ಮಡೆಸ್ನಾನದಲ್ಲಿ ಬ್ರಾಹ್ಮಣರು ಕೂಡಾ ಇದ್ರು ಕಣ್ರೀ
ಚಂಪಾ ಷಷ್ಠಿಯ ಜಾತ್ರೆಯ ಚೌತಿ, ಪಂಚಮಿ ಹಾಗೂ ಷಷ್ಠಿಯಂದು ಮಧ್ಯಾಹ್ನ ವೇಳೆ ಮಡೆಸ್ನಾನ ನಡೆಸಲಾಗುತ್ತೆ. ಈ ಹಿಂದಿನಂತೆ ಭಾನುವಾರ(ಡಿ.16) ಕೂಡಾ ಕ್ಷೇತ್ರದ ಹೋರಾಂಗಣದಲ್ಲಿ ಮಡೆಸ್ನಾನ ಸಾಂಗವಾಗಿ ನರೆವೇರಿತು.
ದೇವಳದ ಹೊರಾಂಗಣದಲ್ಲಿ ಮಹಾಪೂಜೆಯ ಬಳಿಕ ಮಧ್ಯಾಹ್ನ 1.30ಕ್ಕೆ ಬ್ರಾಹ್ಮಣರಿಗೆ ನೈವೇದ್ಯ ಪ್ರಸಾದ ನೀಡಲಾಯಿತು. ಅವರ ಭೋಜನದ ಬಳಿಕ ಸುಮಾರು 350ಕ್ಕೂ ಮಿಕ್ಕಿದ ಭಕ್ತರು ಅವರು ಉಂಡ ಎಂಜಲೆಲೆಯ ಮೇಲೆ ಉರುಳುವ ಮೂಲಕ ಮಡೆಸ್ನಾನದ ಸೇವೆ ಸಲ್ಲಿಸಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಮಡೆ ಸ್ನಾನವು ಈ ಹಿಂದಿನಂತೆ ಯಥಾಸ್ಥಿತಿಯಾಗಿ ಮುಂದು ವರೆಯಿತು. ಯಾವುದೇ ಅಹಿತಕರ ಘಟನೆ ನಡೆಯ ದಂತೆ 5 ಮಂದಿ ಡಿವೈಎಸ್ಪಿ ಸಹಿತ 300ಕ್ಕೂ ಅಧಿಕ ಪೊಲೀಸರು, 100 ಕ್ಕೂ ಹೆಚ್ಚು ಹೋಂ ಗಾರ್ಡ್ಸ್ ಭದ್ರತೆ ಒದಗಿಸಲಾಗಿತ್ತು.
ಕಾಶಿಕಟ್ಟೆಯಿಂದ ದೇವಳದ ಎಲ್ಲಾ ಭಾಗಗಳಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿತ್ತು. ಪುತ್ತೂರು ಸಹಾಯಕ ಆಯುಕ್ತ ಪ್ರಸನ್ನ, ಸುಳ್ಯ ತಹಶೀಲ್ದಾರ್ ವೈದ್ಯನಾಥ್ ಸ್ಥಳದಲ್ಲಿ ಮೊಕ್ಕಾ ಹೂಡಿದ್ದರು.
ಯತಿಗಳಿಗೆ ದೇವಳದಲ್ಲಿ ಭಿಕ್ಷೆ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಷಷ್ಠಿ ಜಾತ್ರೆಯ ಪರ್ವ ಕಾರ್ಯದಲ್ಲಿ ಇದೇ ಮೊದಲ ಬಾರಿಗೆ ಸಂಪುಟ ಶ್ರೀ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಜಿಯವರಿಗೆ ಯತಿ ಭಿಕ್ಷೆ, ಪಾದಪೂಜೆ ನಡೆಯಿತು.
