ಜೀ ಮುಖ್ಯಸ್ಥ ಸುಭಾಷ್ ಚಂದ್ರಗೆ ಸ್ವಲ್ಪ ರಿಲೀಫ್
ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.20 ತನಕ ಸುಭಾಷ್ ಚಂದ್ರ ಹಾಗೂ ಅವರ ಮಗ ಎಂಡಿ ಪುನೀತ್ ಗೋಯೆಂಕಾ ಅವರನ್ನು ಬಂಧಿಸದಂತೆ ಕೋರ್ಟ್ ಆದೇಶಿಸಿದೆ. ಡಿ.20 ರ ತನಕ ಮಧ್ಯಂತರ ಜಾಮೀನು ಪಡೆದಿರುತ್ತಾರೆ.ಡಿ.8 ಹಾಗೂ ಡಿ.9 ರಂದು ನಡೆದ ತನಿಖೆ ಇಬ್ಬರು ಸಂಪೂರ್ಣ ಸಹಕಾರ ನೀಡಿದ್ದಾರೆ. ಹೀಗಾಗಿ ಜಾಮೀನು ನೀಡಲಾಗಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾ. ರಾಜ್ ರಾಣಿ ಮಿತ್ರ ಹೇಳಿದ್ದಾರೆ.
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇಬ್ಬರು ಜೀ ನ್ಯೂಸ್ ನ ಹಿರಿಯ ಪತ್ರಕರ್ತರು ಸೇರಿದಂತೆ ಸುಭಾಷ್ ಚಂದ್ರ ಹಾಗು ಮಗನ ಮೇಲೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಬುಧವಾರದಂದು ಭಾರಿ ಚರ್ಚೆಯಾದ ನಂತರ ಸುಭಾಷ್ ಚಂದ್ರ ಅವರು ಸುಳ್ಳು ಪರೀಕ್ಷೆ (ಮಂಪರು ಪರೀಕ್ಷೆ) ಒಳಪಡಲು ಸಿದ್ಧ ಎಂದು ಕೋರ್ಟಿಗೆ ಹೇಳಿದ್ದರು. ಅದರೆ, ಇಬ್ಬರು ಪತ್ರಕರ್ತರು ಇದಕ್ಕೆ ಒಪ್ಪಿರಲಿಲ್ಲ.
ಜೀ ನ್ಯೂಸ್ ಎಡಿಟರ್ ಗಳಾದ ಸುಧೀರ್ ಚೌಧುರಿ ಹಾಗೂ ಸಮೀರ್ ಅಹ್ಲುವಾಲಿಯಾ ಅವರು 100 ಕೋಟಿ ಡೀಲ್ ಪ್ರಕರಣದಲ್ಲಿ ಸುಳ್ಳು ಪರೀಕ್ಷೆಗೆ ಒಳಪಡಲು ಸಿದ್ಧರಿಲ್ಲ. ಬೇಕಾದರೆ ವಾಯ್ಸ್ ಸ್ಯಾಂಪಲ್ ನೀಡುತ್ತೇವೆ ಎಂದಿದ್ದರು. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೌರವ್ ರಾವ್ ಅವರು ಇಬ್ಬರಿಗೂ ಪ್ರೊಡಕ್ಷನ್ ವಾರೆಂಟ್ ನೀಡಿದ್ದಾರೆ.
ಸುಭಾಷ್ ಚಂದ್ರ ಅವರು ಪರೀಕ್ಷೆಗೆ ಒಳಪಡಲು ಸಿದ್ಧರಿದ್ದಾರೆ. ಅದರೆ, ಅವರ ಅರೋಗ್ಯ ಸರಿಯಿಲ್ಲ. ಹೀಗಾಗಿ, ಪರೀಕ್ಷೆಗೂ ಮುನ್ನ ಪರೀಕ್ಷಾ ವಿಧಾನದ ಬಗ್ಗೆ ಸಂಪೂರ್ಣ ಅಗತ್ಯ ಎಂದು ಚಂದ್ರ ಅವರು ಕೌನ್ಸಿಲ್ ವಿಜಯ್ ಅಗರವಾಲ್ ಕೋರ್ಟಿಗೆ ಕೇಳಿಕೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳಿಗೆ ಸುಳ್ಳು ಪರೀಕ್ಷೆ ಅಗತ್ಯವಿದೆ ಎಂದು ದೆಹಲಿಯ ಕ್ರೈಂ ಬ್ರ್ಯಾಂಚ್ ಪೊಲೀಸರು ಕೋರ್ಟಿನಲ್ಲಿ ಮನವಿ ಸಲ್ಲಿಸಿದ್ದರು.
ಜಿಂದಾಲ್ ಕಂಪನಿ ವಿರುದ್ಧ ಸುದ್ದಿ ಪ್ರಸಾರ ಮಾಡದಿರಲು ಜೀ ನ್ಯೂಸ್ ವರದಿಗಾರರು 100 ಕೋಟಿ ರು ಕೇಳಿದ್ದರು ಎಂದು ನವೀನ್ ಜಿಂದಾಲ್ ಆರೋಪಿಸಿದ್ದರು. ಜಿಂದಾಲ್ ಅವರ ಹೇಳಿಕೆ ಸುಳ್ಳು. ಇದರಿಂದ ನಮ್ಮ ಜೀ ಟಿವಿ ಬ್ರ್ಯಾಂಡ್ ಗೆ ಹೊಡೆತ ಬಿದ್ದಿದೆ ಎಂದು ಹೇಳಿ ಜೀ ಸಮೂಹ ಸಂಸ್ಥೆ ಜಿಂದಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿತ್ತು.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಜಿಂದಾಲ್ ಕಂಪನಿ ವಿರುದ್ಧ ಸ್ಟಿಂಗ್ ಆಪರೇಷನ್ ಜೀ ಟಿವಿ ನಡೆಸಿತ್ತು. ಈ ವಿಡಿಯೋ ಪ್ರಸಾರವಾಗಬಾರದು ಎಂದರೆ ಕೋಟ್ಯಂತರ ರುಪಾಯಿ ನೀಡುವಂತೆ ಬೆದರಿಕೆ ಒಡ್ಡಿತ್ತು ಎಂದು ನವೀನ್ ಜಿಂದಾಲ್ ಆರೋಪಿಸಿದ್ದರು. ವಿಡಿಯೋದಲ್ಲಿ ಜೀ ನ್ಯೂಸ್ ವರದಿಗಾರ ಹಾಗೂ ಜಿಂದಾಲ್ ಸಂಸ್ಥೆ ಸಿಬ್ಬಂದಿ ಜೊತೆ ಡೀಲ್ ಮಾಡುತ್ತಿರುವ ದೃಶ್ಯಗಳಿದೆ. ಅದರೆ, ನವೀನ್ ಜಿಂದಾಲ್ ಮಾಡಿದ ಆರೋಪಗಳನ್ನು ಜೀ ಟಿವಿ ಸಂಸ್ಥೆ ನಿರಾಕರಿಸಿತ್ತು.