ಬೆಂಗಳೂರಲ್ಲಿ ಅವಿವಾಹಿತನ ಕಾಮದಾಸೆಗೆ ಮಗು ಬಲಿ
ರಶ್ಮಿ (ಹೆಸರು ಬದಲಿಸಲಾಗಿದೆ) ಮೈಮೇಲೆಲ್ಲ 17 ಕಚ್ಚಿದ ಗಾಯಗಳಾಗಿದ್ದು, ತುಟಿ ಹರಿದಿದೆ. ಬನಶಂಕರಿಯ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಯಲ್ಲಿ ಮಗುವನ್ನು ದಾಖಲಿಸಲಾಗಿದ್ದು, ತನ್ನ ಮೇಲಾಗಿರುವ ದೌರ್ಜನ್ಯದಿಂದ ತುಂಬಾ ಕುಗ್ಗಿಹೋಗಿದೆ, ತೀವ್ರ ಮಾನಸಿಕ ಆಘಾತಕ್ಕೆ ತುತ್ತಾಗಿದೆ. ದೌರ್ಜನ್ಯ ನಡೆಸಿರುವ ದೊರೆಸ್ವಾಮಿಯನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಬಡಾವಣೆಯಲ್ಲಿ ವಾಸಿಸುತ್ತಿರುವ ರುದ್ರೇಶ್ ಮತ್ತು ರಾಧಾಳ ಮೊದಲ ಮಗುವೇ ರಶ್ಮಿ. ರುದ್ರೇಶ್ ಬೇಕರಿಯೊಂದರಲ್ಲಿ ವಾಸಿರುತ್ತಿದ್ದು, ಪಕ್ಕದ ಮನೆಯಲ್ಲಿರುವ ದುರುಳ ದೊರೆಸ್ವಾಮಿ ರುದ್ರೇಶ್ ಸ್ನೇಹ ಸಂಪಾದಿಸಿದ್ದ. ಬೆಂಗಳೂರಿನಲ್ಲಿ ಜೀವನ ಅಷ್ಟು ಸಲೀಸಾಗಿ ನಡೆಯದಿದ್ದರಿಂದ ದಂಪತಿಗಳು ಹಾಸನ ಜಿಲ್ಲೆಯ ಹಾರೋಹಳ್ಳಿಯ ತಮ್ಮ ಮನೆಯಲ್ಲಿ 9 ತಿಂಗಳ ಹಿಂದೆ ಸ್ಥಳಾಂತರಗೊಂಡಿದ್ದರು.
ರಶ್ಮಿ ಬಿದ್ದು ಕಾಲು ಮುರಿದುಕೊಂಡಿದ್ದರಿಂದ ಚಿಕಿತ್ಸೆಗಾಗಿ ಪಾಲಕರು ಓಡಾಡುತ್ತಿದ್ದರು. ಇದರ ಬಗ್ಗೆ ತಿಳಿದಿದ್ದ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿರುವ ದೊರೆಸ್ವಾಮಿ ಮಗುವಿಗೆ ತನ್ನ ಪರಿಚಯದ ಮೂಳೆತಜ್ಞರಿಂದ ಉಚಿತ ಚಿಕಿತ್ಸೆ ಕೊಡಿಸುವುದಾಗಿ ಹೇಳಿದ್ದ. ಅಲ್ಲದೆ, ರುದ್ರೇಶ್ಗೆ ಹೊಸ ಬೇಕರಿ ಆರಂಭಿಸಲು ಸಹಾಯ ಮಾಡುವುದಾಗಿ ವಾಗ್ದಾನವನ್ನೂ ನೀಡಿದ್ದ.
ದೊರೆಸ್ವಾಮಿಯ ಬಣ್ಣದ ಮಾತಿಗೆ ಮರುಳಾದ ರುದ್ರೇಶ್ ಮೂರು ದಿನಗಳ ಹಿಂದೆ ತನ್ನ ಮಗಳನ್ನು ದೊರೆಸ್ವಾಮಿ ಮನೆಗೆ ಕರೆದುಕೊಂಡು ಬಂದಿದ್ದ. ಕೆಲಸವಿಲ್ಲದ ರುದ್ರೇಶ್, ದೊರೆಸ್ವಾಮಿ ಹೇಳುತ್ತಿದ್ದ ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ ಕೆಲಸಗಳನ್ನೂ ಮಾಡುತ್ತಿದ್ದ. ಆ ದೌರ್ಭಾಗ್ಯದ ದಿನದಂದು ರಶ್ಮಿಯನ್ನು ದೊರೆಸ್ವಾಮಿ ಬಳಿಬಿಟ್ಟು ರುದ್ರೇಶ್ ಹೊಸೂರಿಗೆ ಹೋಗಿದ್ದಾನೆ.
