ದಿಲ್ಲಿ ಗ್ಯಾಂಗ್ ರೇಪ್: ಮಾನವೀಯತೆ ಮೆರೆದ ಯುವರಾಜ
ಈ ಮಧ್ಯೆ, ಭಾರತೀಯ ಕ್ರಿಕೆಟ್ ತಂಡದ 'ಯುವರಾಜ' ಸಿಂಗ್ ಅವರು ತಮ್ಮಲ್ಲಿರುವ ನೈಜ ಕ್ರೀಡಾಮನೋಭಾವವನ್ನು ಜಗತ್ತಿಗೆ ತೋರಿಸಿದ್ದಾರೆ. ಮಾನವೀಯತೆಯ ಸಾಕಾರಮೂರ್ತಿಯಾಗಿ ಯುವಿ, ಬಾಧಿತ ಯುವತಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಇಡೀ ನಾಗರಿಕ ಸಮಾಜ ನಿನ್ನ ಬೆಂಬಲಕ್ಕೆ ನಿಂತಿದೆ ಎಂದು ಧೈರ್ಯ ತುಂಬಿದ್ದಾರೆ.
ಇಂತಹ ಹಾರೈಕೆಗಳ ಫಲವಾಗಿಯೋ ಏನೂ ಯುವತಿ ಚಿಕಿತ್ಸೆ ಪಡೆಯುತ್ತಿರುವ ಸಫ್ದರ್ ಜಂಗ್ ಆಸ್ಪತ್ರೆಯ ವೈದ್ಯ ಹುಬ್ಬಳ್ಳಿಯ ಡಾ. ಬಿಡಿ ಅಥಣಿ ಅವರು ಹೇಳುವಂತೆ 'ಯುವತಿಯು ಅಸಾಮಾನ್ಯ ಮನೋಸ್ಥೈರ್ಯ ಪ್ರದರ್ಶಿಸಿದ್ದು, ಅಂತಹ ನೋವಿನಲ್ಲೂ ಚೇತರಿಕೆ ಕಾಣುತ್ತಿದ್ದಾಳೆ' ಎಂದಿದ್ದಾರೆ.
ಆಸ್ಪತ್ರೆ, ಚಿಕಿತ್ಸೆ, ಸಾವಿನ ದವಡೆಯಲ್ಲಿ ಬದುಕಿಗಾಗಿ ಹೋರಾಡುವುದನ್ನು ಯುವರಾಜ್ ಗಿಂತ ಬೇರೆ ಯಾರು ತಾನೆ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಹಾಗಾಗಿಯೇ ನಮ್ಮ ಯುವರಾಜ ನಿನ್ನೆ ಇಂಗ್ಲಂಡ್ ವಿರುದ್ಧ ಭರ್ಜರಿ ಆಲ್ ರೌಂಡ್ ಆಟ ಪ್ರದರ್ಶಿಸಿದ್ದೂ ಅಲ್ಲದೆ ಮೈದಾನದ ಆಚೆಗೆ ಮಾನವೀಯತೆ ಮೆರೆದಿದ್ದಾರೆ.
ಯುವರಾಜ್ ಸಿಂಗ್ ನಿನ್ನೆ ತಮ್ಮ ಆಲ್ ರೌಂಡ್ ಆಟಕ್ಕೆ ಗಳಿಸಿದ 'ಪಂದ್ಯ ಪುರುಷೋತ್ತಮ' ಪ್ರಶಸ್ತಿಯನ್ನು ದೆಹಲಿ ಅತ್ಯಾಚಾರ ಬಾಧಿತ ಯುವತಿಗೆ ಅರ್ಪಿಸಿದ್ದಾರೆ.
ತಮಗೆ 'ಪಂದ್ಯ ಪುರುಷೋತ್ತಮ' ಪ್ರಶಸ್ತಿ ಸಂದಾಯವಾದ ಬಳಿಕ ಮಾತನಾಡಿದ ಯುವಿ ಹೇಳಿದ್ದೇನೆಂದರೆ... ಆ ಯುವತಿಯು ಬೇಗನೆ ಚೇತರಿಸಿಕೊಳ್ಳಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವೆ. ಅವಳು ಆಸ್ಪತ್ರೆಯಲ್ಲಿ ಹೇಗಿದ್ದಾಳೋ ಏನೋ. ಅವಳ ಸ್ಥಿತಿ ಕಂಡು ನನಗೂ ಮಾನಸಿಕ ಆಘಾತವಾಗಿದೆ. ನಾನು ನನ್ನ ಆ ಪ್ರಶಸ್ತಿಯನ್ನು ಆ ಯುವತಿ ಮತ್ತು ಆಕೆಯ ಆಪ್ಪ-ಅಮ್ಮನಿಗೆ ಅರ್ಪಿಸುವೆ.
ಈ ಮಧ್ಯೆ, ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಸೆರೆಯಾಗಿದ್ದು, ಒಟ್ಟು 6 ಮಂದಿಯ ಬಂಧನವಾದಂತಾಗಿದೆ.