ಲಡ್ಡು ರೆಡಿ, ನಾನು 'ಪ್ಯೂರ್ ಲೀ ಬಿಜೆಪಿ': ಕೃ.ಶೆಟ್ಟಿ
ರಾಜ್ಯದಲ್ಲಿ ಈ ಬಾರಿ ರಾಜಕೀಯ ಪಲ್ಲಟಗಳು ಭಾರಿ ಪ್ರಮಾಣದಲ್ಲಿದೆ. ತಮ್ಮ ನಿಷ್ಠೆ ಮೊದಲು ಯಡಿಯೂರಪ್ಪ ಆನಂತರವಷ್ಟೇ ಬಿಜೆಪಿಗೆ ಎನ್ನುತ್ತಿದ್ದ ಎಸ್ಎನ್ ಕೃಷ್ಣಯ್ಯ ಶೆಟ್ಟರು ಯಡಿಯೂರಪ್ಪಗೇ ಆಶ್ಚರ್ಯವಾಗುವಷ್ಟು ಬದಲಾಗಿದ್ದಾರೆ. ಹೇಗೆಂದರೆ...
ಅಧಿಕಾರದಲ್ಲಿದ್ದಾಗ ಜಂಟಿಯಾಗಿ ನಡೆಸಿದ್ದ ಭೂಹಗರಣಕ್ಕೆ ಸಂಬಂಧಿಸಿದಂತೆ ಮೊನ್ನೆ ಲೋಕಾಯುಕ್ತ ಕೋರ್ಟಿಗೆ ಇಬ್ಬರೂ ಹಾಜರಾಗಿದ್ದರು. ಇಬ್ಬರೂ ಸುಮಾರು 2 ಗಂಟೆ ಕಾಲ ಕೋರ್ಟಿನಲ್ಲಿ ಉಪಸ್ಥಿತರಿದ್ದರು. ಆದರೆ ಅಪ್ಪಿತಪ್ಪಿಯೂ ಒಬ್ಬರಿಗೊಬ್ಬರು ಮುಖ ಕೊಟ್ಟಿಕೊಂಡು ಮಾತನಾಡಿಲ್ಲ.
ಅದಾದ ನಂತ ಮೊನ್ನೆ ವೈಕುಂಠ ಏಕಾದಶಿ ನೆಪದಲ್ಲಿ ಲಡ್ಡು ಹಂಚಲು ಸಿದ್ಧತೆ ನಡೆಸಿದ್ದಾರೆ. ಆಗ ಸುದ್ದಿಗಾರರು ಏನ್ಸಾರ್ ನೀವು ಬಿಜೆಪಿಯೋ/ಕೆಜೆಪಿಯೋ ಎಂದು ಕೇಳಿದ್ದೇ ತಡ ಹಾವು ತುಳಿದವರಂತೆ 'ಎಲ್ಲಾದ್ರೂ ಉಂಟಾ ಗುರುಗಳೇ. ನಾನು ಯಾವುದೇ ಒಬ್ಬ ವ್ಯಕ್ತಿಗೆ ಸೀಮಿತನಾಗುವುದಿಲ್ಲ. ನಾನು ಪ್ಯೂರ್ ಲೀ ಬಿಜೆಪಿ' ಎಂದು ನಿಟ್ಟುಸಿರುಬಿಟ್ಟಿದ್ದಾರೆ. ಈ ಹಿಂದೆ ಕೃಷ್ಣಯ್ಯ ಶೆಟ್ರು ನನ್ನದು ತಿರುಪತಿ ತಿಮ್ಮಪ್ಪನ ಪಕ್ಷ ಎಂದಿದ್ದರು.
ಅದಾದ ನಂತರ ಮುಜರಾಯಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಾಲೂರಿನ ಕೃಷ್ಣಯ್ಯ ಶೆಟ್ರು ಪ್ರತಿ ಬಾರಿಯಂತೆ ಈ ಬಾರಿಯೂ ಸ್ವಂತ ಖರ್ಚಿನಲ್ಲಿ ಲಕ್ಷಾಂತರ ಲಡ್ಡುಗಳನ್ನು ಪ್ರಸಾದದ ರೂಪದಲ್ಲಿ 50ಕ್ಕೂ ಹೆಚ್ಚು ದೇವಾಸ್ಥಾನಗಳಲ್ಲಿ ಹಂಚಲಿದ್ದಾರೆ. 40 ಲಕ್ಷ ರೂ. ವೆಚ್ಚದಲ್ಲಿ 3 ಲಕ್ಷ ಲಡ್ಡುಗಳನ್ನು 5ನೇ ವರ್ಷವೂ ಹಂಚಲಿದ್ದಾರೆ. ಹನುಮಂತ ನಗರದ ಗವಿಗಂಗಾಧರೇಶ್ವರ ದೇವಸ್ಥಾನದ ಸಮೀಪವಿರುವ ಛತ್ರದಲ್ಲಿ ಈ ಲಾಡುಗಳು ತಯಾರಾಗುತ್ತಿವೆ.