ಕಿಲ್ಲರ್ ಬಸ್ ಗೆ ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ಬಲಿ
ಎರಡು ಬಸ್ ಗಳು ಏಕಕಾಲಕ್ಕೆ ಹಿಂದಕ್ಕೆ ಚಲಿಸಿದ ಕಾರಣ, ಬಸ್ ಹಿಂಬದಿಯಲ್ಲಿ ನಿಂತು ಶೀಟಿ ಹೊಡೆಯುತ್ತಿದ್ದ ಕಂಡೆಕ್ಟರ್ ಅವರಿಗೆ ಬಸ್ ಗುದ್ದಿದೆ. ಬಸ್ ನ ಚಕ್ರ ಕಂಡೆಕ್ಟರ್ ಮೇಲೆ ಚಲಿಸಿದ ಪರಿಣಾಮ ಕೋಲಾರ ಡಿಪೋಗೆ ಸೇರಿದ ಬಸ್ ಕಂಡೆಕ್ಟರ್ 40 ವರ್ಷದ ಬೀರಪ್ಪ ಅವರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಎರಡು ಬಸ್ ಗಳ ನಡುವೆ ಬೀರಪ್ಪ ಸಿಕ್ಕಿದ್ದರು ಎಂದು ಇನ್ನೊಂದು ಮೂಲಗಳು ಹೇಳುತ್ತಿದೆ.
ಸ್ಥಳಕ್ಕೆ ಉಪ್ಪಾರಪೇಟೆ ಪೊಲೀಸರು ಆಗಮಿಸಿದ್ದು, ಘಟನೆ ವಿವರ ಪಡೆದು, ಪರಿಶೀಲನೆ ನಡೆಸಿದ್ದಾರೆ. ಈ ದುರಂತಕ್ಕೆ ಸಾವಿರಾರು ಜನ ಮೂಕ ಪ್ರೇಕ್ಷಕರಾಗಿ ನೋಡಿದ್ದಾರೆ.
ಕಳೆದ ಒಂದು ವಾರದಲ್ಲಿ ಬನ್ನೇರುಘಟ್ಟ ರಸ್ತೆಯಲ್ಲಿ ಬಿಎಂಟಿಸಿ ಬಸ್ ಬಡಿದು ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಸಾವನ್ನಪ್ಪಿದ್ದರು. ಬಿಳೇಕಹಳ್ಳಿ ರಸ್ತೆ ಬಳಿ ನಡೆದ ಈ ಅಪಘಾತದಲ್ಲಿ ಒಬ್ಬ ಪುರುಷ ಹಾಗೂ ಮಹಿಳೆ ಸಾವನ್ನಪ್ಪಿದ್ದರು. ಘಟನೆಯಲ್ಲಿ 4 ವರ್ಷದ ಮಗು ತೀವ್ರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು.
ಇದರ ಜೊತೆಗೆ ಕನಕ ಪುರ ರಸ್ತೆಯಲ್ಲೂ ಕೂಡಾ ಇದೇ ರೀತಿ ಪ್ರಕರಣ ದಾಖಲಾಗಿತ್ತು, ಅಲ್ಲೂ ಕೂಡಾ ದಂಪತಿಗಳು ಕಿಲ್ಲರ್ ಬಿಎಂಟಿಸಿಗೆ ಬಲಿಯಾಗಿದ್ದರು.
ನಗರದ ಕೆಆರ್ ಪುರಂ ಬಳಿ ಟಿನ್ ಫ್ಯಾಕ್ಟರ್ ಹತ್ತಿರದ ಮೇಲ್ಸೇತುವೆಯಲ್ಲಿ ಮಂಗಳವಾರ (ಸೆ.25) ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಕಿಲ್ಲರ್ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಓರ್ವ ಮೃತಪಟ್ಟಿದ್ದು ಹಲವರಿಗೆ ಗಾಯಗಳಾಗಿತ್ತು.
ರಸ್ತೆ ದಾಟುತ್ತಿದ್ದ ಬಟ್ಟೆ ವ್ಯಾಪಾರಿ 22 ವರ್ಷದ ಖುತುಬ್ ಸಮಿವುಲ್ಲಾ ಎಂಬುವರು ಮೃತಪಟ್ಟಿದ್ದರು. ಬಸ್ ಚಾಲಕ ರವೀಂದ್ರ ರೆಡ್ಡಿ ಅವರಿಗೂ ಗಾಯಗಳಾಗಿದೆ. ಉಳಿದಂತೆ 6 ರಿಂದ 8 ಮಂದಿ ಗಾಯಗೊಂಡಿದ್ದರು.
ದೇಶದಲ್ಲೇ ನಂ.1 ಸ್ಥಾನದಲ್ಲಿರುವ ಕರ್ನಾಟಕ ಸಾರಿಗೆ ಸಂಸ್ಥೆ, ಬಿಎಂಟಿಸಿಗೆ 'ಕಿಲ್ಲರ್ ಬಿಎಂಟಿಸಿ' ಎಂಬ ಕುಖ್ಯಾತಿ ಬರಲು ಏನು ಕಾರಣ ಇರಬಹುದು ಎಂದು ಸಾರ್ವಜನಿಕರನ್ನು ಪ್ರಶ್ನಿಸಿದರೆ ನೇರವಾಗಿ ಚಾಲಕರ ಅಜಾಗರೂಕತೆಗೆ ಕಾರಣ ಎನ್ನುತ್ತಾರೆ.