾಯುಕ್ತ ದಾಳಿ ನಡೆದ ದಿನವಾದ ಸೋಮವಾರ (ಡಿ 24) ನನ್ನ ಪಾಲಿಗೆ ನೆಮ್ಮದಿಯ ದಿನ. ಲೋಕಾಯುಕ್ತ ಪೊಲೀಸರು 'ಗುಡ್ಡ ಅಗೆದು ಇಲಿ ಹಿಡಿದಿದ್ದಾರೆಂದು' ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ನನಗಾಗದ ಕೆಲವರು ದೂರು ನೀಡಲು ದಾಖಲೆ ಸಂಗ್ರಹ ಮಾಡುತ್ತಿರುವ ವಿಚಾರ ನನಗೆ ತಿಳಿದಿದೆ. ಈ ದಾಳಿಯಿಂದ ಇದ್ದ ಗೊಂದಲಗಳು ದೂರವಾಗಿದೆ. ಸತ್ಯ ಆದಷ್ಟು ಬೇಗ ಹೊರಬಂದು ರಾಜ್ಯದ ಜನತೆಯ ಮುಂದೆ 'ಕ್ಲೀನ್ ಇಮೇಜ್' ನಲ್ಲಿ ಬಂದು ನಿಲ್ಲುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಲೋಕಾಯುಕ್ತ ದಾಳಿಯ ಹಿಂದೆ ಯಾರ್ಯಾರು ಇದ್ದಾರೆ, ಇದರ ಹಿಂದಿನ ರಾಜಕೀಯ ಉದ್ದೇಶವೇನು ಎನ್ನುವ ವಿಷಯವನ್ನು ಈಗಲೇ ಬಹಿರಂಗ ಪಡಿಸಲಾಗದು. ನಾನು ಈ ವಿಷಯವನ್ನು ಇಲ್ಲೇ ಮುಗಿಸುವುದಿಲ್ಲ. ಧಾರಾವಾಹಿಯಂತೆ ಸ್ವಲ್ಪ ದಿನ ನಡೆದುಕೊಂಡು ಹೋಗಲಿ ಎಂದು ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಈಶ್ವರಪ್ಪ, ದಾಳಿಯ ಸಂದರ್ಭದಲ್ಲಿ ಸಿಕ್ಕ ಎರಡು ಕೆಜಿ ಚಿನ್ನದ ಬಗ್ಗೆ ಈಗಾಗಲೇ ಲೋಕಾಯುಕ್ತ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ.
ಖಾಸಾಗಿ ವ್ಯಕ್ತಿ ನೀಡಿದ ದೂರಿನ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ವಿರೋಧಪಕ್ಷಗಳು ನನ್ನ ರಾಜೀನಾಮೆ ಕೇಳುವುದು ಸರಿಯಲ್ಲ ಎಂದು ಈಶ್ವರಪ್ಪ ವಿರೋಧಪಕ್ಷದ ನಾಯಕರಿಗೆ ಕಿವಿಮಾತನ್ನು ಹೇಳಿದ್ದಾರೆ.