ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಭಾರೀ ಆಘಾತ ನೀಡಿದ ಎಐಸಿಸಿ
ಬಿಜೆಪಿ ಆಡಳಿತ, ಕೆಜೆಪಿ ಪಕ್ಷದ ಉದಯದಿಂದ ಸಹಜವಾಗಿ ಕಾಂಗ್ರೆಸ್ ಪಕ್ಷದ ಟಿಕೆಟಿಗೆ ಭಾರೀ ಬೇಡಿಕೆಯಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮುನ್ನ ನಿರ್ದಿಷ್ಟ ಪ್ರಕ್ರಿಯೆ ಅನುಸರಿಸಬೇಕೆಂದು ಹೈಕಮಾಂಡ್ ರಾಜ್ಯ ಕಾಂಗ್ರೆಸಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಿದೆ.
ಸತತ ಎರಡು ಬಾರಿ ಸೋತ, ಠೇವಣಿ ಕಳೆದುಕೊಂಡ ಅಭ್ಯರ್ಥಿಗಳಿಗೆ ಟಿಕೆಟ್ ಈ ಬಾರಿ ಸಿಗುವುದು ಕಷ್ಟ. ಅಷ್ಟೇ ಅಲ್ಲದೆ ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ನೀಡದೇ ಇರಲು ಅಭ್ಯರ್ಥಿ ಪರಿಶೀಲನಾ ಸಮಿತಿ ಕೆಪಿಸಿಸಿಗೆ ಸೂಚನೆ ನೀಡಿದೆ.
ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕ್ರಿಮಿನಲ್ ಹಿನ್ನಲೆಯವರು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರು, 15 ಸಾವಿರಕ್ಕಿಂತಲೂ ಹೆಚ್ಚಿನ ಮತಗಳಿಂದ ಪರಾಭವಗೊಂಡವರಿಗೂ ಟಿಕೆಟ್ ನೀಡಬಾರದೆಂದು ಕೆಪಿಸಿಸಿಗೆ ಸಮಿತಿ ಸೂಚಿಸಿದೆ
ಕಳೆದ ರಾಜ್ಯಸಭಾ ಮತ್ತು ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣರಾದವರಿಗೂ ಈ ಬಾರಿ ಟಿಕೆಟ್ ಸಿಗುವುದು ದುಸ್ತರ.
ಈ ಮಾರ್ಗಸೂಚಿ ಸಿದ್ದಪಡಿಸುವ ಪ್ರಕ್ರಿಯೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿರುವುದರಿಂದ ಇದು ಕೇವಲ ಕಾಟಾಚಾರಕ್ಕೆ ಮಾಡಿದ ಪಟ್ಟಿಯಲ್ಲ ಎನ್ನುವುದು ರಾಜ್ಯ ಕಾಂಗ್ರೆಸ್ ನಾಯಕರ ಅಂಬೋಣ.