ಪ್ರಧಾನ ಅರ್ಚಕರು ಕೇಶವಜೋಗಿತ್ತಾಯ, ಅರ್ಚಕರಾದ ಸೀತರಾಮ ಎಡಪಡಿತ್ತಾಯ, ರಾಮಕೃಷ್ಣ ಭಟ್, ಸತ್ಯ ನಾರಾಯಣ, ರಾಜೇಶ್ರವರ ಉಪಸ್ಥಿತಿಯಲ್ಲಿ ಮಧುಸೂದನ ಕಲ್ಲೂರಾಯ ಮತ್ತು ಸರ್ವೇಶ್ವರ ಕೇಕುಣ್ಣಾಯ ಭಿಕ್ಷಾ ವಿಧಿವಿಧಾನ ನೆರವೇರಿಸಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ದಿನನಿತ್ಯ ಸಾವಿರಾರು ಭಕ್ತರು ಬರುತ್ತಿದ್ದು, ಬಂದ ಎಲ್ಲರಿಗೂ ಶ್ರೀ ಕ್ಷೇತ್ರದಿಂದ ಅನ್ನದಾನ ಮಾಡಲಾಗುತ್ತದೆ. ಚಂಪಾಷಷ್ಠಿ ಜಾತ್ರೋತ್ಸದ ಪ್ರಯುಕ್ತ ಸಂಪುಟ ನರಸಿಂಹ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಗೌರವಿಸಬೇಕೆಂದು ಸ್ವ ಇಚ್ಛೆಯಿಂದ ದೇವಳದ ಆಡಳಿತ ಮಂಡಳಿಯು ಅವರಿಗೆ ಯತಿ ಭಿಕ್ಷೆ ನೀಡಲು ತೀರ್ಮಾನಿಸಲಾಗಿದೆ.
ಚೌತಿಯ ದಿನವಾದ ಭಾನುವಾರ (ಡಿ.16) ದಂದು ಭಿಕ್ಷೆ ನೀಡಿ ಗೌರವಿಸಿದ್ದೇವೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ ಹೇಳಿದರು.
ಸ್ನಾನವೆಂದರೆ ಶುಚಿಯಾಗುವುದು ಅಂದರೆ ಎಂಜಲೆಯ ಮೇಲೆ ಉರುಳಾಡಿ ಎಂಜಲು ಮೆತ್ತಿ ಕೊಂಡರೇ ಅದು ಸ್ನಾನ ಹೇಗಾಗುತ್ತದೆ ? ಹಾಗಾಗಿ ಅದು ಮಡೆಯೇ ವಿನಾಃ ಸ್ನಾನ/ವಿಮೋಚನೆ ಆಗಲಾರದು. ಆದರೂ ಸಾಕಷ್ಟು ತಿಳುವಳಿಕೆಯುಳ್ಳ ಭಕ್ತರಿಗೆ ಮಡೆಸ್ನಾನ ಅಸಹ್ಯ ಅವಮಾನಕರವಲ್ಲದೆ, ಅನಾಗರಿಕ ಆಚರಣೆಯಂದು ತಿಳಿಯದಿರುವುದು ವಿಷಾದನೀಯ.
ಉಂಡವರು ಶ್ರೇಷ್ಠರು ಅವರ ಎಂಜಲೆಯ ಮೇಲೆ ಸೇವೆಯೆಂದು ಉರುಳಾಡುವವರು ಕನಿಷ್ಟರು ಎಂಬ ಭಾವನೆ ಮಾಡುವುದಿಲ್ಲವೇ? ಎಂದು ಪ್ರಗತಿಪರರು ಪ್ರಶ್ನಿಸಿ, ಈ ಮುಂಚೆ ಪ್ರತಿಭಟನೆ ನಡೆಸಿದ್ದರು. ಅದರೆ, ಭಾನುವಾರದಂದು ಯಾವ ಪ್ರಗತಿಪರರು, ದಲಿತ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿಲ್ಲ ಎಂದು ದೇಗುಲದ ವ್ಯವಸ್ಥಾಪಕ ಸದಸ್ಯ ಎಚ್ ಎಂ ಕಾಳೆ ಹೇಳಿದ್ದಾರೆ.