ಕೆಜೆಪಿ ಪದ್ಮನಾಭಗೆ ಜೆಡಿಎಸ್ ನಿಂದ ಜೀವ ಬೆದರಿಕೆ
ಬೆಂಗಳೂರು, ಡಿ.14: ಕರ್ನಾಟಕ ಜನತಾ ಪಕ್ಷಕ್ಕೆ ಆರಂಭದಿಂದಲೂ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇದೆ. ಕೆಜೆಪಿ ಮುಖಂಡ ಪಕ್ಷ ಸ್ಥಾಪಕ ಪದ್ಮನಾಭ ಪ್ರಸನ್ನ ಅವರಿಗೆ ಜೆಡಿಎಸ್ ಮುಖಂಡರು ಕಿರುಕುಳ ಕೊಡಲು ಆರಂಭಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆಅವರಿಗೆ ಪದ್ಮನಾಭ ಪ್ರಸನ್ನ ಅವರು ದೂರು ನೀಡಿದ್ದಾರೆ ಎಂದು ಖಾಸಗಿ ಸುದ್ದಿ ವಾಹಿನಿ ವರದಿ ಮಾಡಿದೆ.
ಜೆಡಿಎಸ್ ನಾಯಕರು ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದಾರೆ. ಆದರೆ, ಇತ್ತೀಚೆಗೆ ಬೆದರಿಕೆ ಕರೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಹಿರಿಯ ಸಲಹೆ ಪಡೆದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದೇನೆ ಎಂದು ಪದ್ಮನಾಭ ಪ್ರಸನ್ನ ನವ ದೆಹಲಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಈ ನಡುವೆ ಇದರ ಬೆನ್ನಲ್ಲೇ ಕೆಜೆಪಿ ಉದಯದಿಂಡ ಜೆಡಿಎಸ್ ಪತನ. ಮುಂದಿನ ಎಲೆಕ್ಷನ್ ನಲ್ಲಿ ಜೆಡಿಎಸ್ ಸರ್ವನಾಶ, ಕೆಜೆಪಿಗೂ ಕಾಂಗ್ರೆಸ್ಸಿಗೂ ಸಂಬಂಧವಿಲ್ಲ ಎಂದು ಸಂಸದ ವಿಶ್ವನಾಥ್ ಅವರು ದೆಹಲಿಯಲ್ಲಿ ಹೇಳಿರುವುದು ಜೆಡಿಎಸ್ ಮುಖಂಡರನ್ನು ಸಾಕಷ್ಟು ಕೆರಳಿಸಿದೆ.
ಕೆಜೆಪಿಗೆ ಆರಂಭಿಕ ವಿಘ್ನಗಳ ಜೊತೆಗೆ ಕೆಜೆಪಿ ಒಡೆಯ ಯಾರು ಎಂಬ ಕುತೂಹಲ ಮೊದಲಿನಿಂದಲೂ ಜನರನ್ನು ಕಾಡಿದ್ದುಂಟು. ಪದ್ಮನಾಭ ಪ್ರಸನ್ನ ಕುಮಾರ್ ಎಂಬ ದಢೂತಿ ವ್ಯಕ್ತಿ ಧುತ್ತೆಂದು ರಾಜಕೀಯ ಅಂಗಳದಲ್ಲಿ ಸ್ಟಾರ್ ಆಗಿ ಕಾಣಿಸಿಕೊಂಡಿದ್ದು ಹಲವರ ಕಣ್ಣು ಕುಕ್ಕಿದ್ದು ಸಹಜ.
ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಂಡು ಇರುವ ಬದಲು ರಾಜಕೀಯವಾಗಿ ಉತ್ತುಂಗಕ್ಕೆ ಏರಿದ ಪದ್ಮನಾಭ ಅವರ ಮೇಲೆ ಮೋಸ ವಂಚನೆ ಪ್ರಕರಣಗಳು ಕೂಡಾ ಕೇಳಿ ಬಂದವು. ಆದರೆ, ಅದರ ಹಿಂದೆ ಜೆಡಿಎಸ್ ಕೈವಾಡ ಇದೆ ಎಂಬ ಶಂಕೆ ಇದ್ದರೂ ಯಾರ ಮೇಲೂ ಪದ್ಮನಾಭ ದೂರು ನೀಡಿರಲಿಲ್ಲ.
2011ರ ಏಪ್ರಿಲ್ 28ರಂದು ಪದ್ಮನಾಭ ಪ್ರಸನ್ನಕುಮಾರ್ ಎಂಬುವವರು ಕರ್ನಾಟಕ ಜನತಾ ಪಕ್ಷ (KJP) ಎಂಬ ಹೊಸ ಪಕ್ಷವನ್ನು ನೋಂದಾಯಿಸಿಕೊಂಡಿದ್ದಾರೆ. ತಮ್ಮ ಪಕ್ಷಕ್ಕೆ ಚಿಹ್ನೆಯಾಗಿ ಸೈಕಲ್ ಗುರುತನ್ನೂ ಪಡೆಯಲು ಯತ್ನಿಸಿದ್ದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಗ್ರಾಮೀಣ ಭಾಗದಲ್ಲಿ ಶಾಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸೈಕಲ್ ನೀಡಿದ್ದರಿಂದ ಜನಮಾನಸದಲ್ಲಿ 'ಯಡಿಯೂರಪ್ಪ ಸೈಕಲ್' ಇನ್ನೂ ಭದ್ರವಾಗಿ ಕುಳಿತಿದೆ. ಹಾಗಾಗಿ ಯಡಿಯೂರಪ್ಪನವರು ಸೈಕಲ್ ಗುರುತನ್ನೇ ಪಡೆಯಲು ಇಚ್ಛಿಸಿದ್ದರು.
ಡಿ.9ರಂದು ಕೆಜೆಪಿ ಉದಯವಾಗುವುದಕ್ಕೂ ಮುನ್ನ ಉಪಾಧ್ಯಕ್ಷರಾಗಿ ಪದ್ಮನಾಭ ಪ್ರಸನ್ನ, ಮಂಜುನಾಥ ಗೌಡ ಮತ್ತು ಶಶಿಕಲಾ ಅವರನ್ನು ಕೂಡ ನೇಮಿಸಲಾಗಿತ್ತು. ಪ್ರಧಾನ ಕಾರ್ಯದರ್ಶಿಯಾಗಿ ಎಂಎಲ್ ಸಿ ಲಕ್ಷ್ಮಿನಾರಾಯಣ ನೇಮಕವಾಗಿದ್ದರು.