ಜಗನ್ ಮುಂದಿನ ಸಿಎಂ ಎಂದ ಕೆಎಂಎಫ್ ರೆಡ್ಡಿ
ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಎಷ್ಟೇ ಕುತಂತ್ರಗಳನ್ನು ಮಾಡಿ ಜನಾರ್ದನರೆಡ್ಡಿ ಮತ್ತು ಜಗನ್ಮೋಹನ್ರೆಡ್ಡಿಯನ್ನು ಜೈಲಿನಲ್ಲಿಟ್ಟರೂ ಅವರ ಚೈತನ್ಯವನ್ನು ತಡೆಯಲಾಗುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಎಚ್ಚರಿಸಿದರು.
ಬಳ್ಳಾರಿ ರೆಡ್ಡಿ ಸೋದರರು ಹಾಗೂ ಶ್ರೀರಾಮುಲು ಅವರ ಏಳಿಗೆಯನ್ನು ಸಹಿಸದ ಬಿಜೆಪಿ ಹೈ ಕಮಾಂಡ್ ನ ಕೆಲವು ನಾಯಕರು ಭಾರಿ ಕುತಂತ್ರ ನಡೆಸಿದರು.
ರಾಜ್ಯ ಹಾಗೂ ಕೇಂದ್ರದ ಇತರ ಮುಖಂಡರು ಮೈನಿಂಗ್ ಮಾಫಿಯಾದ ಲಾಭ ಪಡೆದವರೇ ಆಗಿದ್ದಾರೆ. ಆದರೆ, ಜನಾದರ್ನರೆಡ್ಡಿ ಮಾತ್ರ ಅವರ ಕಣ್ಣಿಗೆ ಕಾಣಿಸಿದ್ದು ಎಂದರೆ ಯಾವ ರೀತಿ ತಂತ್ರ ಮಾಡಿದ್ದರು ಎಂಬುದನ್ನು ಗಮನಿಸಬಹುದು.
ರಾಜ್ಯ ಹಾಗೂ ಕೇಂದ್ರದ ಇತರ ಮುಖಂಡರು ಮೈನಿಂಗ್ ಮಾಫಿಯಾದ ಲಾಭ ಪಡೆದವರೇ ಆಗಿದ್ದಾರೆ. ಆದರೆ, ಜನಾದರ್ನರೆಡ್ಡಿ ಮಾತ್ರ ಕಣ್ಣಿಗೆ ಕಾಣಿಸಿದ್ದು ಅವರ ಮೇಲೆ ನಡೆದ ಕುತಂತ್ರವೇ ಸರಿ ಎಂದು ಸರಕಾರಗಳ ಕ್ರಮವನ್ನು ಅವರು ಖಂಡಿಸಿದರು.
ಜಗನ್ ಸೂಪರ್ ಪವರ್: ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಪಕ್ಷದ ಸಂಸ್ಥಾಪಕ ಜಗನ್ ಮೋಹನ್ ರೆಡ್ಡಿ ಅವರು ಜೈಲಿನಲ್ಲಿದ್ದರೂ ಜನರ ಮನಸ್ಸಿನಿಂದ ದೂರಾಗಿಲ್ಲ.
ಕಳೆದ ಚುನಾವಣೆಯಲ್ಲಿ 18 ಸ್ಥಾನಗಳಲ್ಲಿ ಹದಿನೈದು ಸ್ಥಾನಗಳನ್ನು ಗೆದ್ದು ಜನಪ್ರಿಯತೆ ಸಾಬೀತು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲೂ ಜಯಭೇರಿ ಬಾರಿಸಿ ಆಂಧ್ರದ ಮುಂದಿನ ಮುಖ್ಯಮಂತ್ರಿಯಾಗಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅಧಿಕಾರ ಪಟ್ಟಕ್ಕೇರುವುದು ಖಚಿತ ಎಂದು ಹೇಳಿದರು.
ಕಳೆದ ವರ್ಷ ಮೃತಪಟ್ಟ ಅನೇಕಲ್ ತಾಲೂಕಿನ ಮರಸೂರಿನ ರಮೇಶ್ರೆಡ್ಡಿ ನೆನಪಿನ ಸಭೆಯಲ್ಲಿ ಭಾಗವಹಿಸಿ ಸೋಮಶೇಖರ ರೆಡ್ಡಿ ಮಾತನಾಡಿದರು.
ಪ್ರಾದೇಶಿಕ ಪಕ್ಷ ಮುಖ್ಯ: ಬಳ್ಳಾರಿಯಲ್ಲಿ ಸ್ವಾಭಿಮಾನಿ ಶ್ರೀರಾಮುಲು ಅವರು ಗೆಲ್ಲುವ ಮೂಲಕ ಬಿಜೆಪಿ ನಾಯಕರಿಗೆ ತಕ್ಕ ಉತ್ತರ ನೀಡಿದ್ದಾರೆ. ಬಡವರ ಶ್ರಮಿಕರ ಮತ್ತು ರೈತರ ಪರವಾಗಿ ನಿಲ್ಲಬಲ್ಲ ನಾಯಕರಾಗಿ ಬೆಳೆದಿದ್ದಾರೆ. ಅವರ ಮೇಲೆ ಜನಾರ್ದನ ರೆಡ್ಡಿ ಅವರ ಆಶೀರ್ವಾದ ಸದಾಕಾಲ ಇರುತ್ತದೆ.
ಜಗನ್ ರೆಡ್ಡಿಯಂತೆ ಜೈಲಿನಲ್ಲಿದ್ದರೂ ಜನಾರ್ದನ ರೆಡ್ಡಿ ಅವರ ಪ್ರಭಾವದಿಂದ ಮುಂದಿನ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಪಡೆಯುತ್ತೇವೆ. ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಲಿದೆ.
ಈಗ ಪ್ರಾದೇಶಿಕ ಪಕ್ಷಗಳದ್ದೇ ಕಾಲ. ಆದರೆ, ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಯಾವುದೇ ಬೇರೆ ಪಕ್ಷಗಳ ಜೊತೆ ಹೊಂದಾಣಿಕೆ ಬಗ್ಗೆ ಈ ಸಮಯಕ್ಕೆ ಯೋಚಿಸಿಲ್ಲ. ಮುಂದಿನ ಕಾರ್ಯತಂತ್ರದ ಬಗ್ಗೆ ಸಮಯ ಬಂದಾಗ ನಿರ್ಧರಿಸಲಾಗುವುದು ಎಂದು ಸೋಮಶೇಖರ ರೆಡ್ಡಿ ಹೇಳಿದರು.