ಯಡಿಯೂರಪ್ಪದು 80000 ಕೋಟಿ ಭೂಹಗರಣ: ಮೊಯ್ಲಿ
'ಹೈಕಮಾಂಡ್ ವಿಚಾರ ಏನೋ ಎಂತೋ? ಆದರೆ ತಮ್ಮ ತಿಳಿವಳಿಕೆಯ ಇತಿಮಿತಿಯಲ್ಲಿ' ಹೀಗೆ ಹೇಳಿರುವ ಕೇಂದ್ರ ಸಚಿವ ಮೊಯ್ಲಿ ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಕಾಲದಲ್ಲಿ 80 ಸಾವಿರ ಕೋಟಿ ರೂ. ಭೂಹಗರಣಗಳನ್ನು ನಡೆಸಿದ್ದಾರೆ ಎಂದು ಗಂಭಿರವಾಗಿ ಆರೋಪಿಸಿದ್ದಾರೆ.
ಮೊನ್ನೆ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹುಟ್ಟುಹಬ್ಬದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೊಯ್ಲಿ ಅವರು ಈ ಆರೋಪ ಮಾಡಿದ್ದಾರೆ.
ಆದರೆ ಈ ಭೂಹಗರಣಗಳ ಬೆನ್ನುಹತ್ತಿರುವ ಸಿಬಿಐನಿಂದ ಯಡಿಯೂರಪ್ಪ ಅವರನ್ನು ಪಾರುಮಾಡಲು ಹೈಕಮಾಂಡ್ ಮಟ್ಟದಲ್ಲಿ ಸೋನಿಯಾ ಗಾಂಧಿ 'ಕೈಜೋಡಿಸಿದ್ದಾರೆ' ಎಂಬ ವಿಚಾರ ಕರ್ನಾಟಕದಾದ್ಯಂತ ಸರಿದಾಡುತ್ತಿರುವಾಗ ಪಕ್ಷದ ಹಿರಿಯ ನಾಯಕರೊಬ್ಬರು ಈ ಆಪಾದನೆ ಮಾಡಿರುವುದು ಸೋಜಿಗವಾಗಿದೆ. ಮತ್ತೂ ಗಮನಾರ್ಹ ಸಂಗತಿಯೆಂದರೆ ಮೊದಲ ಬಾರಿಗೆ ಯಡಿಯೂರಪ್ಪ ಹೆಗಲಿಗೆ ಇಷ್ಟೊಂದು ದೊಡ್ಡ ಪ್ರಮಾಣದ ಆಪಾದನೆಯನ್ನು ಹೊರಿಸಲಾಗಿದೆ.
ಭೂ ಹಗರಣದಲ್ಲಿನ ಪಾಲನ್ನು ಹಂಚಿಕೊಳ್ಳುವ ವಿಷಯದಲ್ಲಿ ಬಿಜೆಪಿ ನಾಯಕರೊಂದಿಗೆ ಜಗಳವಾಡಿಕೊಂಡಿರುವ ಯಡಿಯೂರಪ್ಪ, ಇದೀಗ ಬಿಜೆಪಿಯಿಂದ ದೂರವಾಗಿ ಕೆಜೆಪಿ ಸ್ಥಾಪಿಸುತ್ತಿದ್ದಾರೆಯೆ ಹೊರತು, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದಲ್ಲ ಎಂದೂ ಅವರು ವ್ಯಂಗ್ಯವಾಡಿದ್ದಾರೆ.
ಸೋನಿಯಾ ಗಾಂಧಿ ಎಂದಿಗೂ ಅಧಿಕಾರದ ಬೆನ್ನತ್ತಿ ಹೋಗಿಲ್ಲ. ಎರಡು ಬಾರಿ ಪ್ರಧಾನಿಯಾಗುವ ಅವಕಾಶ ಅವರನ್ನು ಹುಡುಕಿಕೊಂಡು ಬಂದರೂ, ಅದನ್ನು ನಿರಾಕರಿಸಿ ಇತರರಿಗೆ ಅವಕಾಶ ಕಲ್ಪಿಸಿಕೊಟ್ಟವರು. ಅವರ ಆಶಯದಂತೆ ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೇರಲಿದೆ ಎಂದೂ ಮೊಯ್ಲಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.