ಮರಳಿ ಬಂದಾಗ ರಶ್ಮಿ ದೊರೆಸ್ವಾಮಿ ಬಳಿಯಿರಲಿಲ್ಲ. ತನಗೂ ಕೆಲಸವಿದ್ದಿದ್ದರಿಂದ ಸ್ನೇಹಿತನ ಬಳಿ ಬಿಟ್ಟಿದ್ದಾಗಿ ಹೇಳಿದ ದೊರೆಸ್ವಾಮಿ, ಮರುದಿನ ಹಾರೋಹಳ್ಳಿಗೆ ಮಗಳನ್ನು ಕರೆದುಕೊಂಡು ಬರುವುದಾಗಿ ನಂಬಿಸಿ ರುದ್ರೇಶ್ನನ್ನು ಮರಳಿ ಕಳಿಸಿದ್ದಾನೆ. ಎರಡು ದಿನವಾದರೂ ಮಗುವನ್ನು ಕರೆದುಕೊಂಡು ಬರದಿದ್ದರಿಂದ ವಿಚಾರಿಸಿದಾಗ, ನಾನೇನು ನಿನ್ನ ಮಗುವನ್ನು ಯಾರಿಗೂ ಮಾರುವುದಿಲ್ಲ ಎಂದೆಲ್ಲ ದೊರೆಸ್ವಾಮಿ ರೇಗಾಡಿದ್ದಾನೆ.
ಆದರೆ, ದೊರೆಸ್ವಾಮಿ ಮಾಡಿದ್ದೇನೆಂದರೆ, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ಪುಟ್ಟಮಗು ರಶ್ಮಿಯನ್ನು ಲೈಂಗಿಕವಾಗಿ ಹಿಂಸಿಸಿದ್ದಾನೆ. ದೇಹದ ಮೇಲೆಲ್ಲ ಕಚ್ಚಿ ಗಾಯಗೊಳಿಸಿದ್ದಾನೆ. ಮಗು ತೀವ್ರವಾಗಿ ಗಾಯಗೊಂಡು ಕಿರುಚಲು ಆರಂಭಿಸಿದಾಗ ಹೆದರಿದ ದೊರೆಸ್ವಾಮಿ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಗೆ ಕರೆತಂದಿದ್ದಾನೆ. ಆಸ್ಪತ್ರೆಯವರು ವಿಚಾರಿಸಿದಾಗ ಮಗು ಬಿದ್ದು ಗಾಯಗೊಂಡಿದೆ ಎಂದೆಲ್ಲ ಹೇಳಿದ್ದಾನೆ. ಅನುಮಾನಗೊಂಡು ಮತ್ತಷ್ಟು ವಿಚಾರಿಸಿದಾಗ ಅಲ್ಲಿಂದ ಪರಾರಿಯಾಗಿದ್ದಾನೆ.
ಆಸ್ಪತ್ರೆಯವರು ಕೂಡಲೆ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಗುವಿನ ಮೇಲೆ ಆದ ದೌರ್ಜನ್ಯದ ಬಗ್ಗೆ ತಿಳಿಸಿದ್ದಾರೆ. ಮಕ್ಕಳ ಸಹಾಯವಾಣಿ ಪಾಲಕರನ್ನು ಸಂಪರ್ಕಿಸಿ ಮಗುವಿನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ತಿಳಿಸಿದ್ದಾರೆ. ಕೂಡಗೆ ಬೆಂಗಳೂರಿಗೆ ಧಾವಿಸಿದ ರಾಧಾಗೆ ತನ್ನ ಪುಟ್ಟ ಮಗುವನ್ನು ಭಯಾನಕ ಸ್ಥಿತಿಯಲ್ಲಿ ನೋಡಿ ತಡೆಯಲಾರದೆ ಭೋರೆಂದು ಅತ್ತುಬಿಟ್ಟಿದ್ದಾಳೆ. ಇದನ್ನು ಕಂಡ ರಶ್ಮಿ ಮತ್ತಷ್ಟು ಆಘಾತಗೊಂಡು ಡಿಪ್ರೆಷನ್ನಿಗೆ ಜಾರಿದೆ.