ದೇವೇಗೌಡ್ರು ಬ್ರಾಹ್ಮಣ ದ್ವೇಷಿಯಲ್ಲ, ಹೆಗ್ಡೆ ಫ್ರೆಂಡ್
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಗುಂಡೂರಾವ್ ಹಾಗೂ ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಸ್ಮರಣಾರ್ಥ ಭಾನುವಾರ ಸಂಜೆ ಆಚಾರ್ಯತ್ರಯ ಸೇವಾ ಪ್ರತಿಷ್ಠಾನ ಆಯೋಜಿಸಿದ ಕಾರ್ಯಕ್ರಮದಲ್ಲಿ ವೈಎಸ್ ವಿ ದತ್ತಾ ಪಾಲ್ಗೊಂಡಿದ್ದರು.
ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡ ನಡುವೆ ವೈಮನಸ್ಯ ಉಂಟಾಗಿದ್ದು ಕರ್ನಾಟಕ ರಾಜಕೀಯದಲ್ಲಿ ಗುರುತರ ಬದಲಾವಣೆಗೆ ಕಾರಣವಾಯಿತು ಎಂಬ ಅಭಿಪ್ರಾಯ ಎಲ್ಲೆಡೆ ಇದೆ. ಆದರೆ, ರಾಮಕೃಷ್ಣ ಹೆಗಡೆ ಅವರ ಜೊತೆ ದೇವೇಗೌಡರಿಗೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದವೇ ಹೊರತೂ ವೈಯಕ್ತಿಕ ದ್ವೇಷ ಇರಲಿಲ್ಲ ಎಂದು ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ದೇವೇಗೌಡ ಅವರ ಬಾಂಧವ್ಯದ ಬಗ್ಗೆ ದೇವೇಗೌಡರು ನೀಡಿದ್ದ ಪತ್ರವನ್ನು ವೈಎಸ್ ವಿ ದತ್ತಾ ಅವರು ಈ ಕಾರ್ಯಕ್ರಮದಲ್ಲಿ ಓದಿದರು, ಪತ್ರದ ಸಾರಾಂಶ ಇಂತಿದೆ:
ರಾಮಕೃಷ್ಣ ಹೆಗಡೆ ಮತ್ತು ನನ್ನ ನಡುವೆ ರಾಜಕೀಯ ಭಿನಾಭಿಪ್ರಾಯಗಳಿತ್ತು ನಿಜ. ಅದರ ಬಗ್ಗೆ ಮುಕ್ತವಾಗಿ ಚರ್ಚಿಸಲು ನಾನು ಸದಾ ಸಿದ್ಧ. ರಾಜಕೀಯ ವಿಷಯವಾಗಿ ನಾನು ಹಾಗೂ ಹೆಗಡೆ ಮುಕ್ತವಾಗಿ ಚರ್ಚಿಸುತ್ತಿದ್ದೆವು.
ನಾನು ಎಂದಿಗೂ ರಾಮಕೃಷ್ಣ ಹೆಗಡೆ ಅವರನ್ನು ವೈಯಕ್ತಿಕವಾಗಿ ದ್ವೇಷಿಸಿಲ್ಲ. ದ್ವೇಷ ಮಾಡುವ ಆಲೋಚನೆಯೂ ಬರಲಿಲ್ಲ. ಆದರೆ, ನಮ್ಮಿಬ್ಬರ ನಡುವಿನ ಅಂತರ ಹೆಚ್ಚಲು ಅನೇಕರು ಕಾರಣರಾದರು.
ನಮ್ಮಿಬ್ಬರ ನಡುವಿನ ಬಾಂಧವ್ಯದ ಬಗ್ಗೆ ಬಹಳಷ್ಟು ಜನರು ತಪ್ಪಾಗಿ ಭಾವಿಸಿದರು. ಈಗಲೂ ಅನೇಕರಿಗೆ ಇದೇ ಭಾವನೆ ಇದೆ. ನಾನು ಬ್ರಾಹ್ಮಣ ಸಮುದಾಯದ ಬಗ್ಗೆ ದ್ವೇಷ ಇಟ್ಟುಕೊಂಡಿಲ್ಲ. ಬ್ರಾಹ್ಮಣ ಸಮುದಾಯದ ಬಗ್ಗೆ ಅಪಾರ ಗೌರವವಿದೆ ಎಂದು ದೇವೇಗೌಡರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಬಿಜೆಪಿ ಶಾಸಕ ಅಶ್ವಥನಾರಾಯಣ: ಪಿವಿ ನರಸಿಂಹ ರಾವ್ ಅವರ ಜ್ಞಾನ ಶಕ್ತಿಗೆ ತಲೆಬಾಗಬೇಕಿದೆ.ಅವರ ದೂರದೃಷ್ಟಿಯ ಪರಿಣಾಮ ಇಂದು ದೇಶ ಆರ್ಥಿಕ ಸಬಲೀಕರಣ ಕಂಡಿದೆ. ಜಾಗತೀಕರಣ ಸಾಧ್ಯವಾಗಿದೆ ಎಂದರು.
ಬ್ರಾಹ್ಮಣ ಸಮುದಾಯದ ನಾಯಕರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್, ಜೆಡಿಎಸ್ ನಗರಾಧ್ಯಕ್ಷ ಎಂಎಸ್ ನಾರಾಯಣ ರಾವ್, ಬಿಜೆಪಿ ಶಾಸಕ ಸಿಎನ್ ಅಶ್ವಥ್ ನಾರಾಯಣ, ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ಪಾಲ್ಗೊಂಡಿದ್ದು ವಿಶೇಷ.
ಈ ಕಾರ್ಯಕ್ರಮದಲ್ಲಿ ಬಹುಭಾಷಾ ವಿದ್ವಾಂಸ ಅರೈಯರ್ ಶ್ರೀರಾಮ ಶರ್ಮ ಅವರನ್ನು ಸನ್ಮಾನಿಸಲಾಯಿತು. ಬಿಎಸ್ ಪದ್ಮನಾಭಚಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.