ಹಗರಣಗಳ 'ಸುವರ್ಣ' ಸೌಧದ ಮೇಲೆ ಸಿಎಂ ಉದಾಸಿ
ಲೋಕೋಪಯೋಗಿ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಯಾವುದೇ ಕಾಮಗಾರಿ ಮಾಡಿಲ್ಲ. ಸಚಿವ ಸಿಎಂ ಉದಾಸಿ ಹಾಗೂ ಅವರ ಪುತ್ರ ಸಂಸದ ಶಿವಕುಮಾರ್ ಉದಾಸಿ ಅವರು ಸುಮಾರು 10 ಸಾವಿರ ಕೋಟಿ ಅಕ್ರಮವಾಗಿ ಗಳಿಸಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ನಾಗರೀಕ ಹಕ್ಕು ಹೋರಾಟ ಸಮಿತಿಯ ಸದಸ್ಯ ದಿನೇಶ್ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ದಿನೇಶ್,ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಅನೇಕ ಕಾಮಗಾತಿಗಳಿಗೆ ಯಾವುದೇ ಟೆಂಡರ್ ಕರೆದಿಲ್ಲ. ಕಾಮಗಾರಿ ಕೂಡಾ ನಡೆದಿಲ್ಲ. ಆದರೆ, ಕಾಮಗಾರಿಗೆ ಮಂಜೂರಾದ ಹಣ ಮಾತ್ರ ಸಚಿವ ಉದಾಸಿ ಅವರ್ ಜೇಬು ತುಂಬಿಸಿದೆ.
ಕಾಮಗಾರಿ ಟೆಂಡರ್ ಕರೆಯಬೇಕಾದರೆ ಇ ಪ್ರೊಕ್ಯೂರ್ ಮೆಂಟ್ ಕರೆಯಬೇಕು. ಅದರೆ, ಆ ರೀತಿ ಮಾಡಿದರೆ ಸಚಿವರು ತಮಗೆ ಬೇಕಾದವರಿಗೆ ಗುತ್ತಿಗೆ ನೀಡಲು ಸಾಧ್ಯವಿಲ್ಲ. ಹೀಗಾಗಿ ಇ ಪ್ರೊಕ್ಯೂರ್ಮೆಂಟ್ ಕರೆಯದೆ ತಮಗೆ ಬೇಕಾದವರಿಗೆ ಗುತ್ತಿಗೆ ನೀಡುವ ಮೂಲಕ ಬಿಲ್ ಪಾಸ್ ಮಾಡಿ ಸಾಕಷ್ಟು ಹಣ ಲೂಟಿ ಮಾಡಿದ್ದಾರೆ ಎಂದು ದಿನೇಶ್ ಆರೋಪಿಸಿದ್ದಾರೆ.
ಬೆಂಗಳೂರು, ಹಾವೇರಿ, ರಾಮನಗರ, ಕೋಲಾರ ಮುಂತಾದೆಡೆ ಯಾವುದೇ ಕಾಮಗಾರಿ ನಡೆಸದೆ ಅಕ್ರಮ ಅವ್ಯವಹಾರದ ಮೂಲಕ ಹಣ ಗಳಿಸಿದ್ದಾರೆ.
ಸಚಿವ ಉದಾಸಿ ಅವರಿಗೆ ಪಿಡಬ್ಲ್ಯೂಡಿ ಕಾರ್ಯದರ್ಶಿ ಸದಾಶಿವ ಪಾಟೀಲ್, ಈ ಹಿಂದಿನ ಕಾರ್ಯದರ್ಶಿ ದೇವರಾಜ್, ಬೆಂಗಳೂರು ವಲಯದ ಸೂಪರಿಡೆಂಟ್ ಇಂಜಿನಿಯರ್ ಉದಯಶಂಕರ್ ಅವರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಉದಾಸಿ ಮೇಲೆ ಆರೋಪ ಇದೇ ಮೊದಲಲ್ಲ: ಬೆಳಗಾವಿಯಲ್ಲಿ ನಿರ್ಮಿಸಿರುವ ಸುವರ್ಣ ಸೌಧ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.
'ಬೆಳಗಾವಿಯಲ್ಲಿ ನಿರ್ಮಾಣ ಮಾಡುತ್ತಿರುವ ಸುವರ್ಣಸೌಧ ಕಾಮಗಾರಿಯ ಟೆಂಡರ್ ಮೊತ್ತವನ್ನು 236 ಕೋಟಿ ರು.ಗಳಿಂದ ಏಕಾಏಕಿ 500 ಕೋಟಿ ರೂಗಳಿಗೆ ಹೆಚ್ಚಿಸಲಾಗಿದೆ.
ಗುತ್ತಿಗೆದಾರರು 1 ಕೋಟಿ ರೂಪಾಯಿ ಕಾಮಗಾರಿಗೆ 10 ಲಕ್ಷ ರೂ ಮುಂಗಡ ಲಂಚ ನೀಡಿದರೆ ಟೆಂಡರ್ ಇಲ್ಲದೆಯೂ ಕಾಮಗಾರಿ ಮಂಜೂರಾಗುತ್ತದೆ. ರಾಮನಗರ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ನಡೆದ ಅವ್ಯವಹಾರ, 300 ಕೋಟಿ ರು ಗೋಲ್ ಮಾಲ್ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.
ಸುವರ್ಣಸೌಧ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಸಚಿವರೊಬ್ಬರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಸಚಿವ ನಿಜಕ್ಕೂ ಪ್ರಾಮಾಣಿಕರಿದ್ದರೆ ಸಿಬಿಐ ತನಿಖೆಗೆ ಸಿದ್ಧರಾಗಬೇಕು. ಅವರ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳು ನನ್ನ ಬಳಿ ಇದೆ. ಅಗತ್ಯಬಿದ್ದರೆ ಬಿಡುಗಡೆ ಮಾಡುತ್ತೇನೆ ಎಂದಿದ್ದರು.