ಈಶ್ವರಪ್ಪ, ಸೋಮಶೇಖರ ವಿರುದ್ಧ ಲೋಕಾಯುಕ್ತ ತನಿಖೆ
ಸೋಮಶೇಖರ ರೆಡ್ಡಿ ಜೊತೆ 8 ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಬೇಕೆಂದು ಬೆಂಗಳೂರು ನಗರ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆದೇಶಿಸಿದೆ. ವರದಿಯನ್ನು ಜನವರಿ 28ರೊಳಗೆ ಸಲ್ಲಿಸಬೇಕೆಂದೂ ಆದೇಶ ನೀಡಿದೆ.
ಪಿ. ನಾಗರಾಜು ಎಂಬುವವರು ಕೆಎಂಎಫ್ನಲ್ಲಿ ಭಾರೀ ಮೇವು ಹಗರಣ ನಡೆದಿದೆ ಎಂದು ದೂರು ಸಲ್ಲಿಸಿದ್ದರು. ಅವರು ಹೇಳುತ್ತಿರುವುದೇನೆಂದರೆ, ಹತ್ತಿ ಬೀಜದ ಹಿಂಡಿಯನ್ನು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆ ಇದ್ದಾಗ ಖರೀದಿಸಿದೆ ಬೆಲೆ ಜಾಸ್ತಿಯಾದಾಗ ಖರೀದಿಸಿ ಅಧ್ಯಕ್ಷರು ಮತ್ತು ಅಧಿಕಾರಿಗಳು 31 ಕೋಟಿ ರು.ನಷ್ಟು ಲಾಭ ಮಾಡಿಕೊಂಡಿದ್ದಾರೆ.
ಫೆಬ್ರವರಿಯಲ್ಲಿ ಹತ್ತಿ ಬೀಜದ ಹಿಂಡಿ ಬೆಲೆ ಟನ್ಗೆ 12 ಸಾವಿರ ರು.ನಷ್ಟು ಇತ್ತು. ಆದರೆ, ಆಗ ಖರೀದಿಸಲು ಸೋಮಶೇಖರ ರೆಡ್ಡಿ ಮುಂದಾಗಲಿಲ್ಲ. ಆದರೆ, ಜುಲೈನಲ್ಲಿ ಹಿಂಡಿ ಬೆಲೆ ಟನ್ಗೆ 27 ಸಾವಿರ ರು. ಮುಟ್ಟಿದಾಗ ಖರೀದಿ ಮಾಡಿದ್ದಾರೆ. ಇದರಿಂದ ಕೆಎಂಎಫ್ಗೆ ಭಾರೀ ನಷ್ಟವಾಗಿದೆ.
ಅಲ್ಲದೆ, ಕೆಎಂಎಫ್ ಅನುಭವಿಸಿದ ನಷ್ಟದ ಹೊರೆಯನ್ನು ರೈತರ ತಲೆಯ ಮೇಲೆ ಹಾಕಲಾಗಿದೆ ಎಂದು ಆರೋಪಿಸಿ ಸಾವಿರಾರು ರೈತರು ಶನಿವಾರ ಕೆಎಂಎಫ್ ಕಚೇರಿ ಎದಿರು ಧರಣಿ ನಡೆಸಿದರು. ರೈತರಿಗೆ ನೀಡುವ ಹಿಂಡಿಯ ದರವನ್ನು 2 ಸಾವಿರ ರು.ನಷ್ಟು ಜಾಸ್ತಿ ಮಾಡಲಾಗಿದೆ ಎಂದು ರಾಮನಗರ, ಕೋಲಾರ, ಮಂಡ್ಯ ಜಿಲ್ಲೆಯ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈಶ್ವರಪ್ಪ ವಿರುದ್ಧವೂ ತನಿಖೆ : ಅಧಿಕಾರ ದುರ್ಬಳಕೆ ಮಾಡಿಕೊಂಡು 50 ಕೋಟಿ ರು.ನಷ್ಟು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪ ಹೊತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ತನಿಖೆ ನಡೆಸಬೇಕೆಂದು ಶಿವಮೊಗ್ಗ ಜಿಲ್ಲಾ ಲೋಕಾಯುಕ್ತ ಕೋರ್ಟ್ ಶನಿವಾರ ಆದೇಶ ನೀಡಿದೆ.
ಈಶ್ವರಪ್ಪ ಮಾತ್ರವಲ್ಲ ಅವರ ಮಗ ಮತ್ತು ಸೊಸೆ ಕೂಡ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ವಿನೋದ್ ರಾಜ್ ಎಂಬ ವಕೀಲರು ಲೋಕಾಯುಕ್ತ ಕೋರ್ಟಿಗೆ ಖಾಸಗಿ ದೂರು ಸಲ್ಲಿಸಿದ್ದರು. ದೂರನ್ನು ಸ್ವೀಕರಿಸಿದ್ದ ಲೋಕಾಯುಕ್ತ ಕೋರ್ಟ್, ಫೆಬ್ರವರಿ ತಿಂಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ವಿನೋದ್ ಹೇಳುವುದೇನೆಂದರೆ, ಶಾಸಕರಾಗಿ ಈಶ್ವರಪ್ಪ ಆಯ್ಕೆಯಾದ ಮೇಲೆ ಶಿವಮೊಗ್ಗದ ಸುತ್ತಮುತ್ತ 23 ಪ್ರದೇಶಗಳಲ್ಲಿ ಅಕ್ರಮ ಆಸ್ತಿ ಮಾಡಿಕೊಂಡಿದ್ದಾರೆ. ಕೇವಲ 6 ವರ್ಷಗಳ ಅವಧಿಯಲ್ಲಿ ಅವರ ಆಸ್ತಿ 50 ಕೋಟಿ ರು.ಯನ್ನು ಮೀರಿದೆ. ಪತ್ರಕರ್ತೆ ನಾಗಲಕ್ಷ್ಮಿ ಎಂಬುವವರು ಕೂಡ ಬೆಂಗಳೂರು ಮತ್ತು ಭದ್ರಾವತಿಯಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿ, ಈಶ್ವರಪ್ಪ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡಬೇಕೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಪತ್ರ ಬರೆದಿದ್ದಾರೆ.