ದುರದೃಷ್ಟಕರ, ಲೋಕಾ ದಾಳಿಗೆ ಕಾಂಗ್ರೆಸ್ 'ಕೈ'ವಾಡ
ಯಡಿಯೂರಪ್ಪ ಬಿಜೆಪಿ ತೊರೆದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಪಾಳಯದಲ್ಲಿ ಹೇರಳವಾಗಿ ಕಾಣಿಸಿಕೊಂಡಿರುವ ನಳೀನ್ ಕುಮಾರ್ ಅವರು ಈಶ್ವರಪ್ಪ ಅವರ ಕಷ್ಟಕಾಲಕ್ಕೆ ಈಶ್ವರಪ್ಪ ಪರ ನಿಂತಿದ್ದು, ಲೋಕಾಯುಕ್ತ ದಾಳಿ ದುರದೃಷ್ಟಕರ ಎಂದು ಹೇಳಿದ್ದಾರೆ.
ಈ ಮಧ್ಯೆ, ತಮ್ಮ ಮನೆಯ ಬೀಗ ಒಡೆದು ಲೋಕಾ ಪೊಲೀಸರು ತಮ್ಮ ಆಸ್ತಿ ದಾಖಲೆ ಪತ್ರಗಳನ್ನು ಪರಿಶೀಲಿಸುತ್ತಿದ್ದಾರೆ ಎಂಬ ಸುದ್ದಿ ಕೊಪ್ಪಳದಲ್ಲಿರುವ ಈಶ್ವರಪ್ಪ ಅವರ ಕಿವಿಗೆ ಬಿದ್ದಿದೆ.
ಲೋಕಾಯುಕ್ತ ಕೋರ್ಟಿನಲ್ಲಿ ತಮ್ಮ ವಿರುದ್ಧ ಕೇಸು ದಾಖಲಾಗುತ್ತದೆ ಎಂದು ನಿರೀಕ್ಷಿಸಿದ್ದಂತೆ ಈಶ್ವರಪ್ಪನವರು 'ಲೋಕಾಯುಕ್ತ ಪೊಲೀಸರ ದಾಳಿ ನಿರೀಕ್ಷಿತ' ಎಂದಿದ್ದಾರೆ. ದಾಳಿ ನಡೆಸಲಿ ಬಿಡಿ. ಅದನ್ನು ನಾನು ಸ್ವಾಗತಿಸುತ್ತೇನೆ. ಪ್ರಕರಣದಲ್ಲಿ ನಾನು ನಿರ್ದೋಷಿ ಎಂಬುದು ಸಾಬೀತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಂದಷ್ಟು ರಾಜಕೀಯದ ಬಗ್ಗೆಯೂ ಮಾತನಾಡಿರುವ ಈಶ್ವರಪ್ಪ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್, ಜೆಡಿಎಸ್, ಕೆಜೆಪಿ ಎಂದು ಜಪಿಸುತ್ತಿರುವವರು ಮೊದಲು ಪಕ್ಷವನ್ನು ಬಿಡಲಿ. ಆಮೇಲೆ ಪಕ್ಷದ ವಿರುದ್ಧ ಮಾತನಾಡಲಿ ಎಂದು ಆಶಿಸಿದ್ದಾರೆ.
'ಪಕ್ಷದ ವತಿಯಿಂದ ಮೊದಲ 150 ಟಿಕೆಟ್ ರೆಡಿಯಾಗಿದೆ. ಜನವರಿ 20ರ ನಂತರ ಮೊದಲ ಪಟ್ಟಿ ಬಿಡುಗಡೆಯಾಗಲಿದೆ' ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.