ಶಾಸಕರಾಗಲು ಮೀಸೆ ಬೆಳೆಸಿದ ಹುಡುಗರು
ಅತೀ ಚಿಕ್ಕ ವಯಸ್ಸಿನ ಶಾಸಕ ಎಂದೇ ಖ್ಯಾತಿ ಗಳಿಸಿರುವ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯ ಕೃಷ್ಣ ಹೇಳಿದ ಕಥೆಗೆ, ಮತ್ತೋರ್ವ ಯುವ ಶಾಸಕ ಸಂತೋಷ್ ಲಾಡ್ ದನಿಗೂಡಿಸಿ, ಮೀಸೆಗಾಗಿ ಉಲ್ಟಾ ಕೆರೆದುಕೊಂಡ ಕಥೆ ಹೇಳಿದರು.
27ನೇ ವಯಸ್ಸಿಗೆ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನಿಸಿದ ಪ್ರಿಯಕೃಷ್ಣ ಮೀಸೆ ಬಿಟ್ಟಿರಲಿಲ್ಲ. ತೀರಾ ಪೀಚು ಪೀಚು ಹುಡುಗ ಅಂತ ಜನ ವೋಟು ಹಾಕ್ದೇ ಹೋದ್ರೆ ಅಂತ ಅಪ್ಪ, ಕೃಷ್ಣಪ್ಪ ಮೀಸೆ ಬಿಡಲು ಹೇಳಿದರಂತೆ. ಇಷ್ಟ ಇಲ್ಲದಿದ್ರು ಮೀಸೆ ಬಿಟ್ಟೆ, ಟೀ ಕುಡಿಯುವಾಗ, ಮಜ್ಜಿಗೆ ಕುಡಿಯುವಾಗ ಭಾರಿ ಕಷ್ಟ ಆಗುತ್ತೆ ಅಂತ ಮೀಸೆ ಸವರಿಕೊಂಡ್ರು ಬೆಣ್ಣೆ ಕೃಷ್ಣ!
ಪಕ್ಕದಲ್ಲೇ ಕುಳಿತಿದ್ದ ಮತ್ತೊಬ್ಬ ಯುವ ಶಾಸಕ ಸಂತೋಷ್ ಲಾಡ್ (ಕಾಂಗ್ರೆಸ್ ಶಾಸಕ ಕಲಘಟಗಿ) ಕೂಡ ರಾಜಕೀಯಕ್ಕಾಗಿ ಮೀಸೆ ಬೆಳೆಸಿದ ದಿನ ನೆನಪಿಸಿಕೊಂಡ್ರು. ಬೇಗ ಬೇಗ ಮೀಸೆ, ಗಡ್ಡ ಬೆಳೆಯಲಿ ಅಂತ ಉಲ್ಟಾ ಕೆರೆದುಕೊಂಡು ಗಡ್ಡ ಬೆಳೆಸಿದ್ದಾಯ್ತು ಅಂತ ದಾಡಿ ಸವರುತ್ತಾ ನಕ್ಕರು ಲಾಡ್.
ಶಾಸಕರಾಗಲು ದುಡ್ಡಿದ್ದರೆ ಸಾಲದು, ಜನ ಮೆಚ್ಚುವಂತೆ ಮೀಸೆ ಗಡ್ಡವನ್ನು ಬೆಳೆಸಬೇಕು ಎಂದು ಇಬ್ಬರೂ ಒಪ್ಪಿಕೊಂಡರು. ಆಗಷ್ಟೇ ಬಂದ ದಾಡಿಧಾರಿ ಶಾಸಕ ಶ್ರೀರಾಮುಲು ಅವರು ದಟ್ಟವಾಗಿ ಬೆಳೆಸಿದ್ದ ದಾಡಿ ಸವರಿಕೊಂಡು ಮುಗುಳ್ನಕ್ಕರು.
ಇದು ಚಿಗುರು ಮೀಸೆ ಯುವ ಶಾಸಕರ ಕತೆಗಳಾದವು. ಇನ್ನು ಬಿಳಿ ಮೀಸೆ ಮಾವಂದಿರ ಕತೆಗಳನ್ನು ಇನ್ನೊಮ್ಮೆ ಹೇಳ್ತೇವೆ, ಎಲ್ಲೂ ಹೋಗ್ದೆ ಕಾಯ್ತಾ ಇರಿ, ಬೇಗ ಬರ್ತೀವಿ!