ಅಣುವಿಷದಿಂದ ಕಂಗಾಲಾಗಿದ್ದ ಕೆಜಿಎಫ್ ಗೆ ಚಿನ್ನದಂತ ಸುದ್ದಿ
ಕೆಜಿಎಫ್, ಡಿ.14: ತಮಿಳನಾಡಿನ ಅಣುವಿದ್ಯುತ್ ವಿಷತ್ಯಾಜ್ಯ ನಮ್ಮ ಮೇಲೆ ಸುರೀತಾರಂತೆ ಎಂದು ಕಂಗಾಲಾಗಿದ್ದ ಕೋಲಾರದ ಮಂದಿಗೆ ಈಗ ಸಂತಸದ ಸುದ್ದಿಯೊಂದು ಸಿಕ್ಕಿದೆ. ಏನಪಾ ಅಂದರೆ ಪಾಳುಬಿದ್ದ ಕೆಜಿಎಫ್ ಚಿನ್ನದ ಗಣಿ ಪ್ರದೇಶದಲ್ಲಿ ಇನ್ನೂ ಬೇಕಾದಷ್ಟು ಚಿನ್ನ ಇರುವುದು ದೃಢಪಟ್ಟಿದೆ. ಬರಗೆಟ್ಟ ಕೋಲಾರ ಜಿಲ್ಲೆಯ ಜನರ ಬದುಕು ಇದರಿಂದ ಬಂಗಾರವಾಗಲಿ ಎಂಬ ಆಶಯ ವ್ಯಕ್ತವಾಗಿದೆ.
ಬಹುತೇಕ ಗಣಿ ಕಾರ್ಮಿಕರು ಗಣಿ ಸುರಂಗಗಳಲ್ಲಿ ಈಗಲೂ ಹೆಚ್ಚಿನ ಪ್ರಮಾಣದಲ್ಲಿ ಬಂಗಾರವಿದೆ, ಸರಕಾರ ಗಣಿ ಕೆಲಸ ಮತ್ತೆ ಆರಂಭಿಸಿದರೆ ದೇಶಕ್ಕೆ ಲಾಭದಾಯಕವಾಗಲಿದೆ ಎಂದು ಪ್ರತಿಪಾದಿಸುತ್ತಾ ಬಂದಿರುವ ಮಂದಿಗಂತೂ ಇದರಿಂದ ಆನೆಬಲ ಬಂದಂತಾಗಿದೆ.
ಕೋಲಾರದಲ್ಲಿನ್ನು ಚಿನ್ನದ ನಿಕ್ಷೇಪಗಳು ಇಲ್ಲವೆಂದೇ ಮುಚ್ಚಿಹಾಕಿದ್ದ ಗಣಿ ಪ್ರದೇಶಗಳಲ್ಲಿ ಇನ್ನೂ ಚಿನ್ನವಿರುವ ಸಾಧ್ಯತೆಗಳು ಹೆಚ್ಚಾಗಿವೆ. ಕೆಜಿಎಫ್ನ ಮಾರಿಕುಪ್ಪಂ ಹತ್ತಿರದ ಫ್ರಾಂಕಿಂಖೊ ಗಣಿ ಕಾರ್ಮಿಕರ ವಸತಿ ಕಾಲನಿಯಲ್ಲಿ ಬುಧವಾರ ಸಂಜೆ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯುವ ಸಂದರ್ಭದಲ್ಲಿ ಚಿನ್ನದ ನಿಕ್ಷೇಪಕ್ಕೆ ಸಂಬಂಧಿಸಿದ ಬಿಳಿ ಕಲ್ಲಿನ ಬಂಡೆ ಸಿಕ್ಕಿದ್ದು, ಇನ್ನೂ ಚಿನ್ನ ಇರುವುದಕ್ಕೆ ರೆಕ್ಕೆಪುಕ್ಕ ಬಂದಿದೆ.
ಕೇಂದ್ರ ಸರಕಾರದ ಆದೇಶದನ್ವಯ ಗಣಿ ವಸತಿ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಐದು ಕೊಳವೆ ಬಾವಿಗಳನ್ನು ಕೊರೆಯಲು ಮಂಜೂರಾತಿ ನೀಡಿದ ಹಿನ್ನೆಲೆಯಲ್ಲಿ ಕೊಳವೆ ಬಾವಿ ಕೊರೆಸಲಾಗುತ್ತಿದೆ. ಅದರಂತೆ ಮಾರಿಕುಪ್ಪಂ ಬಳಿ ಸುಮಾರು 350 ಅಡಿ ಆಳದವರೆಗೆ ಬೋರ್ ಕೊರೆದ ಮೇಲೆ ದಿಢೀರನೆ ಬಿಳಿ ಕಲ್ಲುಗಳು ಕಾಣಿಸಿಕೊಂಡಿವೆ.
ಬಂಗಾರಕ್ಕೂ ಕ್ವಾರಿಸ್ ಬಂಡೆಗೂ ಸಂಬಂಧವಿದೆ. ಎಲ್ಲೆಲ್ಲಿ ಕ್ವಾರಿಸ್ ಇರುವುದೋ ಅಲ್ಲಿ ಖಂಡಿತವಾಗಿ ಬಂಗಾರ ಇರುತ್ತದೆ. ಇದನ್ನು ದೃಢಪಡಿಸಿಕೊಳ್ಳಲು ಈ ಕ್ವಾರಿಸ್ ಕಲ್ಲನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಸದ್ಯಕ್ಕೆ bore well ಕೊರೆತ ಸ್ಥಗಿತಗೊಳಿಸಲಾಗಿದೆ ಎಂದು BGML ಪ್ರಧಾನ ವ್ಯವಸ್ಥಾಪಕ ಸಿ ನಾರಾಯಣ್ ಹೇಳಿದ್ದಾರೆ.
ಗಣಿ ಕಾರ್ಮಿಕರು ಹೇಳುವುದೇನು?: ನಿಜಕ್ಕೂ ಇದು interesting. ಏಕೆಂದರೆ ಗಣಿ ಪಾತಾಳದಲ್ಲಿ ಸುಳಿದಾಡುತ್ತಿದ್ದ ಗಣಿ ಕಾರ್ಮಿಕರಿಗೆ ಇದರ ಬಗ್ಗೆ ತುಸು ಹೆಚ್ಚೇ ಜ್ಞಾನವಿರುತ್ತದೆ. ಅದಕ್ಕೆ ಪುಷ್ಠ ನೀಡುವಂತೆ ಗಣಿ ಕಾರ್ಮಿಕ ಮಣಿ ಮಹತ್ವದ ವಿಷಯವೊಂದನ್ನು ಹಿರಹಾಕಿದ್ದಾರೆ. ಎನೆಂದರೆ ಗಣಿ ಒಳಗೆ ಕ್ವಾರಿಸ್ ಬಂಡೆ ಇರುವ ಕಡೆ ಕೆಲಸ ಮಾಡುವಂತೆ ಹಿರಿಯ ಅಧಿಕಾರಿಗಳು ಸೂಚಿಸುತ್ತಿದ್ದರು. ಆಗ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಸಿಗುತ್ತಿತ್ತು. ಹಾಗಾಗಿ ಖಂಡಿತವಾಗಿಯೂ ಚಿನ್ನ ಹಾಗೂ ಕ್ವಾರಿಸ್ ಬಂಡೆಗೆ ಸಂಬಂಧವಿದೆ ಎಂಬುದು ಅವರ ಅನುಭವದ ಮಾತು.