ಪತ್ರಿಕೋದ್ಯಮ ವಿದ್ಯಾರ್ಥಿನಿ ಕೊನೆಗೂ ಬದುಕುಳಿಯಲಿಲ್ಲ
ಹಿಂದಿನ ಸುದ್ದಿ: ಎರಡು ವರ್ಷದ ತನ್ನ ಪ್ರೇಮವನ್ನು ಒಲ್ಲೆ ಎಂದ ಕಾರಣಕ್ಕೆ ಭಗ್ನ ಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಬರೋಬ್ಬರಿ 8 ಬಾರಿ ಚಾಕುವಿನಿಂದ ಇರಿದು ಕೊನೆಗೆ ತಾನೂ ಅದೇ ಚಾಕುವಿನಲ್ಲಿ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಲ್ಲಿನ ಬಾಂದ್ರಾ ಚೇತನಾ ಕಾಲೇಜಿನ 22 ವರ್ಷದ ಪತ್ರಿಕೋದ್ಯಮಿಯೇ ದುಸ್ಸಾಹಸಕ್ಕೆ ಕೈಹಾಕಿದ ಭೂಪ. ಆತ ತನ್ನ ಸಹಪಾಠಿಗೆ ಮೊನ್ನೆ ಶನಿವಾರ ಬೆಳಗ್ಗೆ ಕಾಲೇಜು ಆವರಣದಲ್ಲೇ ಒಂದೇ ಸಮನೆ ಚಾಕುವಿನಿಂದ ತಿವಿದಿದ್ದಾನೆ.
ಇನ್ನೇನು ಅವಳು ಸತ್ತೇ ಹೋದಳು ಎಂದು ಭಾವಿಸಿದ ಅವನು ಭೀತಿಯಿಂದ ತನ್ನನ್ನೂ ಸಾಯಿಸಿಕೊಂಡಿದ್ದಾನೆ. ಆದರೆ ಇತ್ತ ಆ ವಿದ್ಯಾರ್ಥಿನಿ ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ನಿಖಿಲ್ ಬಾಣಕರ್ ಮತ್ತು ಪಾಯಲ್ ಬಲ್ಸಾರಾ ಅವರ ಈ ದುರಂತ ಪ್ರೇಮ ಯುವಜನತೆಯನ್ನು ಬೆಚ್ಚಿಬೀಳಿಸಿದೆ. 2 ತಿಂಗಳ ಹಿಂದೆ ಇವರಿಬ್ಬರ ಪ್ರೇಮ ಹಳಸಿದೆ. ಎರಡೂ ಕಡೆಯ ಕುಟುಂಬದವರು ದೂರುಗಳನ್ನು ದಾಖಲಿಸಿದ್ದಾರೆ. ಪೊಲೀಸರೂ ಎರಡೂ ಕಡೆಯವರನ್ನು ಕರೆಸಿ, ಬುದ್ಧಿವಾದ ಹೇಳಿದ್ದಾರೆ.
ಆದರೆ ಹುಡುಗುಬುದ್ಧಿಯ ನಿಖಿಲ್ ಗೆ ಅದ್ಯಾವುದೂ ಕಿವಿ ಮೇಲೆ ಬಿದ್ದಿಲ್ಲ. ಮೊನ್ನೆ ಶನಿವಾರ ಬೆಳಗ್ಗೆ 7.40ರಲ್ಲಿ ಕಾಲೇಜಿನಲ್ಲಿ ಎದುರಾದ ಇನಿಯಳಿಗೆ ತಿವಿದಿದ್ದಾನೆ.
ಮಾರಾಟ ತೆರಿಗೆ ಅಧಿಕಾರಿಯ ಪುತ್ರ ನಿಖಿಲ್, ಪದವಿ ಪೂರೈಸಿದ ಬಳಿಕ ಪತ್ರಿಕೋದ್ಯಮದಲ್ಲಿ ಆಸಕ್ತಿ ವಹಿಸಿ, ಚೇತನಾ ಕಾಲೇಜಿಗೆ ಸೇರಿದ್ದ. ಆದರೆ ಇಲ್ಲಿ ಉದ್ಯಮಿಯೊಬ್ಬರ ಪುತ್ರಿ ಪಾಯಲ್ ಸಹವಾಸಕ್ಕೆ ಸಿಕ್ಕಿದ್ದಾನೆ. 2 ವರ್ಷದ ಪ್ರೇಮದಲ್ಲಿ ಓಲಾಡಿದ ಬಳಿಕ ನಿಖಿಲ್, ಭಗ್ನ ಪ್ರೇಮಿಯಾಗಿ ತನ್ನ ಬಾಳನ್ನೇ ಭಗ್ನಗೊಳಿಸಿದ್ದಾನೆ.