ಡಂಪಿಂಗ್ ಸಾಕು, ಮಂಡೂರು ಗ್ರಾಮ ಉಳಿಸಬೇಕು
ಹೊಸಕೋಟೆ ಬಳಿಯಿರುವ ಮಂಡೂರು ಗ್ರಾಮದಿಂದ ಬೆಂಗಳೂರಿನವರೆಗೆ ಸುಮಾರು 200ಕ್ಕೂ ಹೆಚ್ಚು ಸಾಫ್ಟ್ವೇರ್ ಇಂಜಿನಿಯರುಗಳು, ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿರುವ ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಕಾಲ್ನಡಿಗೆ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಲೋಕಸತ್ತಾ ಹೇಳಿದೆ.
ಈ ಅಭಿಯಾನದಲ್ಲಿ ಘನ ತ್ಯಾಜ್ಯ ನಿರ್ವಹಣಾ ತಜ್ಞೆ ಡಾ. ಮೀನಾಕ್ಷಿ ಭರತ್, ಯುವ ರಾಜಕಾರಣಿ ಶಾಂತಲಾ ದಾಮ್ಲೆ, ಎನ್.ಎಸ್. ರಮಾಕಾಂತ್ ಮುಂತಾದವರು ಕೂಡ ಪಾಲ್ಗೊಳ್ಳುತ್ತಿದ್ದಾರೆ. ಪ್ರತಿಭಟನೆ ಮಾಡುವುದರ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವೂ ಈ ಅಭಿಯಾನದಲ್ಲಿದೆ.
ಪ್ರತಿದಿನ 200ಕ್ಕೂ ಹೆಚ್ಚು ಟ್ರಕ್ಕುಗಳು ತ್ಯಾಜ್ಯವನ್ನು ಮಂಡೂರು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸುರಿಯುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮಂಡೂರು ಗ್ರಾಮ ಪಂಚಾಯತ್ ಮೇಲೆ ಬಿಬಿಎಂಪಿ ಸವಾರಿ ಮಾಡುವಂತಿಲ್ಲ ಎಂದು ಈ ಅಭಿಯಾನವನ್ನು ಆಯೋಜಿಸಿರುವ ಶ್ರೀನಿವಾಸ್ ಅಲವಳ್ಳಿ ಅವರು ಹೇಳಿದ್ದಾರೆ.
ನಮ್ಮ ನಮ್ಮ ಮನೆಯಲ್ಲಿಯೇ ಕಸವನ್ನು ಹಸಿ ಮತ್ತು ಒಣ ತ್ಯಾಜ್ಯಗಳಾಗಿ ವಿಂಗಡಿಸಿದರೆ ಒಂದೇ ಕಡೆಯಲ್ಲಿ ಇಷ್ಟೊಂದು ಪ್ರಮಾಣದ ಕಸ ಹಾಕುವ ಪ್ರಮೇಯವೇ ಬರುವುದಿಲ್ಲ. ಆದರೆ, ಇದರ ಬಗ್ಗೆ ತಿಳಿವಳಿಕೆ ಇದೆಯೋ ಇಲ್ಲವೋ ಸಾರ್ವಜನಿಕರು ವಿಂಗಡನೆಯ ಬಗ್ಗೆ ಆಸಕ್ತಿ ತೋರಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸಿದೆ.
ಇನ್ನು ಅಪಾರ್ಟ್ಮೆಂಟುಗಳಲ್ಲಿ ಕಸದ ಗುಡ್ಡೆ ರಾಶಿ ಹಾಕಿಕೊಂಡು ಸಮಸ್ಯೆಗಳ ಸರಮಾಲೆಯನ್ನೇ ತಂದಿದೆ. ಬಿಬಿಎಂಪಿಯವರು ಕಸ ತೆಗೆಯಲು ಬರುವುದಿಲ್ಲ, ಅಪಾರ್ಟ್ಮೆಂಟ್ ಜನ ಕಸ ವಿಂಗಡನೆ ಮಾಡುವುದಿಲ್ಲ. ಆದರೆ, ಅಶ್ವಿನ್ ಮಹೇಶ್ ಅವರ ಅಪಾರ್ಟ್ಮೆಂಟಿನಲ್ಲಿಯೇ ಒಂದು ತಂಡವನ್ನು ಕಟ್ಟಿ, ಜನರಲ್ಲಿ ತಿಳಿವಳಿಕೆ ತಂದು, ಕಸವನ್ನು ವೈಜ್ಞಾನಿಕವಾಗಿ ವಿಂಗಡನೆ ಮಾಡಿ ವಿಲೇವಾರಿ ಮಾಡಿದ್ದಲ್ಲದೆ, ಆರು ತಿಂಗಳಲ್ಲಿ 40 ಸಾವಿರ ರು. ಉಳಿಸಿದ್ದಾರೆ.